ಜಿಲ್ಲಾಧಿಕಾರಿ ಕುರಿತು ಎಂಎಲ್‍ಸಿ ರವಿಕುಮಾರ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಖಂಡನೆ

ಕಲಬುರಗಿ,ಮೇ.26-“ಬಿಜೆಪಿ ನಾಯಕರಿಗೆ ಪಾಕಿಸ್ತಾನದ ಹೆಸರು ಹೇಳದಿದ್ದರೆ ತಿಂದಿದ್ದು ಜೀರ್ಣ ಆಗುವುದಿಲ್ಲ, ರಾತ್ರಿ ನಿದ್ದೆಯಲ್ಲೂ ಪಾಕಿಸ್ತಾನ, ಪಾಕಿಸ್ತಾನ ಎಂದು ಕನವರಿಸುತ್ತಾರೋ ಏನೋ” ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವÀ ಪ್ರಿಯಾಂಕ್ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಅವರು ಜಿಲ್ಲಾಧಿಕಾರಿ ಕುರಿತು ನೀಡಿರುವ ಹೇಳಿಕೆಗೆ ತಮ್ಮ ಫೇಸ್ ಬುಕ್ ಪೇಜ್‍ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕಲಬುರಗಿಯ ಜಿಲ್ಲಾಧಿಕಾರಿಗಳ ಬಗೆಗಿನ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರ ಹೇಳಿಕೆ ಅತ್ಯಂತ ಖಂಡನೀಯ. ಪಾಕಿಸ್ತಾನ ಪ್ರೇಮಿ ಬಿಜೆಪಿಗರು ಇಷ್ಟು ದಿನ ರಾಜಕೀಯ ನಾಯಕರ ವಿರುದ್ಧ ಪಾಕಿಸ್ತಾನದ ಹೆಸರು ಪ್ರಯೋಗಿಸುತ್ತಿದ್ದರು, ಈಗ ಅವರ ನಾಲಿಗೆ ಇನ್ನೂ ಉದ್ದವಾಗಿ ಅಧಿಕಾರಿಗಳನ್ನೂ ಪಾಕಿಸ್ತಾನದಿಂದ ಬಂದವರು ಎನ್ನುವ ಮಟ್ಟಿಗೆ ಬಂದಿದೆ. ಸೇನಾಧಿಕಾರಿಗೆ ಭಯೋತ್ಪಾದಕರ ಸಹೋದರಿ ಎಂದರು, ಸೈನಿಕರು ಮೋದಿಯ ಕಾಲಿಗೆ ಬೀಳುತ್ತಾರೆ ಎಂದರು, ಇಲ್ಲಿ ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದವರು ಎಂದರು. ಬಿಜೆಪಿಗರ ಜ್ಞಾನವು ಪಾಕಿಸ್ತಾನ, ಮುಸ್ಲಿಂ ವಿಚಾರಗಳನ್ನು ದಾಟಿ ಮುಂದೆ ಹೋಗುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ನೈತಿಕ ಸ್ಥೈರ್ಯ ಕಸಿಯುವ ಪ್ರಯತ್ನದಲ್ಲಿರುವ ರವಿಕುಮಾರ್ ಅವರೇ, ಕಲಬುರಗಿಯ ಜಿಲ್ಲಾಧಿಕಾರಿ ಐಎಎಸ್ ಪಾಸ್ ಮಾಡಿ ದೇಶಸೇವೆಗೆ, ಜನಸೇವೆಗೆ ಬಂದವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರಣಮ್ ಅವರಿಗೆ ಅತ್ಯುತ್ತಮ ಚುನಾವಣಾ ಅಧಿಕಾರಿಯ ಪ್ರಶಸ್ತಿಯನ್ನು ಪ್ರದಾನ ಕೂಡ ಮಾಡಿದರು. ನಿಮ್ಮ ಹಾಗೆ ಯಾರಿಗೋ ಬಹುಪರಾಕ್ ಹೇಳಿಕೊಂಡು, ಆರ್‍ಎಸ್‍ಎಸ್‍ನವರ ಗುಲಾಮಗಿರಿ ಮಾಡಿಕೊಂಡು ಸ್ಥಾನ ಗಿಟ್ಟಿಸಿಕೊಂಡವರಲ್ಲ, ಅಧಿಕಾರಿಯ ಧರ್ಮ ಯಾವುದಾದರೂ ಅವರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಜನಸೇವೆಗೆ ಬಂದಿರುತ್ತಾರೆ, ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಯಾರಿಗೆ ಹೇಗೆ ಮಾತಾಡಬೇಕು ಎಂಬ ಮಿನಿಮಮ್ ಕಾಮನ್ ಸೆನ್ಸ್ ಇಲ್ಲದ ನಿಮ್ಮಂತವರು ಕರ್ನಾಟಕದ ರಾಜಕಾರಣಕ್ಕೆ ಕಳಂಕ ಎಂದು ಕುಟುಕಿದ್ದಾರೆ.
ದೇಶ ಸೇವೆಗಾಗಿ ಸಮರ್ಪಿಸಿಕೊಂಡಿರುವವರನ್ನು ಹಿಯಾಳಿಸುವುದು ಬಿಜೆಪಿಗರಿಗೆ ಚಟವಾಗಿ ಪರಿಣಮಿಸಿದೆ. ದೇಶಕ್ಕಾಗಿ ದುಡಿಯುವ ಸೇನಾಧಿಕಾರಿ ಸೋಫಿಯಾ ಖುರೇಷಿಯವರ ಧರ್ಮ ನೋಡಿ ಭಯೋತ್ಪಾದಕರ ಸಹೋದರಿ ಎಂದಿದ್ದ ಬಿಜೆಪಿಯ ವಿಜಯ್ ಶಾ ಹೇಳಿಕೆಗೂ ರವಿಕುಮಾರ್ ಅವರ ಹೇಳಿಕೆಗೂ ಯಾವುದೇ ವ್ಯತ್ಯಾಸವಿಲ್ಲ. ಹಗಲು ರಾತ್ರಿ ಜನರಿಗಾಗಿ ಕೆಲಸ ಮಾಡುವ ಅಧಿಕಾರಿಗಳು, ಸೈನಿಕರನ್ನು ಅವಮಾನಿಸುವುದನ್ನು ವ್ಯಸನ ಮಾಡಿಕೊಂಡಿರುವ ಬಿಜೆಪಿಗರ ದುರಹಂಕಾರಕ್ಕೆ ಜನತೆ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.