
ಕಲಬುರಗಿ: ಜ.11:ನಾವು ಸಂಪಾದಿಸಿದ ಒಡವೆ, ವಸ್ತ್ರ, ಕಾಂಚಾಣಕ್ಕೆ ನಾವೇ ಕಾವಲುಗಾರರಾಗಿರಬೇಕು. ಆದರೆ ನಾವು ಸಂಪಾದಿಸಿದ ಸ್ನೇಹ, ವಿದ್ಯೆ, ವಿನಯ, ಶೀಲ ಮುಂತಾದ ಗುಣಗಳು ನಮ್ಮ ಕಾವಲುಗಾರರಾಗಿರುತ್ತಾರೆ ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ನಗರದ ಮಹಿಳಾ ಪದವಿ ಕಾಲೇಜಿನ ಸ್ನಾತಕೊತ್ತೊರ ಪದವಿ ಇತಿಹಾಸ ವಿಭಾಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯರಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಸ್ವಾಗತ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಈ ದಿನ, ಈ ಕ್ಷಣ ನಮ್ಮದು. ಇದೇ ನಮ್ಮ ಅಮೂಲ್ಯ ಸಂಪತ್ತು. ಜ್ಞಾನ ಗಳಿಸುವುದರ ಜೊತೆಗೆ ಜ್ಞಾನದ ಸದುಪಯೋಗ ಕೂಡ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಚಾರ್ಯೆ ಡಾ. ಶಾರಾದಾಮಣಿ ಪಾಟೀಲ ಮಾತನಾಡಿ, ವಿದ್ಯಾರ್ಥಿನಿಯರು ಸ್ವಾಭಿಮಾನ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿನ ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ಅದನ್ನು ಬಳಸಬೇಕು ಎಂದು ಕರೆ ನೀಡಿದರು.
ಪ್ರಕಾಶ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಮೋರಗೆ ಮಾತನಾಡಿ, ಜ್ಞಾನವೇ ಶಕ್ತಿ. ಜ್ಞಾನ ಯಾರಿಂದಲೂ ಕದಿಯಲಾಗದ ಸಂಪತ್ತು ಎಂದರು. ವಿಭಾಗದ ಮುಖ್ಯಸ್ಥೆ ಡಾ. ಅನಂತಾ, ಡಾ. ಬಸಮ್ಮ, ಡಾ. ಶಶಿಧರ ವೇದಿಕೆಯಲ್ಲಿದ್ದರು. ಅಕ್ಷತಾ ಪ್ರಾರ್ಥನೆಗೀತೆ ಹಾಡಿದರು. ಅಪ್ರೀನ್ ಸ್ವಾಗತಿಸಿದರು.
ಇದೇವೇಳೆಯಲ್ಲಿ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ವಿವಿಧ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಸತ್ಕರಿಸಲಾಯಿತು. ಡಾ. ಸುರೇಖಾ, ಪಂಡಿತ ಮಸಗುಣಕಿ, ಡಾ.ಅಶೋಕ, ಡಾ. ಜಗನ್ನಾಥ, ಡಾ. ಸಂತೋಷ ಹೂಗಾರ, ಡಾ. ಅಣವೀರಪ್ಪ ಇತರರಿದ್ದರು.






















