
ಭಾಲ್ಕಿ:ಮೇ.26: ಹಿರೇಮಠ ಸಂಸ್ಥಾನದಲ್ಲಿ ಪ್ರಸ್ತುತ ವರ್ಷದಿಂದ ಬಾಲಕರ ವಸತಿ ಶಾಲೆ ಪ್ರಾರಂಭಿಸಿ 25 ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಅನ್ನ, ಆಶ್ರಯ ನೀಡಲು ನಿರ್ಧರಿಸಲಾಗಿದೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಹಿರೇಮಠ ಸಂಸ್ಥಾನದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ ವತಿಯಿಂದ 2026-27ನೇ ಸಾಲಿನ ಭಾಲಿ ಮಠದ ಬಾಲಕರ ವಸತಿ ಶಾಲೆಯ ಕರಪತ್ರ ಬಿಡುಗಡೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀಮಠದಲ್ಲಿ ಬಡ, ಅನಾಥ ಮಕ್ಕಳಿಗೆ, ಶಿಕ್ಷಣ ಮತ್ತು ಸಂಸ್ಕಾರ ದೊರೆಯಬೇಕೆಂದು ಶ್ರೀಮಠದಲ್ಲಿ ಉಚಿತ ವಸತಿ ಶಾಲೆಯನ್ನು ಪ್ರಾರಂಭಿಸಲಾಗಿದೆ.
ಈ ವರ್ಷ 1ನೇ ತರಗತಿಗೆ 25 ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. 1ನೇ ತರಗತಿಗೆ ಪ್ರವೇಶ ಪಡೆದ ಮಕ್ಕಳಿಗೆ 10ನೇ ತರಗತಿವರೆಗೆ ಶಿಕ್ಷಣ, ಊಟ ಮತ್ತು ವಸತಿ ಉಚಿತವಾಗಿ ನೀಡಲಾಗುತ್ತದೆ. ತಂದೆ-ತಾಯಿ ಇಲ್ಲದ ಬಡಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಇಂತಹ ಮಕ್ಕಳ ಪ್ರವೇಶಕ್ಕಾಗಿ ಮೇ 31ಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲ್ಲಿದ್ದು, ಅರ್ಹರು ಅಂದು ಶ್ರೀಮಠದಲ್ಲಿ ಹಾಜರಿರಬೇಕು ಎಂದರು.
ಕರಪತ್ರ ಬಿಡುಗಡೆಗೊಳಿಸಿದ ಜಗನ್ನಾಥ ಹಲಂಗೆ ಮಾತನಾಡಿ, ಭಾಲ್ಕಿ ಶ್ರೀಮಠ ಮಾಡುತ್ತಿರುವ ಶೈಕ್ಷಣಿಕ ಸೇವೆ ಅಪೂರ್ವವಾಗಿದೆ.
ಶ್ರೀಮಠದಲ್ಲಿ ಬಡಮಕ್ಕಳಿಗೆ ಪೂಜ್ಯರು ಸುವರ್ಣಾ ಅವಕಾಶ ನೀಡಿದ್ದಾರೆ. ಬಡತನದಿಂದ ಶಿಕ್ಷಣದಿಂದ ಯಾರೂ ವಂಚಿತರಾಗಬಾರದೆಂಬ ಉದ್ದೇಶ ಪೂಜ್ಯರು ಹೊಂದಿದ್ದಾರೆ.
ಪೂಜ್ಯರ ಈ ಸಮಾಜಿಕ ಕಳಕಳಿ ಅಭಿನಂದನೀಯವಾಗಿದೆ ಎಂದು ನುಡಿದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಅನೀಲ ಮಹಾರಾಜರು ಸಮ್ಮುಖ ವಹಿಸಿದ್ದರು.
ಈ ಸಂದರ್ಭದಲ್ಲಿ ಗುಂಡಪ್ಪ ಸಂಗಮಕರ, ಎಂ.ಪಿ. ರಾಠೋಡ, ಶ್ರೀಚಂದ ಪವಾರ್ ಸೇರಿದಂತೆ ಹಲವರು ಇದ್ದರು






















