ಮಧುಗಿರಿ, ಆ. ೨೯- ಶಾಸಕ ಕೆ.ಎನ್. ರಾಜಣ್ಣ ನವರನ್ನು ಯಾವುದೇ ತಿಳುವಳಿಕೆ ನೀಡದೆ ಕಾಂಗ್ರೆಸ್ ಹೈ ಕಮಾಂಡ್ ಏಕಾಏಕಿ ಸಂಪುಟದಿಂದ ವಜಾ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಸಿದ್ದಾಪುರ ಗ್ರಾ.ಪಂ ಮಾಜಿ ಅಧ್ಯಕ್ಷ, ಸದಸ್ಯ ಸಿದ್ದಾಪುರ ವೀರಣ್ಣ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿರುವ ಕೆ.ಎನ್. ರಾಜಣ್ಣ ನವರ ಸಭಾಂಗಣದಲ್ಲಿ ತಾಲ್ಲೂಕು ಯಾದವ ಯುವ ವೇದಿಕೆ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಳ ಸಮುದಾಯದ ಜನರನ್ನು ಗುರುತಿಸಿ ರಾಜಕೀಯ ಅಧಿಕಾರ ನೀಡುವುದರಲ್ಲಿ ರಾಜಣ್ಣ ನವರು ಪ್ರಮುಖರು. ಈ ಹಿಂದೆ ಜಿಲ್ಲೆಯಲ್ಲಿ ರಾಜಣ್ಣನವರು ಕಾಂಗ್ರೆಸ್ನಲ್ಲಿ ಇಲ್ಲದ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಮಾತ್ರ ಗಳಿಸಿತ್ತು. ಅವರು ಜಿಲ್ಲೆಯ ಶಕ್ತಿಯಾಗಿದ್ದು, ಅವರನ್ನು ಮತ್ತೆ ಶೀಘ್ರವಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ತೀವ್ರವಾಗಿ ನೆಲ ಕಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಉಪನ್ಯಾಸಕ ಚಿತ್ತಯ್ಯ ಮಾತನಾಡಿ, ಕೆ.ಎನ್. ರಾಜಣ್ಣ ನವರನ್ನು ಷಡ್ಯಂತರ ರೂಪಿಸಿ ಸಚಿವ ಸ್ಥಾನದಿಂದ ವಜಾ ಮಾಡಿರುವುದು ಖಂಡನೀಯ. ಕಾಂಗ್ರೆಸ್ ಹೈ ಕಮಾಂಡ್ ಇದರ ಬಗ್ಗೆ ಪರಿಶೀಲಿಸಿ ಅವರನ್ನು ಮತ್ತೆ ಸಂಪುಟಕ್ಕೆ ಮರು ಸೇರ್ಪಡೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಗೊಲ್ಲ ಸಮುದಾಯದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕೆಡಿಪಿ ಸದಸ್ಯೆ ಜಯಲಕ್ಷ್ಮಿ ಮಾತನಾಡಿ, ರಾಜಣ್ಣನವರನ್ನು ಯಾವ ಕಾರಣದಿಂದ ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಜಗತ್ತಿಗೆ ತಿಳಿಸಬೇಕು. ವಜಾಗೊಳಿಸಿರುವ ಬಗ್ಗೆ ಯಾವುದೇ ಶಾಸಕರು, ಸಂಸದರು ಏಕೆ ಪ್ರಶ್ನಿಸುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯ ಶಿವಣ್ಣ, ಪದವೀಧರ ವೇದಿಕೆ ಅಧ್ಯಕ್ಷರಾದ ದಯಾನಂದ ಪುಲಮಾಚಿ ಚಿತ್ತಪ್ಪ, ಶಿವಾನಂದ್, ಶಿವರಾಜು, ಗೋವಿಂದರಾಜು, ರವಿ, ಕುಮಾರ್, ಸುಂದರೇಶ್, ಅಂಬರೀಶ್, ಶಿವಲಿಂಗಯ್ಯ, ರಘು, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.




























