
ಸಂಜೆವಾಣಿ ವಾರ್ತೆ,
ವಿಜಯಪುರ, ಎ. ೪: ತಾಲೂಕಿನ ನಾಗಠಾಣ ಗ್ರಾಮದ ಮೌನೇಶ್ವರ ಮಂದಿರದಲ್ಲಿ ಶುಕ್ರವಾರ ಸಂಜೆ ಸದ್ಗುರು ಸಮರ್ಥ ರಂಗರಾವ ಮಹಾರಾಜರ ದಿವ್ಯ ಮೂರ್ತಿ ಪ್ರತಿಷ್ಠಾಪನೆ, ಧ್ಯಾನ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಚಂದ್ರಶೇಖರ ಅರಕೇರಿ ಮಾತನಾಡಿ, ವಿಜಯಪುರ ನಗರದಲ್ಲಿ ಏಪ್ರಿಲ್ ೧೦ ರಿಂದ ೧೨ ರವರೆಗೆ ಜರುಗುವ ಸದ್ಗುರು ಸಮರ್ಥ ರಂಗರಾವ ಮಹಾರಾಜರ ಧ್ಯಾನ ಮಂದಿರ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಪುನೀತರಾಗಬೇಕೆಂದು ವಿನಂತಿಸಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಸದ್ಗುರು ಸಮರ್ಥ ರಂಗರಾವ ಮಹಾರಾಜರು ಊರು, ಜಾತಿ, ಕುಲಗಳೆಂದು ತಾರತಮ್ಯ ಮಾಡದೇ ಸಾವಿರಾರು ಭಕ್ತರಿಗೆ ನಾಮೋಪದೇಶ, ಆಧ್ಯಾತ್ಮಿಕ ಸಂದೇಶ ನೀಡಿ, ಈ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಿದ್ದು ಅದ್ವಿತೀಯ. ಅವರ ತ್ಯಾಗ, ಸಮರ್ಪಣಾ ಸಂಪನ್ನ ಜೀವನವೇ ನಮಗೆಲ್ಲ ದಾರಿದೀಪ.
ಅವರ ದಿವ್ಯ ಮೂರ್ತಿ ವಿಜಯಪುರದಲ್ಲಿ ಪ್ರತಿಷ್ಠಾಪನೆ ಆಗುತ್ತಿರುವದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಮೌನೇಶ ಮಹಾಬಲಾಚಾರ್ಯ, ಕಲ್ಯಾಣಿ ಪತ್ತಾರ, ಶ್ರೀಶೈಲ ಪತ್ತಾರ, ಶ್ರೀಶೈಲ ಕತ್ನಳ್ಳಿ, ಸುಭಾಷ ಪತ್ತಾರ, ರಾಜು ಪತ್ತಾರ, ಅಶೋಕ ಬಡಿಗೇರ ಸೇರಿದಂತೆ ಗ್ರಾಮಸ್ಥರು, ಯುವಕರು ಭಾಗವಹಿಸಿದ್ದರು.




















