ಸಮೃದ್ಧ ಭಾರತ ಸಂಕಲ್ಪ

ನವದೆಹಲಿ,ಆ.೧೫-ಸಮೃದ್ಧ ಭಾರತ ನಿರ್ಮಾಣ ಕೇಂದ್ರದ ಸಂಕಲ್ಪವಾಗಿದೆ, ಈ ನಿಟ್ಟಿನಲ್ಲಿ ಸಾಮೂಹಿಕ ಧ್ಯೇಯವಾಗಿ “ಸ್ಥಳೀಯರಿಗಾಗಿ ಧ್ವನಿ” ಮಂತ್ರ ಅಳವಡಿಸಿಕೊಳ್ಳುವಂತೆ ದೇಶವಾಸಿಗಳಿಗೆ ಮನವಿ ಮಾಡಿರುವ ಅವರು ಭಾರತ ಎಲ್ಲರದ್ದು ಹೀಗಾಗಿ ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಖರೀದಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಭಾಗಿದಾರರಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.


೧ ಲಕ್ಷ ಕೋಟಿ ರೂಪಾಯಿ ಮೊತ್ತದ ವಿಕಸಿತ ಭಾರತ್ ರೋಜ್‌ಗಾರ್ ಯೋಜನೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಉಪಕ್ರಮದಿಂದ ದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗಾವಕಾಶ ಸೃಷ್ಟಿಸುವ ಮತ್ತು ಆರ್ಥಿಕ ಬೆಳವಣಿಗೆ ಹೆಚ್ಚಿಸುವ ಗುರಿ ಹೊಂದಿದೆ ಎಂದು ಅವರು ಪ್ರಕಟಿಸಿದ್ದಾರೆ.


ದೆಹಲಿಯ ಕೆಂಪುಕೋಟೆಯ ಮೇಲೆ ೭೯ನೇ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ಸತತ ೧೨ನೇ ಬಾರಿಗೆ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದ ಅವರು ರಾಜಕೀಯವನ್ನು ಬದಿಗಿಟ್ಟು ಆತ್ಮನಿರ್ಭರ ಭಾರತ ನಿರ್ಮಿಸೋಣ ಎಂದು ಹೇಳಿದ್ದಾರೆ.


ಸ್ವಾಂತಂತ್ರೋತ್ಸವದ ಈ ದಿನ ರಾಜಕೀಯ ಸಂಬಂಧವನ್ನು ಪಕ್ಕಕಿಡೋಣ, ಈ ಕ್ಷಣ ದಿನ ಎಲ್ಲಾ ೧೪೦ ಕೋಟಿ ಭಾರತೀಯರಿಗೆ ಸೇರಿದ್ದು ಮತ್ತು ಇದನ್ನು ಏಕತೆ ಮತ್ತು ರಾಷ್ಟ್ರ ನಿರ್ಮಾಣದ ಸಮಯವೆಂದು ನೋಡಬೇಕಾಗಿದೆ, ಈ ಹಿನ್ನೆಲೆಯಲ್ಲಿ ಸ್ವಾವಲಂಭಿ ಭಾರತ ನಿರ್ಮಾಣಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದ್ದಾರೆ.
ಈ ಯೋಜನೆಯು ಎಲ್ಲಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ಹೆಚ್ಚಿನ ಬೆಳವಣಿಗೆಯ ಸಾಮರ್ಥ್ಯ ಹೊಂದಿರುವ ಕೈಗಾರಿಕೆಗಳಲ್ಲಿ ಉದ್ಯೋಗ ಸೃಷ್ಟಿಸುವತ್ತ ಗಮನಹರಿಸುತ್ತದೆ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.


ದೊಡ್ಡ ಯುವ ಯೋಜನೆ ಪ್ರಕಟಿಸಿದ್ದು ಮೊದಲ ಖಾಸಗಿ ವಲಯದ ಉದ್ಯೋಗ ಪಡೆಯವ ಯುವ ಸಮುದಾಯಕ್ಕೆ ಸರ್ಕಾರದಿಂದ ೧೫,೦೦೦ ರೂಪಾಪಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಘೋಷಿಸಿದ್ದಾರೆ.


ಅಸಂಖ್ಯಾತ “ಜನರ ತ್ಯಾಗಗಳಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿದೆ.ಈ ಬದ್ಧತೆಯೊಂದಿಗೆ, ಸ್ಥಳೀಯರಿಗಾಗಿ ಧ್ವನಿಯೊಂದಿಗೆ ಸಮೃದ್ಧ ಭಾರತ ನಿರ್ಮಸುವುದು ನಮ್ಮ ಸಂಕಲ್ಪವಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಪ್ರಭಾವಿಗಳು ನಾಗರಿಕರು ಸೇರಿದಂತೆ ಎಲ್ಲರೂ ಕೈಜೋಡಿಸಬೇಕಾಗಿದೆ, ಹೀಗಾಗಿ ಸ್ಥಳೀಯ ಉತ್ಪನ್ನಗಳ ಖರೀದಿಗೆ ಆದ್ಯತೆ ನೀಡಬೇಕಾಗಿದೆ ಎಂದು ಕರೆ ನೀಡಿದ್ದಾರೆ.

ಜಿಎಸ್‌ಟಿ ಸುಧಾರಣೆ
ದೇಶದಲ್ಲಿ ತೆರಿಗೆ ಹೊರೆ ಕಡಿಮೆ ಮಾಡಲು ದೀಪಾವಳಿ ಉಡುಗೊರೆಯಾಗಿ ಜಿಎಸ್‌ಟಿ ಸುಧಾರಣೆ ಜಾರಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಮಹತ್ವದ ಸರಕು ಮತ್ತು ಸೇವಾ ತೆರಿಗೆ ಸುಧಾರಣೆಗಳು ರಾಷ್ಟ್ರಕ್ಕೆ “ದೀಪಾವಳಿ ಉಡುಗೊರೆ” ಎಂದು ಕರೆದಿದ್ದಾರೆ, ಇದು ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ವ್ಯವಹಾರಗಳು ಮತ್ತು ನಾಗರಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.


ಕಳೆದ ಎಂಟು ವರ್ಷಗಳಲ್ಲಿ, ಜಿಎಸ್‌ಟಿಯಲ್ಲಿ ಪ್ರಮುಖ ಸುಧಾರಣೆ ಕೈಗೊಂಡಿದ್ದೇವೆ. ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ತರುತ್ತಿದ್ದೇವೆ. ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ” ಎಂದು ತಿಳಿಸಿದ್ದಾರೆ.


ಜೆಟ್ ಎಂಜಿನ್ ಅಭಿವೃದ್ಧಿ
ಭಾರತ ದೇಶೀಯ ಫೈಟರ್ ಜೆಟ್ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯತ್ತ ಇದು ನಿರ್ಣಾಯಕ ಹೆಜ್ಜೆಯಾಗಿದೆ ಎಂದಿದ್ದಾರೆ.


ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಭದ್ರತೆ ಬಲಪಡಿಸಲು ದೇಶದ ರಕ್ಷಣಾ ಉತ್ಪಾದನೆಯಲ್ಲಿ ತನ್ನ ಪ್ರಯತ್ನಗಳನ್ನು ವೇಗಗೊಳಿಸಬೇಕು ಎಂದು ಹೇಳಿದ್ದಾರೆ.

ರಾಜ್‌ಘಾಟ್‌ಗೆ ಭೇಟಿ:
ಇದಕ್ಕೂ ಮುನ್ನ, ಪ್ರಧಾನಿಯವರು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿದರು. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ಪೋಸ್ಟ್‌ನಲ್ಲಿ, ‘ವಿಕ್ಷಿತ್ ಭಾರತ’ ಗುರಿಯನ್ನು ಸಾಧಿಸಲು ದೇಶವಾಸಿಗಳು ಕೆಲಸ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.