ಕಲಬುರಗಿ,ಸೆ.29-ಹಸುವಿನ ಹಾಲು ಹಿಂಡಲು ಅದರ ಕಾಲ ಹತ್ತಿರ ಕೆಳಗಡೆ ಕುಳಿತುಕೊಳ್ಳಬೇಕಾಗುತ್ತದೆ. ನಾವು ಹಸುವಿಗೆ ವಿನಯಶೀಲತೆ ತೋರಿಸಿದಾಗ ಮಾತ್ರ ಅದು ಹಾಲು ನೀಡುತ್ತದೆ . ಹಸುವಿನ ಹಾಲು ಪಡಿಯಲು ಅಹಂಕಾರದಿಂದ ಹಸುವಿನ ಮೇಲೆ ಕುಳಿತರೆ ಹಾಲು ದೊರೆಯುವುದಿಲ್ಲ .ಶರಣರ ಪಾದಕ್ಕೆ ವಿನಯಶೀಲರಾಗಿರಬೇಕು ಆಗ ಮಾತ್ರ ನಾವು ಅಧ್ಯಾತ್ಮ ಸಾಧನೆ ಮಾಡಲು ಸಾಧ್ಯವಾಗುತ್ತದೆ . ಪಾರಮಾರ್ಥ ದೊರಕುತ್ತದೆ . ಶರಣ ಸಂಕುಲಕ್ಕೆ ಕಿಂಕರರಾಗಿರಬೇಕು . ಎನಗಿಂತ ಕಿರಿಯರಿಲ್ಲ ಶರಣರಿಗಿಂತ ಹಿರಿಯರಿಲ್ಲ ಎಂಬ ಸದುವಿನಯ ಬೆಳೆಸಿಕೊಳ್ಳಬೇಕು . ದೇವರು ಎಲ್ಲಾ ಭಕ್ತರಿಗೆ ಪರಿಚಿತನಾಗಿರುತ್ತಾನೆ , ನಿಜವಾದ ಭಕ್ತನಿಗೆ ದೇವರು ಕೂಡ ಗುರುತು ಹಿಡಿಯುತ್ತಾನೆ ಎಂದು ಜಯಶ್ರೀ ಚಟ್ನಳ್ಳಿ ಹೇಳಿದರು.
ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂ.ಬಸವರಾಜ ಸಗರ ಸ್ಮರಣಾರ್ಥ ಜರುಗಿದ 869ನೇ ದತ್ತಿ ಕಾರ್ಯಕ್ರಮದಲ್ಲಿ ಶರಣರ ಪಾದಕ್ಕೆ ಕೀಳಾಗಿರಿಸು ಎಂಬ ವಿಷಯದ ಕುರಿತು ಮಾತನಾಡಿದ ಅವರು,
ಪಂಚಭೂತಗಳಿಂದ ಆತ್ಮ ಅಂಗನಾದ ,ಅಂಗನು ವಿನಯಗುಣ ಬೆಳೆಸಿಕೊಂಡು ಲಿಂಗವಾಗಬೇಕು . ಅಹಂಕಾರ ಅಳಿಯಬೇಕು ವಿನಯ ಗುಣ ಬೆಳೆಯಬೇಕು . ಮೂಲದಲ್ಲಿ ಶರಣನಿದ್ದವನು ಕಲ್ಮಶಗಳು ಬಂದು ಮಾನವನಾಗುತ್ತಾನೆ .ಅವನು ಮತ್ತೆ ಶರಣನಾಗುವ ಮಾರ್ಗವೇ ಲಿಂಗ ಮಾರ್ಗ . ಅದೇ ಅವನ ಅಧ್ಯಾತ್ಮ ಸಾಧನೆಯಾಗಿದೆ . ನಾನೆಂಬುವುದು ಅಂಗವಲ್ಲ , ನಾನೆಂಬುವುದು ದೇವರು ಎಂದು ಅರಿಯಬೇಕು .ಅರಿಶಡ್ವರ್ಗಗಳು ಅಳಿದವನು ಶರಣನಾಗುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ , ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ ದತ್ತಿ ದಾಸೋಹಿಗಳಾದ ಸಾವಿತ್ರಿ ಸಗರ ಡಾ.ಕೆ. ಎಸ್. ವಾಲಿ , ಶರಣಗೌಡ ಪಾಟೀಲ್ ಪಾಳ ,ಬಂಡಪ್ಪ ಕೇಸುರ್, ಉದ್ದಂಡಯ್ಯ ಭಾಗವಹಿಸಿದರು.























