ಸರ್ಕಾರಿ ಶಾಲೆ ಉಳಿಸಲು ಪೋಷಕರು ಸಹಕರಿಸಿ

ಕೋಲಾರ,ನ.೨- ಸರ್ಕಾರಿ ಶಾಲೆಗಳನ್ನು ಉಳಿಸಲು ಗುಣಮಟ್ಟದ ಕಲಿಕೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಮುದಾಯ ಸಹಾಯ ನೀಡಬೇಕು, ಸಮಾನ ಶಿಕ್ಷಣಕ್ಕಾಗಿ ಈ ಶಾಲೆಗಳನ್ನು ಉಳಿಸಲು ಸಹಕರಿಸಬೇಕು ಎಂದು ಪೋಷಕರಿಗೆ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿಯ ಗುಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎನ್.ನಾರಾಯಣಸ್ವಾಮಿ ಮನವಿ ಮಾಡಿದರು.


ಶಾಲೆಯ ಆವರಣದಲ್ಲಿ ನಡೆದ ಸಮುದಾಯದತ್ತ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಪೋಷಕರು, ಮಕ್ಕಳನ್ನುದ್ದೇಶಿಸಿ ಅವರು ಮಾತನಾಡಿ, ಪೋಷಕರು ಶಾಲೆಯತ್ತ ಬಂದು ತಮ್ಮ ಮಕ್ಕಳ ಕಲಿಕಾ ಪ್ರಗತಿ ಪರಿಶೀಲಿಸಬೇಕು ಎಂದರು.


ಸರ್ಕಾರಿ ಶಾಲೆಗಳಲ್ಲಿ ಇಂದು ಗುಣಮಟ್ಟದ ಶಿಕ್ಷಣ ನೀಡುತ್ತಿರು ವುದರಿಂದಲೇ ಉತ್ತಮ ಫಲಿತಾಂಶ ಬರುತ್ತಿದೆ, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹದಿಂದ ದೂರವಾಗಬೇಕು, ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.


ಸಮುದಾಯದತ್ತ ಶಾಲೆ ಮಾರ್ಗದರ್ಶಿ ಶಿಕ್ಷಕ ಸಿ.ಎಲ್.ಶ್ರೀನಿವಾಸಲು, ಮಕ್ಕಳ ಕಲಿಕಾ ಪ್ರಗತಿ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಕ್ಷೀರಭಾಗ್ಯ,ಅನ್ನಭಾಗ್ಯ,ಉಚಿತ ಪುಸ್ತಕ,ಸಮವಸ್ತ್ರ ಎಲ್ಲವನ್ನೂ ನೀಡುತ್ತಿದ್ದು, ಜತೆಗೆ ಮತ್ತಷ್ಟು ಗುಣಾತ್ಮಕಗೊಳಿಸಲು ಉದ್ಯಮಿಗಳು, ಸಮುದಾಯ ಸರ್ಕಾರಿ ಶಾಲೆಗಳ ನೆರವಿಗೆ ನಿಲ್ಲಬೇಕೆಂದರು.


ಸಮುದಾಯ ಸರ್ಕಾರಿ ಶಾಲೆಗೆ ಹೆಚ್ಚಿನ ನೆರವು ನೀಡುವ ಮೂಲಕ ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಸೌಲಭ್ಯಗಳು ಇಲ್ಲಿ ಸಿಗುವಂತೆ ಮಾಡುವಲ್ಲಿ ಸರ್ಕಾರದೊಂದಿಗೆ ಸಹಕರಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಶಿಕ್ಷಕರಾದ ಇಬ್ರಾಹಿಂಖಾನ್,ನಾರಾಯಣಸ್ವಾಮಿ, ಮಮತಾ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶಿವಶಂಕರ್,ಉಪಾಧ್ಯಕ್ಷೆ ಅನಿತಾ, ಸದಸ್ಯರಾದ ಮುನಿರಾಜು, ವೆಂಕಟೇಶಪ್ಪ, ಪುಷ್ಪ, ಪವಿತ್ರ, ಅಂಜಲಮ್ಮ, ನೇತ್ರಾವತಮ್ಮ ಮತ್ತಿತರ ಪೋಷಕರು ಹಾಜರಿದ್ದರು.