
ಬೆಂಗಳೂರು,ನ.೭-ಕೌಟುಂಬಿಕ ಕಲಹಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ತನ್ನಿಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹಾರೋಹಳ್ಳಿ ಬಳಿ ನಡೆದಿದೆ.
ಹಾರೋಹಳ್ಳಿಯ ಚಿಕ್ಕ ಸಾದೇನಹಳ್ಳಿ ನಿವಾಸಿ ಅಶ್ವಥ್ (೩೮) ಆತ್ಮಹತ್ಯೆ ಮಾಡಿಕೊಂಡವರು.ತಂದೆ ನೀಡಿದ್ದ ವಿಷ ಕುಡಿದಿದ್ದ ಇಬ್ಬರು ಮಕ್ಕಳ ಪೈಕಿ ಒಬ್ಬರು ಚೇತರಿಸಿಕೊಂಡಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಅಶ್ವಥ್ ಮತ್ತು ಪತ್ನಿ ನಡುವೆ ಎರಡೂರು ದಿನದ ಹಿಂದೆ ಜಗಳವಾಗಿತ್ತು. ಆಗ ಪತ್ನಿ ಮನೆ ಬಿಟ್ಟು ಹೋಗಿದ್ದರು. ಇದರಿಂದ ಬೇಸತ್ತ ಅಶ್ವಥ್ ಅವರು ಇಬ್ಬರೂ ಮಕ್ಕಳಿಗೆ ವಿಷ ಕುಡಿಸಿದ್ದಾರೆ. ಬಳಿಕ, ತಾವೂ ಮದ್ಯದೊಂದಿಗೆ ವಿಷ ಸೇವಿಸಿದ್ದಾರೆ. ಪ್ರಜ್ಞಾಹೀನರಾಗಿ ಮನೆಯಲ್ಲಿ ಬಿದ್ದಿದ್ದ ಮೂವರನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಸಮೀಪದ ಆಸತೆಗೆ ಸೇರಿಸಿದಾರೆ.
ಆದರೆ, ಅಷ್ಟೊತ್ತಿಗಾಗಲೇ ಅಶ್ವಥ್ ಅವರು ಕೊನೆಯುಸಿರೆಳೆದಿದ್ದರು. ಮಕ್ಕಳಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಶ್ವಥ್ ಅವರ ಶವವನ್ನು ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಹಾರೋಹಳ್ಳಿ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



























