
ಕೋಲಾರ,ನ,೨೧- ಜಿಲ್ಲೆಯ ಅರಣ್ಯ ಇಲಾಖೆಯ ರೈತರ ನ್ಯಾಯಯುತ ಹಾಗೂ ಸರ್ಕಾರದಿಂದ ಕಾನೂನು ಪ್ರಕಾರ ಮಂಜೂರಾಗಿದ್ದು ಸುಮಾರು ೫೦ ವರ್ಷಗಳ ಹಿಂದಿನಿಂದ ಬದುಕುತ್ತಿರುವ ಗೋಮಾಳ ಭೂಮಿ ಕಾನೂನು ಬಾಹಿರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ರಾತ್ರಿ ವೇಳೆ ರೈತರ ಭೂಮಿಗಳನ್ನು ಕಿತ್ತುಕೊಂಡು ರೈತರನ್ನು ಭೂ ರಹಿತರನ್ನಾಗಿ ಮಾಡಿ ಭಿಕ್ಷುಕರಾಗಿ ಮಾಡಿದ್ದಾರೆ ಎಂದು ಆರೋಪಿ ಎಎಪಿ ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ವೆಂಕಟಚಲಪತಿ ಮಾತನಾಡಿ, ಅರಣ್ಯ ಇಲಾಖೆಯು ರೈತರ ಭೂಮಿಗಳನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆದುಕೊಂಡು ರೈತರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ರಾತ್ರೋ ರಾತ್ರಿ ಭೂಮಿಗಳನ್ನು ಕಸಿದುಕೊಂಡು ರೈತರ ಬೆಳೆಗಳನ್ನು ಕಳ್ಳರಂತೆ ಹಾಗೂ ಕಾಡುಪ್ರಾಣಿಗಳ ದಾಳಿಗಳಾಗುವ ರೀತಿ ಬೆಳೆ ಹಾಳು ಮಾಡಿ ದೌರ್ಜನ್ಯ ಮಾಡಿದ್ದಾರೆ, ಸರ್ಕಾರವು ರೈತರ ನೆರವಿಗೆ ನಿಂತಿಲ್ಲ, ಜಿಲ್ಲೆಯ ಎಲ್ಲಾ ರೈತರು ಕಾನೂನು ಪ್ರಕಾರ ಗೋಮಾಳಗಳಲ್ಲಿ ಸರ್ಕಾರದ ಭೂ ಮಂಜೂರಾತಿ ಆಗಿದ್ದರು ಕಳ್ಳರಂತೆ ನೋಡಿದ್ದಾರೆ ಎಂದು ಆರೋಪಿಸಿದರು.
ರೈತರು ಕನಿಷ್ಠ ೨೦ ಗುಂಟೆಯಿಂದ ಎರಡು ಎಕರೆ ಭೂಮಿಗಳನ್ನು ಪಡೆದಿದ್ದಾರೆ ಇದಲ್ಲದೆ ದಲಿತರಿಗೆ ಭೂರಹಿತರಿಗೆ ಹೆಚ್ಚಿನ ಭೂಮಿಯನ್ನು ಮಂಜೂರು ಮಾಡಿದ್ದಾರೆ, ಕಾನೂನಿನ ರೀತಿ ಪಡೆದಿರುವ ಭೂಮಿ ಕಾನೂನುಬಾಹಿರವಾಗಿ ಅರಣ್ಯ ಇಲಾಖೆ ತಮ್ಮ ಹಕ್ಕನ್ನು ಸ್ಥಾಪಿಸಿ ದೀನ ದಲಿತರಿಂದ ಸಣ್ಣ ರೈತರಿಂದ ಭೂಮಿ ಕಸಿದುಕೊಂಡು ರೈತರನ್ನು ಹೊರಗೆ ಹಾಕಿದ್ದಾರೆ, ರೈತರ ಬೆಳೆಗಳನ್ನು ನಾಶ ಮಾಡಿ ಯಾವುದೇ ಪರಿಹಾರ ನೀಡದೆ ಹಾಗೂ ಪರ್ಯಾಯ ಭೂಮಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ನಿರಂತರ ದೌರ್ಜನ್ಯ ಎಸೆಗುತ್ತಿದೆ ಇದು ಸಂವಿಧಾನ ವಿರೋಧಿ ಧೋರಣೆ ಎಂದು ಆರೋಪಿಸಿದರು.
ಇತ್ತೀಚೆಗೆ ಜಿಲ್ಲಾ ಅರಣ್ಯ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಕೋಲಾರ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ೧೦,೦೦೦ ಎಕರೆ ರೈತರು ಕಾನೂನುಬಾಹಿರವಾಗಿ ಅತಿಕ್ರಮ ಪಡಿಸಿಕೊಂಡಿದ್ದಾರೆ, ಇದರಲ್ಲಿ ಸುಮಾರು ೩೦೦೦ ಎಕರೆ ಈಗಾಗಲೇ ನಮ್ಮ ವಶಕ್ಕೆ ತೆಗೆದುಕೊಂಡಿದ್ದಾಗಿ ಇನ್ನು ಉಳಿದಿರುವ ೭೦೦೦ ಎಕರೆಗಳನ್ನು ಹಿಂಪಡೆಯಲು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ ಅರಣ್ಯ ಇಲಾಖೆಯವರು ಖಾಸಗಿ ಗುಂಡಾಗಳಂತೆ ತಮ್ಮಲ್ಲಿ ಯಾವುದೇ ದಾಖಲೆಗಳನ್ನು ಇಲ್ಲದಿದ್ದರೂ ರೈತರ ಭೂಮಿಗೆ ಕ್ರಿಮಿನಲ್ ಗಳ ರೀತಿ ನುಗ್ಗಿ ಅತಿಕ್ರಮ ಪ್ರವೇಶ ಮಾಡಿ ಭೂಮಿ ಪಡೆದಿದ್ದಾರೆ ಸುಮಾರು ೧೦ ಸಾವಿರ ಕುಟುಂಬಗಳನ್ನು ಬೀದಿಗೆ ತಂದಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಪಿ.ನಾಗರಾಜ್, ಸುರೇಶ್, ಬಾಲಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್, ಕಾರ್ಯದರ್ಶಿ ಗೂಳಿಗಾನಹಳ್ಳಿ ಶೇಷನ್, ಜಿಲ್ಲಾ ಕಾರ್ಯಾಧ್ಯಕ್ಷ ಬಾಬು, ಶ್ರೀನಿವಾಸಪುರ ಮಂಜುನಾಥ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಕೆ ಸಿ, ಕಾರ್ಯದರ್ಶಿ ವಿಜಯ್ ಕುಮಾರ್, ಉಪಾಧ್ಯಕ್ಷ ರಾಮೇಗೌಡ ಇದ್ದರು.

























