Home ಜಿಲ್ಲೆ ಕಲುಷಿತ ನೀರು ಪೂರೈಕೆಗೆ ಜಡ್ಜ್ ಆಕ್ರೋಶ

ಕಲುಷಿತ ನೀರು ಪೂರೈಕೆಗೆ ಜಡ್ಜ್ ಆಕ್ರೋಶ

ಔರಾದ್ : ಮಾ.7:ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ಹಾಲಹಳ್ಳಿ ಸಮೀಪದ ನೀರು ಶುದ್ದೀಕರಣ ಘಟಕಕ್ಕೆ ಔರಾದ ಸಿವಿಲ್ ಕೋರ್ಟ್ ಹಿರಿಯ ನ್ಯಾಯಾಧೀಶ ಹಾಜಿ ಹುಸೇನಸಾಬ್ ಯಾದವಾಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಶುದ್ದೀಕರಣದ ಪ್ರಕ್ರಿಯೆ ಸರಿಯಾಗಿ ನಡೆಯದೆ ಅಶುದ್ಧ ನೀರು ಪೂರೈಕೆ ಮಾಡಲಾಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದಲ್ಲಿದ್ದ ಸಿಬ್ಬಂದಿಯೊಂದಿಗೆ ಮಾತನಾಡಿದ ನ್ಯಾಯಾಧೀಶರು, ಪಟ್ಟಣದ ಜನರು ಕುಡಿಯುವ ನೀರಿನ ಬಗ್ಗೆ ಇಷ್ಟು ನಿರ್ಲಕ್ಷ್ಯ ಯಾಕೆ ತೋರಿಸುತ್ತಿದ್ದೀರಿ? ಇಂತಹ ಅಶುದ್ಧ ನೀರನ್ನು ಪೂರೈಕೆ ಮಾಡಿದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ? ಎಂದು ಪ್ರಶ್ನಿಸಿದರು. ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದರು.

ಬಾಟಲ್‍ನಲ್ಲಿ ನೀರು ತಪಾಸಣೆಗೆ ಮಾಡಿರುವುದು. ಇದಕ್ಕೆ ಪ್ರತಿಕ್ರಿಯಿಸಿದ ಘಟಕದ ಸಿಬ್ಬಂದಿಗಳು ತಮ್ಮ ಸಮಸ್ಯೆಯನ್ನು ವಿವರಿಸಿ, ನೀರನ್ನು ಶುದ್ದೀಕರಿಸಲು ಬೀಚಿಂಗ್ ಪೌಡರ್ ಸೇರಿ ಕೆಲವು ಅಗತ್ಯ ರಾಸಾಯನಿಕಗಳನ್ನು ಬಳಸಬೇಕಾಗಿದೆ. ಆದರೆ ಅವುಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಸರಿಯಾದ ಸಮಯಕ್ಕೆ ಪೂರೈಸಿಲ್ಲ. ಅವುಗಳಿಲ್ಲದೆ ನೀರು ಸಂಪೂರ್ಣವಾಗಿ ಶುದ್ಧೀಕರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಇದೇ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಂತರ ಈ ವಿಷಯವನ್ನು ಪರಿಶೀಲಿಸಿದಾಗ, ಬೀಚಿಂಗ್ ಪೌಡರ್ ಖರೀದಿಗೆ ಸಂಬಂಧಿಸಿದ ಹಣ ಪಾವತಿಸದಿರುವುದರಿಂದ ಅದರ ಪೂರೈಕೆ ಸ್ಥಗಿತಗೊಂಡಿರುವುದು ತಿಳಿದುಬಂದಿದೆ. ಈ ಕಾರಣದಿಂದ ನೀರು ಶುದ್ದೀಕರಣ ಪ್ರಕ್ರಿಯೆ ಸರಿಯಾಗಿ ನಡೆಯದೆ ಇರುವುದಾಗಿ ಮೂಲಗಳಿಂದ ಮಾಹಿತಿ ಪಡೆದರು. ಈ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪಟ್ಟಣದ ಜನರಲ್ಲಿ ಆತಂಕ ಉಂಟಾಗಿದ್ದು, ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ತಕ್ಷಣ ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಸೂಚಿಸಿದರು.


ನೀರು ತಪಾಸಣೆ ಅಸಮಧಾನ

ಈ ವೇಳೆ ನ್ಯಾಯಾಧೀಶ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ನೀರು ಸಂಗ್ರಹಿಸಿ ತಪಾಸಣೆ ನಡೆಸಿದರು. ಇದು ಜನರಲ್ಲ ಜಾನುವಾರುಗಳಿಗೂ ಕುಡಿಯಲು ಯೋಗ್ಯವಲ್ಲ. ಇಂತಹ ನೀರು ಜನರಿಗೆ ಹೇಗೆ ಕುಡಿಸುತ್ತೀರಿ ಎಂದು ಪುರಸಭೆಯ ಸಿಬ್ಬಂದಿಗೆ ಕೋರ್ಟ್ ನಲ್ಲಿ ನಡೆದ ಸಭೆಯಲ್ಲಿ ದೂರಿದರು. ಕೂಡಲೇ ಜನರಿಗೆ ಶುದ್ದ ನೀರು ಕುಡಿಸಲು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.


ಮೇಲಾಧಿಕಾರಿಗಳಿಗೆ ಪತ್ರ

ಔರಾದ್ ಪಟ್ಟಣದಲ್ಲಿ ಆಶುದ್ದ ನೀರು ಸರಬರಾಜು ಆಗುತ್ತಿರುವುದನ್ನು ಪರಿಶೀಲಿಸಿದ ಹಿರಿಯ ನ್ಯಾಯಾಧೀಶ ಹಾಜಿ ಹುಸೇನಸಾಬ್ ಯಾದವಾಡ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಈ ಸಂಬಂಧ ಪತ್ರ ಬರೆಯಲಾಗುತ್ತದೆ. ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವಂತೆ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.