
ಬೀದರ್ :ಏ.9: ಆರೋಗ್ಯವೇ ನಮ್ಮ ಜೀವನದ ಅತಿ ದೊಡ್ಡ ಸಂಪತ್ತು. ನಾವು ಎಷ್ಟು ಸಂಪಾದನೆ ಮಾಡಿದರೂ, ಆರೋಗ್ಯ ಚೆನ್ನಾಗಿಲ್ಲದಿದ್ದರೆ ಅದರ ಮೌಲ್ಯವೇ ಇಲ್ಲ ಹೀಗಾಗಿ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸಬೇಕು
ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಚಿಂತಲಗೇರಾ ಗ್ರಾಮದಲ್ಲಿ ರೋಟರಿ ಕ್ಲಬ್ ಹಾಗೂ ಅಂಜಲಿ ಕೊಟರಕಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಚಿತ ಆರೋಗ್ಯ ಶಿಬಿರಗಳು ಗ್ರಾಮೀಣ ಭಾಗದ ಜನರಿಗೆ ತುಂಬಾ ಉಪಯುಕ್ತವಾಗುತ್ತದೆ. ಈ ಶಿಬಿರದ ಮೂಲಕ ಗ್ರಾಮಸ್ಥರಿಗೆ ಸಮಯಕ್ಕೆ ಸರಿಯಾದ ಆರೋಗ್ಯ ತಪಾಸಣೆ, ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ದೊರೆಯುವುದು ಬಹಳ ಮಹತ್ವದ್ದು. ಹಲವಾರು ರೋಗಗಳು ಆರಂಭದ ಹಂತದಲ್ಲೇ ಪತ್ತೆಯಾದರೆ ಸುಲಭವಾಗಿ ಚಿಕಿತ್ಸೆ ನೀಡಬಹುದು. ಆದ್ದರಿಂದ ಪ್ರತಿಯೊಬ್ಬರೂ ಇಂತಹ ಅವಕಾಶಗಳನ್ನು ತಪ್ಪದೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಈ ಮಹತ್ವದ ಕಾರ್ಯವನ್ನು ಕೈಗೊಂಡಿರುವ ರೋಟರಿ ಕ್ಲಬ್ ಮತ್ತು ಅಂಜಲಿ ಕೊಟರಕಿ ಚಾರಿಟೇಬಲ್ ಟ್ರಸ್ಟ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಮಾಜದ ಸೇವೆಯತ್ತ ಅವರ ಈ ನಿಸ್ವಾರ್ಥ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ.
ಗ್ರಾಮದ ಎಲ್ಲಾ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ, ತಮ್ಮ ಆರೋಗ್ಯವನ್ನು ಪರಿಶೀಲಿಸಿಕೊಳ್ಳಿ ಹಾಗೂ ಆರೋಗ್ಯಕರ ಜೀವನವನ್ನು ನಡೆಸುವತ್ತ ಹೆಜ್ಜೆ ಇಡಿ ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಂಕರಾವ ಕೊಟರಕಿ, ಹಾವಶೆಟ್ಟಿ ಪಾಟೀಲ್, ಜಗದೀಶ್ ಖೂಬಾ, ಡಾ. ರಾಜಶೇಖರ ಸೇಡಂಕರ್, ಡಾ. ರಾಜಶೇಖರ ಪಾಟೀಲ, ಬಸವಕುಮಾರ ಪಾಟೀಲ್, ಅನೀಲ ಬೀರಾದರ,ಸುರೇಶ ಪಾಟೀಲ, ಗೀರಿಶ ಕುಲಕರ್ಣಿ, ಶಿವಗೊಂಡ, ಗೋಪಾಲ ರೆಡ್ಡಿ, ಜಗನ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.




















