ಅವಮಾನ, ಹೀಯಾಳಿಕೆ ಇರುವುದು ಲೋಕದ ಸತ್ಯ. ಆದರೆ, ಬೆಂಕಿ ಹಚ್ಚುವ ಅಥವಾ ಕತ್ತರಿ ಹಾಕುವ ಕೆಲಸ ಆಗಬಾರದು: ಆನಂದ ದೇವರು

ಜಮಖಂಡಿ:ಅ.೨೦: ತೆಗಳಿ, ಹೀಯಾಳಿ, ನಿಂದಿಸಿ, ಕುಹಕ ಮಾತುಗಳನ್ನಾಡಿ ಇನ್ನೊಬ್ಬರ ಮನವನ್ನು ನೋಯಿಸಬಾರದು. ಅಪ್ರಿಯವಾದ ಸತ್ಯಗಳನ್ನು ಹೇಳಬಾರದು ಎಂದು ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಗುರುಸಿದ್ದಯ್ಯ ಅವರವಾಡಮಠ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಅಂಗವಾಗಿ ಗುಂಡಾಳೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಸಿದ್ಧರಾಮೇಶ್ವರ ವಚನ ಆಧರಿತ ‘ಒಬ್ಬರ ಮನವ ನೋಯಿಸಿ …’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನಮ್ಮದಲ್ಲದ್ದನ್ನು ನಮ್ಮದು ಎಂದಾಗ ಕಷ್ಟಗಳು ಬರುತ್ತವೆ. ನಾಲಿಗೆ ಒಳ್ಳೆಯದಾಗಿರಬೇಕು. ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಬಾರದು ಎಂದರು.
ಓಲೆಮಠದ ಆನಂದ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕಷ್ಟ ಯಾರನ್ನೂ ಬಿಟ್ಟಿಲ್ಲ. ದೇವರನ್ನು ಬಿಟ್ಟಿಲ್ಲ. ಪರಮಾತ್ಮನೂ ವಿಷ ಕುಡಿಯುವ ಪ್ರಸಂಗ ಬಂದಿತ್ತು. ಜೀವನ ಅನ್ನುವುದು ಜೋಕಾಲಿ ಇದ್ದಂತೆ ಸುಖ-ದುಃಖಗಳ ಸಮ್ಮಿಲನವೇ ಜೀವನ ಎಂದು ಆಶೀರ್ವಚನ ನೀಡಿದರು.
ದೇವರು ಕೊಟ್ಟು-ಕಸಿದು ನೋಡುತ್ತಾನೆ. ಕೊಟ್ಟಾಗ ಹಿಗ್ಗದೆ ಕಸಿದಾಗ ಕುಗ್ಗದೆ ಸಮಚಿತ್ತದಿಂದ ಇರಬೇಕು. ಅವಮಾನ, ಹೀಯಾಳಿಕೆ ಇರುವುದು ಲೋಕದ ಸತ್ಯ. ಆದರೆ, ಬೆಂಕಿ ಹಚ್ಚುವ ಅಥವಾ ಕತ್ತರಿಯ ಕೆಲಸ ಮಾಡದೆ ಎಲ್ಲರನ್ನೂ ಒಂದುಗೂಡಿಸಲು ಸೂಜಿಯಂತೆ ವರ್ತಿಸಬೇಕು ಎಂದರು.
ಸರಸ್ವತಿ ಸಬರದ(ಹೆಗಡಿ), ಗೋಪಾಲ ತುಳಜಾಪೂರ ಸಂಗೀತ ಸೇವೆ ಸಲ್ಲಿಸಿದರು. ಸಂಗಪ್ಪ ಗಡ್ಡಿ, ನರಸಪ್ಪ ತೇಲಿ ಮಹಾಪ್ರಸಾದದ ವ್ಯವಸ್ಥೆ ಮಾಡಿದ್ದರು.
ಗುರುಸಿದ್ದಯ್ಯ ಅವರವಾಡಮಠ, ತಳಜಪ್ಪ ಜಾಲಿಬೇರಿ, ನಗರಸಭೆ ಅದ್ಯಕ್ಷ ಈಶ್ವರ ವಾಳೆನ್ನವರ ಇದ್ದಾರೆ. ಅಯ್ಯಪ್ಪಗೌಡ ಪಾಟೀಲ ನಿರೂಪಿಸಿದರು.