ಡಾ. ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ

ಬೆಂಗಳೂರು, ಸೆ.11- ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಹಾಗೂ ನಟಿ ಬಿ.ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶ್ತಸ್ತಿ ಘೋಷಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.


ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಜಮೀನು ನೀಡಬೇಕೆಂಬ ಬಗ್ಗೆ ಅಭಿಮಾನಿಗಳು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದರು.


ನಟ ವಿಷ್ಣುವರ್ಧನ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ಪತ್ನಿ ಭಾರತಿ ಮತ್ತು ಅಳಿಯ ಅನಿರುದ್ಧ್‌, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.


ಈ ಸಂಬಂಧ ವಿಷ್ಣು ಅಭಿಮಾನಿಗಳು ಸಹ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಚಲನಚಿತ್ರ ರಂಗಕ್ಕೆ ವಿಷ್ಣುವರ್ಧನ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದೆ.


1971ರಲ್ಲಿ ಬೆಳ್ಳಿತೆರೆಗೆ ಪ್ರವೇಶಿಸಿದ ವಿಷ್ಣುವರ್ಧನ್, ವಂಶವೃಕ್ಷ ಅವರ ಮೊದಲ ಚಿತ್ರ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ನಿರ್ದೇಶನದ ನಾಗರಹಾವು ಸಿನಿಮಾ ವಿಷ್ಣುವರ್ಧನ್‌ ಅವರ ಸಿನಿಮಾ ಬದುಕಿಗೆ ತಿರುವು ನೀಡಿತು. ಭೂತಯ್ಯನ ಮಗ ಅಯ್ಯು, ಗಂಧದ ಗುಡಿ ಸಿನಿಮಾಗಳಲ್ಲೂ ಗಮನ ಸೆಳೆದರು.


ನಂತರ ಸಾಲು ಸಾಲು ಸಿನಿಮಾಗಳ ಮೂಲಕ ಕನ್ನಡ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಆಪ್ತರಕ್ಷಕ ವಿಷ್ಣು ಅಭಿನಯದ ಕೊನೆ ಚಿತ್ರ. ಇದು 2010 ರಲ್ಲಿ ತೆರೆ ಕಂಡಿತ್ತು.


ಅಭಿನಯ ಸರಸ್ವತಿ ಎಂದೆ ಖ್ತಾತಿಯಾಗಿದ್ದ ನಟಿ ಬಿ.ಸರೋಜಾದೇವಿ, 1955 ರಲ್ಲಿ ತೆರೆಕಂಡ ಮಹಾಕವಿ ಕಾಳಿದಾಸ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.


ಕನ್ನಡದ ಮೊದಲ ಮಹಿಳಾ ಸೂಪರ್‌ಸ್ಟಾರ್‌ ಎಂಬ ಬಿರುದನ್ನೂ ಪಡೆದುಕೊಂಡರು. 1970ರ ದಶಕದ ವರೆಗೂ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು.


ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸರೋಜಾದೇವಿ ಜು.14ರಂದು ನಿಧನರಾಗಿದ್ದರು.