ಆಳಂದ:ಅ.8: ಪಟ್ಟಣದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ ಆಶ್ರಯದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವು ಭಕ್ತಿಭಾವದಿಂದ ಹಾಗೂ ಸಾಂಸ್ಕøತಿಕ ಸೊಬಗಿನಿಂದ ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಾಲ್ಮೀಕಿ ಸಮಾಜ ಬಾಂಧವರು ಭಾಗವಹಿಸಿ ಗೌರವ ನಮನ ಸಲ್ಲಿಸಿದರು.
ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮಹರ್ಷಿ ವಾಲ್ಮೀಕಿಯವರು ಕೇವಲ ಕವಿ ಅಲ್ಲ, ಸತ್ಯ, ಧೈರ್ಯ ಮತ್ತು ಮಾನವೀಯ ಮೌಲ್ಯಗಳ ಪ್ರತಿರೂಪ. ಅವರ ರಾಮಾಯಣ ಕಾವ್ಯವು ಭಾರತೀಯ ಸಂಸ್ಕೃತಿಯ ಶಾಶ್ವತ ಕೀರ್ತಿಯಾಗಿದೆ. ಇಂದು ನಾವು ಅವರು ಬೋಧಿಸಿದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು,” ಅವರ ಜಯಂತಿ ಆಚರಣೆಯಲ್ಲಿ ಮೌಲ್ಯಾಧಾರಿತ ಬದುಕಿನ ಪಾಠವಾಗಲಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಅವರು, ಮಹರ್ಷಿ ವಾಲ್ಮೀಕಿಯವರು ಮೊದಲ ಕವಿ, ಆದಿಕವಿ. ಅವರ ಕೃತಿ ವಿಶ್ವ ಸಾಹಿತ್ಯಕ್ಕೆ ಮಾದರಿಯಾಗಿದ್ದು, ಅನೇಕ ಕವಿಗಳನ್ನು ಸ್ಫೂರ್ತಿಗೊಳಿಸಿದೆ. ಸಮಾಜದಲ್ಲಿ ನ್ಯಾಯ, ಧರ್ಮ ಮತ್ತು ಶಾಂತಿ ಕಾಪಾಡಲು ರಾಮಾಯಣದ ಮೌಲ್ಯಗಳು ಮಾರ್ಗದರ್ಶಿಯಾಗಿವೆ,” ಎಂದು ತಿಳಿಸಿದರು.
ನಿರಗುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಜೀತೇಂದ್ರ ತಳವಾರ ಉಪನ್ಯಾಸ ನೀಡುತ್ತ, “ವಾಲ್ಮೀಕಿಯವರ ರಾಮಾಯಣ ಕೇವಲ ಕಾವ್ಯವಲ್ಲ, ಅದು ಮಾನವ ಬದುಕಿನ ದಿಕ್ಕು ತೋರಿಸುವ ಶಾಸ್ತ್ರ. ವ್ಯಕ್ತಿಯ ನಡೆನುಡಿ, ಧೈರ್ಯ, ನ್ಯಾಯ ಮತ್ತು ನೈತಿಕತೆಯ ಆಳವಾದ ಬೋಧನೆ ನೀಡುವ ಗ್ರಂಥ ಇದು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಫಿರದೋಸ್ ಅನ್ಸಾರಿ ಗೌಡಾ, ಉಪಾಧ್ಯಕ್ಷೆ ಕವಿತಾ ಎಸ್. ನಾಯಕ, ತಾಪಂ ಮಾಜಿ ಅಧ್ಯಕ್ಷ ಮಹೋನಗೌಡ ಪಾಟೀಲ, ವಾಲ್ಮೀಕಿ ಸಮಾಜ ತಾಲೂಕು ಅಧ್ಯಕ್ಷ ಕಾಶಿನಾಥ ಜಮಾದಾರ, ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ ಹೋಳ್ಕರ್, ಸಹಾಯಕ ಕೃಷಿ ನಿರ್ದೇಶಕ ಬನಸಿದ್ದ ಬಿರಾದಾರ, ಪಶು ವೈದ್ಯಾಧಿಕಾರಿ ಡಾ. ಯಲ್ಲಪ್ಪ ಇಂಗಳೆ, ಆರೋಗ್ಯ ನಿರೀಕ್ಷಕ ಅಬ್ದುಲ್ ರಾವೋಫ್, ಸಮಾಜ ಕಲ್ಯಾಣ ವ್ಯವಸ್ಥಾಪಕ ಸಂತೋಷ ಶಿಂಧೆ ಹಾಗೂ ರಮೇಶ ಪಾತ್ರೆ ಸೇರಿದಂತೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಿಂದ ವಾಲ್ಮೀಕ ಸಮಾಜ ಬಾಂಧವರು ಸೇರಿದಂತೆ ಉಪಸ್ಥಿತರಿದ್ದರು.

























