Home ಜಿಲ್ಲೆ ಬೆಂಗಳೂರು ಕವಿ ಕಾವ್ಯ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರಧಾನ

ಕವಿ ಕಾವ್ಯ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರಧಾನ

ಬೆಂಗಳೂರು:ಫೆ.೨೫-ಕನ್ನಡ ಭಾಷೆಯ ಪ್ರಸಾರ ಮತ್ತು ಅಭಿವೃದ್ಧಿಗಾಗಿ ದೀರ್ಘಕಾಲದಿಂದ ನಿಸ್ವಾರ್ಥವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗೌರವಿಸಿ, ಡಾ. ಸುಷ್ಮ ಶಂಕರ್ ಹಾಗೂ ಅವರ ಪತಿ ಬಿ. ಶಂಕರ್ ದಂಪತಿಗಳಿಗೆ “ಕವಿ ಕಾವ್ಯ ಕನ್ನಡ ಸಮಾಜ ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿ ೨೦೨೬” ಪ್ರದಾನಿಸಲಾಯಿತು.


ನಿನ್ನೆ ನಡೆದ ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಸಮರ್ಪಿಸಲಾಯಿತು. ಕಾಸರಗೋಡು ಕನ್ನಡ ಭವನದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ರಮೇಶ್ ಮಹಾಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಭವನ ಮತ್ತು ಗ್ರಂಥಾಲಯದ ಸಂಸ್ಥಾಪಕರಾದ ವಾಮನ್ ರಾವ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ನೇತೃತ್ವದಲ್ಲಿ, ವಿವಿಧ ಸಾಹಿತ್ಯಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮ ಅತ್ಯಂತ ಗಮನಾರ್ಹವಾಗಿತ್ತು.


ಡಾ. ಸುಷ್ಮ ಶಂಕರ್ ಮೂಲತಃ ಕೇರಳದ ಮಲಯಾಳಿ ಮಹಿಳೆಯಾಗಿದ್ದು, ವಿವಾಹದ ನಂತರ ತಮ್ಮ ಪತಿ ಶಂಕರ್ ಅವರಿಂದಲೇ ಕನ್ನಡ ಭಾಷೆಯನ್ನು ಕಲಿತು ಅದರಲ್ಲಿ ಪ್ರಾವೀಣ್ಯತೆ ಗಳಿಸಿದ್ದಾರೆ. ಬಿ. ಶಂಕರ್ ಮಂಡ್ಯ ಜಿಲ್ಲೆಯ ಚಿಕ್ಕ ಅರಸಿನಕೆರೆಯವರು. ವೈವಾಹಿಕ ಜೀವನದೊಂದಿಗೆ ಆರಂಭವಾದ ಈ ಭಾಷಾ ಪಯಣವು ಇಂದು ಕನ್ನಡ ಸೇವೆಯ ಸಮರ್ಪಿತ ಚಳುವಳಿಯಾಗಿ ಬೆಳೆಯಲಾಗಿದೆ ಎಂಬುದು ವಿಶೇಷವಾಗಿದೆ.


ಕಳೆದ ೧೭ ವರ್ಷಗಳಿಂದ ಬೆಂಗಳೂರಿನ ವೈಟ್‌ಫೀಲ್ಡ್‌ನ ಸರಸ್ವತಿ ಎಜ್ಯುಕೇಶನ್ ಟ್ರಸ್ಟ್‌ನಲ್ಲಿ ತಮ್ಮ ನೇತೃತ್ವದಲ್ಲಿ ಅನ್ಯ ರಾಜ್ಯದವರಿಗೂ ಉಚಿತವಾಗಿ ಕನ್ನಡ ಭಾಷೆಯನ್ನು ಬೋಧಿಸುತ್ತಿರುವ ಈ ದಂಪತಿಗಳು, ಭಾಷಾ ಸೌಹಾರ್ದತೆ ಮತ್ತು ಸಾಂಸ್ಕೃತಿಕ ಏಕತೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ.


ಭಾಷೆಯನ್ನು ಕೇವಲ ಸಂವಹನ ಮಾಧ್ಯಮವೆಂದು ಮಾತ್ರವಲ್ಲದೆ, ಸಂಸ್ಕೃತಿಯ ಆತ್ಮವೆಂದು ಪರಿಗಣಿಸಿ ಕಾರ್ಯನಿರ್ವಹಿಸುತ್ತಿರುವ ಅವರು, “ತೊದಲ್ನುಡಿ” ಮಕ್ಕಳ ಮಾಸಪತ್ರಿಕೆಯ ಮೂಲಕ ಮಕ್ಕಳ ಮತ್ತು ಯುವಜನರಲ್ಲಿ ಭಾಷಾ ಪ್ರೇಮ, ಸಾಹಿತ್ಯ ಚೇತನ ಹಾಗೂ ಸೃಜನಾತ್ಮಕ ಚಿಂತನೆ ಬೆಳೆಸುತ್ತಿದ್ದಾರೆ.


ಕನ್ನಡ ಭಾಷೆಯ ಗಡಿಜಿಲ್ಲೆಗಳಲ್ಲಿ ಭಾಷಾಭಿಮಾನ ಬೆಳೆಸುವುದಲ್ಲದೆ, ಮಾತೃಭಾಷಾ ಜಾಗೃತಿಯನ್ನು ಬಲಪಡಿಸುವಲ್ಲಿ ಇವರ ಸೇವೆ ಶ್ಲಾಘನೀಯವಾಗಿದೆ. ಯಾವುದೇ ಆರ್ಥಿಕ ಲಾಭದ ನಿರೀಕ್ಷೆಯಿಲ್ಲದೆ ಸಮಾಜಕ್ಕಾಗಿ ಸಲ್ಲಿಸುತ್ತಿರುವ ಸಮರ್ಪಿತ ಸೇವೆಯೇ ಇವರ ವೈಶಿಷ್ಟ್ಯವಾಗಿದೆ.