ಮಾದಕ ದ್ರವ್ಯ ಸೇವನೆ ಅಪಾಯಕಾರಿ

ಹುಳಿಯಾರು, ಡಿ. ೨೮- ವಿದ್ಯಾರ್ಥಿ ಸಮುದಾಯವನ್ನು ದಾರಿ ತಪ್ಪಿಸುತ್ತಿರುವ ಮಾದಕ ದ್ರವ್ಯಗಳು ಅವರ ವ್ಯಾಸಂಗಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಹಾಗೆಯೇ ದೈಹಿಕ ಮತ್ತು ಮಾನಸಿಕವಾಗಿ ಮನುಷ್ಯನ ಜೀವನವನ್ನು ಜರ್ಜರಿತವನ್ನಾಗಿ ಮಾದಕ ದ್ರವ್ಯಗಳು ಮಾಡುತ್ತಿವೆ. ಮಾದಕ ದ್ರವ್ಯಗಳನ್ನು ಮಾರಾಟ ಮಾಡುವುದು ಮತ್ತು ಸೇವಿಸುವುದು ಅಪರಾಧವಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳ ಬಳಕೆಯೂ ಕ್ರಿಮಿನಲ್ ಅಪರಾಧವಾಗಿದೆ ಎಂದು ಚಿಕ್ಕನಾಯಕನಹಳ್ಳಿ ವೃತ್ತ ನಿರೀಕ್ಷಕರಾದ ಜನಾರ್ದನ್ ಹೇಳಿದರು.


ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರು ಪೊಲೀಸ್ ಠಾಣೆಗಳ ಸಂಯುಕ್ತಾಶ್ರಯದಲ್ಲಿ ’ಅಪರಾಧ ತಡೆ ಮಾಸಾಚರಣೆ’ ಹಾಗೂ ’ಮಾದಕ ವ್ಯಸನ ಮುಕ್ತ ಅಭಿಯಾನ’ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕಾನೂನಿನ ಚೌಕಟ್ಟುಗಳು, ಸಂಚಾರಿ ನಿಯಮಗಳು ಹಾಗೂ ಸೈಬರ್ ಅಪರಾಧಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಿದರು.


ಹುಳಿಯಾರು ಪೊಲೀಸ್ ಉಪನಿರೀಕ್ಷಕರಾದ ಚಿತ್ತರಂಜನ್ ಮಾತನಾಡಿ, ಮೋಜು ಮಸ್ತಿ ಮತ್ತು ಕ್ಷಣಿಕ ಸುಖ ಅನುಭವಿಸಲು ಇಂದು ಯುವ ಜನಾಂಗ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಯುವ ಸಮುದಾಯವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ ಕೂಡಾ ಇದಾಗಿದೆ. ಮತ್ತು ಭರಿಸುವ ಮಾದಕ ವ್ಯಸನಗಳು ನಮ್ಮ ಶಾರೀರಿಕ ದೃಢತೆಯ ಮೇಲೆ ದುಷ್ಪರಿಣಾಮ ಬೀರಿ ವ್ಯಕ್ತಿಯನ್ನು ಜೀವನ ಪರ್ಯಂತ ಬದುಕಿ ಸತ್ತಂತೆ ಮಾಡುತ್ತದೆ. ಶರೀರದ ನರಮಂಡಲದ ಮೇಲೆ ಈ ಮಾದಕ ವ್ಯಸನಗಳಿಂದ ವ್ಯತಿರಿಕ್ತ ಪರಿಣಾಮ ಉಂಟಾಗಿ ವ್ಯಕ್ತಿಯು ಸಾವಿನ ದವಡೆಗೆ ದೂಡಲ್ಪಡುತ್ತಾನೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.


ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ವೀರಣ್ಣ ಎಸ್.ಸಿ., ಹುಳಿಯಾರು ಪೊಲೀಸ್ ಸಹಾಯಕ ಉಪನಿರೀಕ್ಷಕರಾದ ರಂಗಧಾಮಯ್ಯ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಯೋಗೀಶ್ ಬಿ., ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಲಕ್ಷ್ಮೀ ಎಸ್., ಕನ್ನಡ ವಿಭಾಗದ ಮುಖ್ಯಸ್ಥರಾದ ಜಗದೀಶ್, ಇತಿಹಾಸ ವಿಭಾಗದ ಮುಖ್ಯಸ್ಥರಾದ ಧನಂಜಯ್ ಮತ್ತಿತರರು ಭಾಗವಹಿಸಿದ್ದರು.