
ನವಲಗುಂದ, ಜೂ4: ಕಟ್ಟಡ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ, ಅಲ್ಲದೆ ಕಳಪೆ ಕಾಮಗಾರಿಯ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿದ್ದು ಗುಣಮಟ್ಟದ ಕಾಮಗಾರಿ ಮಾಡದೇ ಕಟ್ಟಡದ ಎಲ್ಲ ಕೆಲಸ ಮುಗಿಸಿರುವುದಕ್ಕೆ ಶಾಸಕ ಎನ್ ಎಚ್ ಕೋನರಡ್ಡಿ ಲೋಕೋಪಯೋಗಿ ಇಲಾಖೆಯ ಎಇಇ ಸೋಮನಗೌಡ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡರು
ಮಂಗಳವಾರ ಪಟ್ಟಣದ ರಾಣಿ ಚನ್ನಮ್ಮ ಶಾಲೆ ಬಳಿ 6 ಕೋಟಿ ರೂ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ನಿರ್ಮಾಣವಾಗುತ್ತಿರುವ ಬಾಲಕರ ವಸತಿ ನಿಲಯದ ಕಟ್ಟಡ ಕಾಮಗಾರಿ ಪರಿಶೀಲಿಸಿದ ವೇಳೆ ಅಗತ್ಯ ಮಾಹಿತಿ ಪಡೆದ ಅವರು ಕೆಲವೆಡೆ ಕಾಮಗಾರಿಯು ಗುಣಮಟ್ಟದಿಂದ ಕೂಡಿಲ್ಲ.
ಆದರೆ ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ ಅಲ್ಲಲ್ಲಿ ಲೋಪದೋಷಗಳು ಕಂಡುಬರುತ್ತಿದ್ದು ಕ್ಯೂರಿಂಗ್ ಮತ್ತು ಪ್ಲಾಸ್ಟರಿಂಗ್ ಸಮರ್ಪಕವಾಗಿಯಿಲ್ಲ. ಆದುದರಿಂದ ಗುಣಮಟ್ಟ ಕಾಯ್ದುಕೊಂಡು ಉತ್ತಮವಾಗಿ ಕಾಮಗಾರಿ ನಿರ್ವಹಿಸಿಲ್ಲ ಎಂದು ಅಸಮಾಧಾನಗೊಂಡರು. ಉಳಿದ ಕಾಮಗಾರಿಯಲ್ಲಿ ಗುಣಮಟ್ಟದ ಕಾಮಗಾರಿಯನ್ನು ಶೀಘ್ರದಲ್ಲಿಯೇ ಅಂತಿಮಗೊಳಿಸುವಂತೆ ಎಚ್ಚರಿಕೆ ನೀಡಿದರು.
ಸಹಾಯಕ ಇಂಜನಿಯರ್ ಕಲ್ಮೇಶ ಪಟ್ಟಣಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಎಸ್ ಪಿ ಪೂಜಾರ, ಸಂದೇಶ ನಿಡವಣಿ, ಪುರಸಭೆ ಸ್ಥಾಯಿ ಸಮಿತಿ ಚೇರಮನ್ ಹನುಮಂತ ವಾಲಿಕರ್, ಸದಸ್ಯರಾದ ಜೀವನ ಪವಾರ, ಮೋದಿನ ಶಿರೂರ, ರವಿ ಬಡಿಗೇರಿ, ಮದರಸಾಬ ಉಗುರಗೋಳ, ಸುರೇಶ ಸುಣಗಾರ ಇತರರು ಇದ್ದರು.