Home ಜಿಲ್ಲೆ ಆಂತರಿಕ ಶಾಂತಿಯೇ ನಿಜವಾದ ಸಂತೋಷದ ಮೂಲ:ಬಿ.ಕೆ. ಪಿಯೂಷ್

ಆಂತರಿಕ ಶಾಂತಿಯೇ ನಿಜವಾದ ಸಂತೋಷದ ಮೂಲ:ಬಿ.ಕೆ. ಪಿಯೂಷ್

ಬೀದರ್:ಫೆ.೧೪:ನಗರದ ಜನವಾಡಾ ರಸ್ತೆಯಲ್ಲಿರುವ ಬ್ರಹ್ಮಾಕುಮಾರಿಸ್ ಪಾವನಧಾಮ ಕೇಂದ್ರದಲ್ಲಿ ೯೦ನೇ ಮಹಾ ಶಿವರಾತ್ರಿ ಅಂಗವಾಗಿ ಶಿವಧ್ವಜಾರೋಹಣ ಭಕ್ತಿ ಭಾವಪೂರ್ಣದಿಂದ ನೆರವೇರಿತು. ಕಾರ್ಯಕ್ರಮದಲ್ಲಿ ದೆಹಲಿಯ ಖ್ಯಾತ ಪ್ರೇರಣಾದಾಯಕ ಪ್ರವಚನಕಾರರಾದ ರಾಜಯೋಗಿ ಭಾಯಿಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಿವರಾತ್ರಿಯ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದರು.

ಶಿವಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಮನಸ್ಸು ಸಾಗರದಂತೆ ಶಾಂತವಾಗಿದ್ದರೆ ಮಾತ್ರ ನಿಜವಾದ ಸುಖ ಅನುಭವಿಸಲು ಸಾಧ್ಯ. ಹೊರಗಿನ ಪರಿಸ್ಥಿತಿಗಳಿಗಿಂತ ಒಳಗಿನ ಶಾಂತಿ ಮುಖ್ಯ” ಎಂದು ತಿಳಿಸಿದರು. ‘ಶಿವರಾತ್ರಿ’ ಎಂಬ ಪದದಲ್ಲಿ ‘ರಾತ್ರಿ’ ಅಂದರೆ ಅಜ್ಞಾನ ಮತ್ತು ಅಂಧಕಾರ. ಇಂದಿನ ಸಮಾಜದಲ್ಲಿ ನೈತಿಕ, ಮಾನವೀಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಕುಸಿತವೇ ಧರ್ಮಗ್ಲಾನಿ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಎಂದು ಅವರು ವಿವರಿಸಿದರು.

ಪರಮಜ್ಯೋತಿ ಸ್ವರೂಪನಾದ ಪರಮಾತ್ಮ ಶಿವ ತಂದೆಯು ಮಾನವಕುಲವನ್ನು ದುಃಖ ಮತ್ತು ಅಶಾಂತಿಯಿAದ ಮುಕ್ತಗೊಳಿಸಲು ಈ ಅಂಧಕಾರಮಯ ಯುಗದಲ್ಲಿ ಅವತರಿಸಿದ್ದಾರೆ. ಆತ್ಮಗಳು ಪ್ರೀತಿಯಿಂದ ಶಿವನನ್ನು ಸ್ಮರಿಸಿದಾಗ ಸುಖ-ಶಾಂತಿ ಮತ್ತು ಪವಿತ್ರತೆಯನ್ನು ಪಡೆಯಲು ಸಾಧ್ಯ. ಇದೇ ಸಹಜ ರಾಜಯೋಗ ಮಾರ್ಗ ಎಂದು ತಿಳಿಸಿದರು.

ಉಪವಾಸದ ಅರ್ಥವನ್ನು ವಿವರಿಸಿದ ಅವರು, “ಉಪ ಎಂದರೆ ಹತ್ತಿರ, ವಾಸ ಎಂದರೆ ನೆಲೆಸು. ಮನಸ್ಸು ಮತ್ತು ಬುದ್ಧಿಯಿಂದ ಪರಮಾತ್ಮನ ಸಮೀಪದಲ್ಲಿರುವುದೇ ನಿಜವಾದ ಉಪವಾಸ” ಎಂದು ಹೇಳಿದರು. ಶಿವನಿಗೆ ಅರ್ಪಿಸುವ ಮೂರು ದಳದ ಬಿಲ್ವಪತ್ರೆ ಮನ-ವಚನ-ಕರ್ಮಗಳ ಸಮರ್ಪಣೆಯ ಸಂಕೇತವಾಗಿದೆ ಎಂದರು.

ನಿಜವಾದ ಜಾಗರಣೆ ಎಂದರೆ ಇಡೀ ರಾತ್ರಿ ಜಾಗೃತಿಯಾಗಿರುವುದಲ್ಲ; ಮನಸ್ಸಿನಲ್ಲಿ ಆಸುರಿ ಪ್ರವೃತ್ತಿಗಳು ಮತ್ತು ಅಜ್ಞಾನ ಪ್ರವೇಶಿಸದಂತೆ ಎಚ್ಚರಿಕೆಯಿಂದಿರುವುದು. ಪಾಪಕರ್ಮಗಳಿಂದ ದೂರವಿದ್ದು, ಅಪಶಬ್ದಗಳನ್ನು ಬಳಸದಂತೆ, ಪ್ರತಿಯೊಂದು ಚಲನವಲನಗಳ ಮೇಲೂ ಗಮನವಿಟ್ಟು ಬದುಕಬೇಕು ಎಂದು ಕರೆ ನೀಡಿದರು. ಈ ವರ್ಷದ ಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸಿ ಶಿವನಿಂದ ಸುಖ, ಶಾಂತಿ, ಪವಿತ್ರತೆ ಹಾಗೂ ಸಮೃದ್ಧಿಯನ್ನು ಪಡೆಯೋಣ ಎಂದು ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಪಾವನಧಾಮ ಕೇಂದ್ರದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೆನ್‌ಜಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, “ಮಹಾ ಶಿವರಾತ್ರಿ ಪವಿತ್ರ ಸಂದರ್ಭದಲ್ಲಿ ವ್ಯಸನಮುಕ್ತ ಜೀವನ ನಡೆಸುವ ಸಂಕಲ್ಪ ಮಾಡೋಣ. ನಮ್ಮ ಕುಟುಂಬ, ಸಮಾಜ ಹಾಗೂ ದೇಶವನ್ನು ನಶಾಮುಕ್ತಗೊಳಿಸುವ ನಿಟ್ಟಿನಲ್ಲಿ ಶ್ರಮಿಸೋಣ” ಎಂದು ಕರೆ ನೀಡಿದರು. ಈಶ್ವರೀಯ ವಿಶ್ವವಿದ್ಯಾಲಯದ ಸ್ವಾಸ್ಥ್ಯ ವಿಭಾಗದಿಂದ ವಿಶೇಷ ಜಾಗೃತಿ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ೯೦ನೇ ಶಿವ ಜಯಂತಿ ನಿಮಿತ್ತ ಕೇಕ್ ಕತ್ತರಿಸಿ ಶಿವನ ಹುಟ್ಟುಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ. ಗುರುದೇವಿ ಅಕ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

ವೇದಿಕೆ ಮೇಲೆ ಬಿ.ಕೆ. ವಿಜಯಲಕ್ಷ್ಮೀ ಬಹೆನ್‌ಜಿ, ಬಿ.ಕೆ. ಜ್ಯೋತಿ ಬಹೆನ್‌ಜಿ, ಬಿ.ಕೆ. ಮಂಗಲಾ ಬಹೆನ್‌ಜಿ, ಶಿವಶರಣಪ್ಪ ವಾಲಿ ಸೇರಿದಂತೆ ಜಿಲ್ಲೆಯ ವಿವಿಧ ಸೇವಾ ಕೇಂದ್ರಗಳ ಬ್ರಹ್ಮಾಕುಮಾರಿ ಸಹೋದರಿಯರು ಉಪಸ್ಥಿತರಿದ್ದರು.