ಚಿತ್ತಾಪುರ ತಾಲೂಕನ್ನು ಅಭಿವೃದ್ಧಿ ಮಾಡುವ ಮೂಲಕ ನಂ.೧ ಸ್ಥಾನಕ್ಕೆ ತಂದ ಕೀರ್ತಿ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲುತ್ತದೆ: ಕಮಕನೂರ

ಚಿತ್ತಾಪುರ: ಅ.೨೬:ರಾಜ್ಯದಲ್ಲಿ ಹಿಂದುಳಿದ ತಾಲೂಕನ್ನು ಅಭಿವೃದ್ಧಿ ಮಾಡುವ ಮೂಲಕ ನಂ.೧ ಸ್ಥಾನಕ್ಕೆ ತಂದ ಕೀರ್ತಿ ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.

ಪಟ್ಟಣದ ಒಳಾಂಗಣ ಕ್ರೀಡಾಂಗಣದಲ್ಲಿ ತಾಲೂಕ ಬ್ಯಾಡ್ಮಿಂಟನ್ ಅಸೋಸಿಯೇಷನ್, ಗುಲ್ಬರ್ಗ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಬೆಂಗಳೂರು ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಓಪನ ಡಬಲ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್-೨೦೨೫ ಮೆನ್ಸ್ ಮತ್ತು ಹುಮೆನ್ಸ್ ಮತ್ತು ೪೦+ಮೆನ್ಸ್ ಡಬಲ್ಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣದಲ್ಲಿ ಪ್ರಜಾ ಸೌಧ, ವಿದ್ಯಾರ್ಥಿ ವಸತಿ ನಿಲಯಗಳು, ಶಾಲಾ, ಕಾಲೇಜುಗಳು, ವಿವಿಧ ಸಮುದಾಯ ಭವನಗಳು, ಕ್ರೀಡಾಂಗಣ, ಆಸ್ಪತ್ರೆಗಳು, ಯುವಜನರ ಸಬಲೀಕರಣಕ್ಕೆ ಡಿಜಿಟಲ್ ಗ್ರಂಥಾಲಯ ಸೇರಿದಂತೆ ಪ್ರಮುಖ ರಸ್ತೆಗಳು ನಿರ್ಮಾಣ ಮಾಡುವ ಮೂಲಕ ಸಚಿವರು ಚಿತ್ತಾಪುರ ಕ್ಷೇತ್ರವನು ಅಭಿವೃದ್ಧಿಯಲ್ಲಿ ನಂ.೧ ಆಗಿ ಮಾಡಿದ್ದಾರೆ ಎಂದು ಹೇಳಿದರು.

ಕ್ರೀಡಾಂಗಣದ ವಿವಿಧ ಕಾಮಗಾರಿಗಳಿಗೆ ಈಗಾಗಲೇ ೧೧ ಲಕ್ಷ ಅನುದಾನ ನೀಡಿದ್ದೇನೆ ಅವಶ್ಯ ಇದ್ದರೆ ಒಳಾಂಗಣ ಕ್ರೀಡಾಂಗಣದಲ್ಲಿ ವಿದ್ಯುತ್ ವ್ಯವಸ್ಥೆಗೆ ಮತ್ತೇ ೫ ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರದಲ್ಲಿ ಕ್ರೀಡಾಪಟುಗಳಿಗೆ ಅವಶ್ಯವಿದ್ದ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಿದ್ದರಿಂದ ಇಲ್ಲಿ ನಿರಂತರ ಕ್ರೀಡಾ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದ ಕ್ರೀಡಾಪಟುಗಳ ಸಂಖ್ಯೆ ಹೆಚ್ಚುತ್ತಿದೆ ಹಾಗೂ ಯುವಕ ಯುವತಿಯರಲ್ಲಿ ಕ್ರೀಡಾ ಆಸಕ್ತಿ ಬೆಳೆಯುತ್ತಿದೆ ಎಂದು ಹೇಳಿದರು. ಬ್ಯಾಡ್ಮಿಂಟನ್ ಅಸೋಸಿಯೇಷನ್ ಅವರು ಒಳಾಂಗಣ ಕ್ರೀಡಾಂಗಣವನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಣೆ ಮಾಡಿದ್ದರಿಂದ ಸ್ವಚ್ಛ ಹಾಗೂ ಸುಂದರವಾಗಿ ಕಾಣುತ್ತಿದೆ ಎಂದರು.
ಕ್ರೀಡಾಪಟುಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಉತ್ತಮ ಆರೋಗ್ಯವನ್ನು ಹಾಳು ಮೋಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಬ್ಯಾಡ್ಮಿಂಟನ್ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಯೋಗೇಶ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಶಿವರೆಡ್ಡಿ ಪಾಲಪ್, ಎಸ್.ಎಸ್.ಕೆ ಶಾಲೆಯ ಕಾರ್ಯದರ್ಶಿ ರವಿ ಕುಲಕರ್ಣಿ, ಪುರಸಭೆ ಸದಸ್ಯ ಶಿವರಾಜ್ ಪಾಳೇದ್, ಜಿಲ್ಲಾ ಕ್ರೀಡಾಂಗಣ ಅಧಿಕಾರಿ ಸಂಜೀವ ಬಾಂಡೆ, ಕಾಂಗ್ರೆಸ್ ಮುಖಂಡ ಶರಣಪ್ಪ ನಾಟೀಕಾರ, ಕರಣಕುಮಾರ್ ಅಲ್ಲೂರ,
ಅಸೋಸಿಯೇಷನ್ ಪದಾಧಿಕಾರಿಗಳಾದ ಸಂತೋಷ ಕಲಾಲ್, ಶ್ರೀನಿವಾಸ ಪೇಂದು, ಖದೀರ್ ಪಾಶಾ, ರೋಹಿತ್ ಚವ್ಹಾಣ, ಲಖನಸಿಂಗ್ ರಜಪುತ್, ರಾಜಶೇಖರ್ ಬಳ್ಳಾ, ಗುರುಲಿಂಗಯ್ಯ ಸ್ವಾಮಿ, ಚಂದ್ರಶೇಖರ ಉಟಗೂರ, ವಿಜಯಕುಮಾರ್ ಗಡ್ಡಿಮನಿ, ವೀರಭದ್ರಪ್ಪ ಗುರುಮಠಕಲ್, ದೇವಿಂದ್ರಪ್ಪ ದೊರೆ ಸೇರಿದಂತೆ ಇತರರು ಇದ್ದರು. ಕಾರ್ಯದರ್ಶಿ ಬಾಬು ಕಾಶಿ ನಿರೂಪಿಸಿದರು.


“ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಿದ್ದರಿಂದ ಕ್ರೀಡಾ ಚಟುವಟಿಕೆಗಳು ನಡೆಯುತ್ತಿವೆ. ಇಲ್ಲಿವರೆಗೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ಮಾಡಲಾಗಿದೆ. ಪ್ರಸ್ತುತ ಪಂದ್ಯಾವಳಿಯಲ್ಲಿ ತಮಿಳುನಾಡು, ಯುಪಿ, ಕೇರಳ, ಚೆನೈ, ಹೈದರಾಬಾದ್, ಮೈಸೂರು, ತುಮಕೂರು ಸೇರಿದಂತೆ ನಾನಾ ಕಡೆಯಿಂದ ಕ್ರೀಡಾಪಟುಗಳು ಆಗಮಿಸಿದ್ದಾರೆ”.-ಸಾಯಬಣ್ಣ ಕಾಶಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷರು.