
ಕಲಬುರಗಿ : ಮಾ.26:ಕ್ರೀಡಾಕೂಟಗಳಿಂದ ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಸದೃಢತೆಯಾಗುತ್ತದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಎಚ್.ಎಸ್.ಜಂಗೆ ಹೇಳಿದರು.
ನಗರದ ದೊಡ್ಡಪ್ಪ ಅಪ್ಪ ಆಟದ ಮೈದಾನದಲ್ಲಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡ 2025-26ನೇ ಶೈಕ್ಷಣಿಕ ಸಾಲಿನ ಅಂತರ್ ಮಹಾವಿದ್ಯಾಲಯಗಳ ಖೋ ಖೋ ಮಹಿಳಾ ತಂಡದ ಆಯ್ಕೆ ಪ್ರಕ್ರಿಯೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಖೋ-ಖೋ ನಮ್ಮ ದೇಶದ ಪರಂಪರೆಯ ಕ್ರೀಡೆಯಾಗಿದ್ದು, ಇದು ವೇಗ, ಚಾತುರ್ಯ, ತಂಡದ ಮನೋಭಾವ ಮತ್ತು ಶಿಸ್ತುಗಳನ್ನು ಬೆಳೆಸುವ ಅತ್ಯುತ್ತಮ ಕ್ರೀಡೆಯಾಗಿದೆ. ವಿದ್ಯಾರ್ಥಿಗಳಲ್ಲಿ ಧೈರ್ಯ, ಸಹನಶೀಲತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಮುಂದಿನ ದಿನಗಳಲ್ಲಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದೊಂದಿಗೆ ಅಂತರ್ವಿಶ್ವವಿದ್ಯಾಲಯ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ ಎಂದರು.
ಮುಖ್ಯ ಅತಿಥಿ ಮಹಿಳಾ ಪೊಲೀಸ್ ಅಧಿಕಾರಿ ಅಕ್ಕಮಹಾದೇವಿ ಮಾತನಾಡಿ, ಓದು ಎಷ್ಟು ಮುಖ್ಯವೋ ಕ್ರೀಡೆಯು ಅಷ್ಟೇ ಮುಖ್ಯವಾಗಿದ್ದು, ಇದು ಜೀವನದಲ್ಲಿ ಶಿಸ್ತನ್ನು, ತಂಡದ ಮನೋಭಾವವನ್ನು ಮತ್ತು ಗೆಲವು-ಸೋಲನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಕಲಿಸುತ್ತದೆ ಎಂದರು.
ಕಾರ್ಯಕ್ರಮದ ಅತಿಥಿಯಾದ ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಕಛೇರಿಯ ಎಎಸ್ಐ ಅಣ್ಣಪ್ಪ ಅವರು ಮಾತನಾಡಿ, ಕಠಿಣ ಪರಿಶ್ರಮ, ಸತತ ಪ್ರಯತ್ನ ಇದ್ದರೆ ಎಲ್ಲವೂ ಸಾಧ್ಯ. ಕ್ರೀಡೆಗಳಿಂದ ಆರೋಗ್ಯ ಸುಧಾರಿಸುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ವ್ಯಕ್ತಿತ್ವ ಬೆಳೆಯುತ್ತದೆ ಎಂದು ಹೇಳಿದರು.
ಆಯ್ಕೆ ಸಮಿತಿಯ ಅಧ್ಯಕ್ಷರಾದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾಂವ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸ್ಪರ್ಧಾತ್ಮಕ ಮನೋಭಾವ, ಶಿಸ್ತಿನ ಜೀವನ ಮತ್ತು ಸೋಲು-ಗೆಲುವಿನ ಸಮಾನವಾಗಿ ಸ್ವೀಕರಿಸುವ ಗುಣಗಳು ಬೆಳೆಯುತ್ತವೆ. ಶರಣಬಸವೇಶ್ವರ ಸಂಸ್ಥೆಯು ಓದಿಗೆ ಮಹತ್ವ ಕೊಟ್ಟಂತೆ ಆಟಗಳಿಗೂ ಮಹತ್ವ ನೀಡುತ್ತಾ ಬಂದಿದೆ. ಪೂಜ್ಯ ಡಾ.ಅಪ್ಪ ಅವರೊಬ್ಬ ಉತ್ತಮ ಕ್ರೀಡಾಪಟುವಾಗಿದ್ದರು. ಕ್ರೀಡೆಗಳಿಗೆ ಪ್ರೋತ್ಸಾಹಿಸುತ್ತಿದ್ದರು ಎಂದು ಹೇಳಿದರು.
ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಮಿಲಿಂದಕುಮಾರ ಸುಳ್ಳದ್ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಲಕ್ಷ್ಮೀಪುತ್ರ ವಂದಿಸಿದರೆ, ವಿದ್ಯಾರ್ಥಿನಿಯರಾದ ಕು.ಸೈಯದ್ ಮತ್ತು ಕು.ಸಂಚಿತ ನಿರೂಪಿಸಿದರು. ವೇದಿಕೆ ಮೇಲೆ ಎಂಎಸ್ಐ ಕಾಲೇಜಿನ ಪ್ರಾಚಾರ್ಯ ಮಲ್ಲಪ್ಪ ಕೆ.ಬಿ, ವಿವಿಧ ಮಹಾವಿದ್ಯಾಲಯಗಳ ದೈಹಿಕ ನಿರ್ದೇಶಕರು, ನ್ಯಾಕ್ ಸಂಯೋಜಕಿ ಡಾ.ಆರತಿ ರಾಮಚಂದ್ರ, ಐಕ್ಯೂಎಸಿ ಸಂಯೋಜಕಿ ಡಾ.ಪಿಂಕ್ಯಾನಿ ಇದ್ದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




















