ಮಾಲೂರು.ಅ೫: ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಆರಂಭವಾಗಿದ್ದು ಕೂಡಲೇ ಪದವೀಧರರು ಸೂಕ್ತ ದಾಖಲಾತಿಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಲು ಜೆಡಿಯು ಪಕ್ಷದಿಂದ ಅಗತ್ಯ ಸಲಹೆ ಮಾರ್ಗದರ್ಶನ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರೂ ನೋಂದಣಿ ಮಾಡಿಸುವಂತೆ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ ಕೆ ನಾಗರಾಜ್ ಮತದಾರರಲ್ಲಿ ಮನವಿ ಮಾಡಿದ್ದಾರೆ,
ನಗರದ ಜೆ ಡಿ ಯು ಕಛೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಹಾಗೂ ಪದವೀಧರಿಗೆ ಅರ್ಜಿಗಳನ್ನು ವಿತರಿಸಿ ಮಾತನಾಡಿದ ಅವರು ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಯ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಮತ್ತು ದಾವಣಗೆರೆ (ಹರಿಹರ, ಜಗಳೂರು ದಾವಣಗೆರೆ ತಾಲ್ಲೂಕುಗಳು) ಐದು ಜಿಲ್ಲೆಗಳು ಒಳಪಟ್ಟಿದ್ದು ಮತದಾರರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಸಲುವಾಗಿ ಮತದಾರರರ ನೋಂದಣಿಗಾಗಿ ನಮೂನೆ ೧೮ ರಲ್ಲಿನ ಅರ್ಜಿಯನ್ನು ಭರ್ತಿಮಾಡಿ ನ.೬ ಒಳಗಾಗಿ ಸಂಬಂದಪಟ್ಟ ತಾಲೂಕು ತಹಶಿಲ್ದಾರ್ ಕಛೇರಿಯಲ್ಲಿನ ಅಧಿಕಾರಿಗಳಿಗೆ ತಲುಪಿಸಲು ಮನವಿ ಮಾಡಿದರು.
ಪದವೀಧರ ಕ್ಷೇತ್ರದ ಮತದಾರರರ ಪಟ್ಟಿಯನ್ನು ಪ್ರತಿ ಚುನಾವಣೆಯಲ್ಲಿ ಮೊದಲು ಹೊಸದಾಗಿ ತಯಾರಿಸಬೇಕಾಗಿದ್ದು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮತದಾರರರ ಪಟ್ಟಿಯಲ್ಲಿರುವ ಎಲ್ಲಾ ವ್ಯಕ್ತಿಗಳೂ ಸಹ ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಮತದಾರರಾಗಿ ನೋಂದಣಿಯಾಗಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಮತದಾರರರ ಪಟ್ಟಿಯಲ್ಲಿ ತನ್ನ ಹೆಸರು ಸೇರಿಸಲು ಅರ್ಹನಾಗಿರುತ್ತಾನೆ ಎಂದು ತಿಳಿಸಿದರು.
ಈ ಬಾರಿ ಸುಮಾರು ನಾಲ್ಕು ಲಕ್ಷ ಪದವೀಧರ ಮತದಾರರ ನೋಂದಣಿ ಗುರಿ ಹೊಂದಲಾಗಿದೆ ಅರ್ಹ ಪದವೀಧರ ವ್ಯಕ್ತಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಲು ನಿಗದಿತ ನಮೂನೆ-೧೮ರ ಅರ್ಜಿಯೊಂದಿಗೆ ಪದವಿ ಪ್ರಮಾಣ ಪತ್ರದ ಪ್ರತಿ, ಅಂಕ ಪಟ್ಟಿಯ ಪ್ರತಿಯನ್ನು ಸ್ವಯಂ ದೃಢೀಕರಿಸಿ ಮತ್ತು ಗೆಜೆಟೇಡ್ ಅಧಿಕಾರಿಗಳಿಂದ ದೃಢೀಕರಿಸಿ ಅಡಕದೊಂದಿಗೆ ಸಲ್ಲಿಸಬೇಕು ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಜಿಲ್ಲೆಯಲ್ಲಿ ಜೆಡಿಯು ಪಕ್ಷದ ಕಛೇರಿ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳನ್ನು ಮತ್ತು ಮಾಲೂರಿನ ಶ್ರೀ ಸಾಯಿ ಆಸ್ಪತ್ರೆಯನ್ನು ಸಂಪರ್ಕ ಮಾಡಬಹುದಾಗಿದೆ ಎಂದು ತಿಳಿಸಿದರು
ಅಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ೨೦೨೬ ರ ಜೂನ್ ನಲ್ಲಿ ನಡೆಯಲಿದ್ದು ಬಹುತೇಕವಾಗಿ ಎನ್ ಡಿ.ಎ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಈಗಾಗಲೇ ಎನ್.ಡಿ.ಎ ಮಿತ್ರ ಪಕ್ಷಗಳಾದ ಜೆಡಿಎಸ್ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಬಿಜೆಪಿ ಪಕ್ಷದ ಜೆ.ಪಿ ನಡ್ಡಾ ಸೇರಿದಂತೆ ಎರಡು ಪಕ್ಷಗಳ ರಾಜ್ಯ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೇಳಲಾಗಿದೆ ಅವಕಾಶ ಕೊಡಲಿ ಬಿಡಲಿ ಅಂತಿಮವಾಗಿ ಕಣದಲ್ಲಿ ಇದ್ದೇ ಇರುತ್ತೇನೆ ಬೆಂಬಲಿಸುವಂತೆ ಮನವಿ ಮಾಡಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಗಂಗೂರ್ ಮಾತನಾಡಿ ಆಗ್ನೇಯ ಪದವೀಧರ ಕ್ಷೇತ್ರ ವ್ಯಾಪ್ತಿಯ ೩೩ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕೈಗೊಳ್ಳಲಾಗಿದೆ ಸರ್ವೋದಯ ತತ್ವದ ಆಧಾರದಲ್ಲಿ ಜನತಾ ಪಕ್ಷದ ಸಿದ್ದಾಂತದಲ್ಲಿ ಚುನಾವಣೆಗೆ ಸಿದ್ದವಾಗಿದ್ದು ಪ್ರಬುದ್ದ ಮತದಾರರು ಈ ಬಾರಿ ಜೆಡಿಯು ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್ ರಂಗನಾಥ್, ಉಪಾಧ್ಯಕ್ಷೆ ಶಾಂತಕುಮಾರಿ, ಮಹಿಳಾ ಘಟಕದ ಉಪಾಧ್ಯಕ್ಷೆ ಮಹೀನಾವತಿ, ಯುವ ಘಟಕದ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿಗೌಡ, ಮಾಲೂರು ತಾಲ್ಲೂಕು ಅಧ್ಯಕ್ಷ ಅಂಬರೀಶ್, ಕೋಲಾರ ತಾಲೂಕು ಅಧ್ಯಕ್ಷ ನಾಗರಾಜ್ ನಾಯಕ್, ಸಹನಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಸಹನಾ, ದೈಹಿಕ ಶಿಕ್ಷಕರ ಸಂಘದ ಟಿ.ಸಿ ಮುನಿರಾಜು, ಮುಖಂಡರಾದ ಮಹೇಶ್ ಗೌಡ, ಚೇತನ್ ಗೌಡ, ಮಂಜುನಾಥ್ ಮಲ್ಲಮ್ಮ ಮುಂತಾದವರು ಇದ್ದರು



























