
ಕಲಬುರಗಿ:ಮೇ.21: ನಮ್ಮ ದೇಶ ಸೇರಿದಂತೆ ವಿಶ್ವದಲ್ಲಿ ದಿನನಿತ್ಯಲೂ ನೂರಾರು ಅಮಾಯಕರ ಸಾವಿಗೆ ಕಾರಣವಾಗಿ, ಜಗತ್ತನ್ನು ತಲ್ಲಣಗೊಳಿಸಿ, ಅಶಾಂತಿಯುತವಾದ ವಾತಾವರಣದ ಸೃಷ್ಟಿಗೆ ಕಾರಣೀಕೃತವಾದ ಭಯೋತ್ಪಾದನೆ ಎಂಬುದು ದೊಡ್ಡ ಸಾಮಾಜಿಕ ಪಿಡುಗಾಗಿದೆ. ರಾಷ್ಟ್ರದ ಶಾಂತಿ, ಅಭಿವೃದ್ಧಿಗೆ ಇದು ತೊಡಕಾಗಿದ್ದು, ಅದರ ನಿರ್ಮೂಲನೆಗೆ ಎಲ್ಲರೂ ಜೊತೆಗೂಡಿ ಬೇರು ಸಹಿತ ಸರ್ವನಾಶ ಮಾಡುವ ದೃಢ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ. ಭಯೋತ್ಪಾದನೆಗೆ ಎಂದಿಗೂ ಕೂಡಾ ಪ್ರತ್ಯಕ್ಷವಾಗಲಿ ಅಥವಾ ಪರೋಕ್ಷವಾಗಿ ಆಗಲಿ ಬೆಂಬಲಿಸುವುದು ದೇಶದ್ರೋಹ ಕೆಲಸವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಗಂಗಾ ನಗರದ ‘ಶ್ರೀ ವಿವೇಕಾನಂದ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ಮಳ್ಳಿ ಮಾತನಾಡಿ, ಶಾಂತಿ, ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ದೇಶದಲ್ಲಿ ಕೆಲವು ದುಷ್ಟ ಶಕ್ತಿಗಳು ಸಮಾಜದಲ್ಲಿ ಅರಾಜಕತೆಯ ವಾತವರಣವನ್ನು ಸೃಷ್ಟಿಸುವ ಕಾರ್ಯವನ್ನು ಮಾಡುತ್ತಿವೆ. ಅಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯ ಒಕ್ಕೋರಲಿನಿಂದ ಖಂಡಿಸುವ ಮೂಲಕ, ಅದರ ನಾಶಕ್ಕೆ ಶ್ರಮಿಸಬೇಕಾಗಿದೆ ಎಂದು ಮಾರ್ಮಿಕವಾಗು ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರೌಢಶಾಲಾ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಗುಡಬಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕಾವೇರಿ ಹೂನಳ್ಳಿ, ಶಿಕ್ಷಕಿ ಶೃತಿ ಕುಲಕರ್ಣಿ, ಸೇವಕಿ ಪೂಜಾ ನಾಟಿಕಾರ ಸೇರಿದಂತೆ ಇನ್ನಿತರರಿದ್ದರು.