ನಿಮ್ಮ ನಾಯಕರನ್ನು ಹಂದಿ, ನಾಯಿ ಎಂದರೆ ಸ್ವೀಕರಿಸುತ್ತೀರಾ

ಬಿಜೆಪಿಗೆ ಪ್ರಿಯಾಂಕ ಸವಾಲು

ಬೆಂಗಳೂರು, ಮೇ ೨೩- ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯವರ ನಾಯಿ ಎಂಬ ನಿಂದನೆಗೆ ನಿಮ್ಮ ಹಾಗೂ ನಿಮ್ಮ ಪಕ್ಷದ ಅನುಮೋದನೆ ಇದೆಯೇ, ಇಂತಹ ಕೀಳು ಸಂಸ್ಕೃತಿಯ ರಾಜಕಾರಣಕ್ಕೆ ನಿಮ್ಮ ಸಹಮತ ಇದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್ ರವರನ್ನು ಪ್ರಶ್ನಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು, ನಾಳೆಯಿಂದ ನಿಮ್ಮ ಹಾಗೂ ನಿಮ್ಮ ನಾಯಕರಿಗೆ ನಾಯಿ, ನರಿ, ಹಂದಿ ಎಂಬಂತಹ ಪದಗಳಿಂದ ಕರೆದರೆ ತಾವು ಸಂತೋಷದಿಂದ ಸ್ವೀಕರಿಸುತ್ತೀರಾ ಎಂದು ಸವಾಲು ಹಾಕಿದ್ದಾರೆ.


ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ ಖರ್ಗೆ ಅವರು, ಹಿಟ್ಲರ್ ಕಾಲದಲ್ಲಿ ಗೋಬೆಲ್ಸ್ ಎಂಬುವನಿದ್ದ, ಅವರು ಆಗ ಬಿಜೆಪಿಗರ ರೂಪದಲ್ಲಿ ಪುನರಾವತಾರ ಪಡೆದಿದ್ದಾನೆ. ಗಂಟೆಗೊಂದು ಸುಳ್ಳು, ಗಳಿಗೆಗೊಂದು ಬಣ್ಣ. ಇವು ಬಿಜೆಪಿಯವರು ಹುಟ್ಟಿನಿಂದಲೇ ಮೈಗೂಡಿಸಿಕೊಂಡು ಬಂದ ಗುಣ ಎಂದು ಟೀಕಿಸಿದ್ದಾರೆ.


ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ನಾನು ಗಾದೆ ಮಾತು ಹೇಳಿದೆ, ಬಸವಣ್ಣನವರ ವಚನ ಹೇಳಿದೆ, ಅವರೇಕೆ ನನಗೆ ಹೇಳಿದರು ಅಂದುಕೊಳ್ಳಬೇಕು ಎಂದೆಲ್ಲಾ ಹೇಳಿದ್ದಾರೆ. ನಾರಾಯಣಸ್ವಾಮಿಯವರೇ ಗೋಸುಂಬೆಗೂ ನಿಮಗೂ ಬಣ್ಣ ಬದಲಿಸುವ ಕಾಂಪಿಟೇಷನ್ ಇಟ್ಟರೆ ಗೆಲುವು ನಿಮ್ಮದೇ ಎಂದು ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದ್ದಾರೆ.


ಮೊದಲು ಪ್ರಿಯಾಂಕ ಖರ್ಗೆಯೇ ಬೊಗಳುವ ನಾಯಿ ಎಂದಿರಿ, ನಂತರ ಇದಕ್ಕೆ ವಿಷಾದಿಸುತ್ತೇನೆ ಎಂದಿರಿ, ಆನಂತರ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದಿರಿ, ತದ ನಂತರ ಗಾದೆ ಹೇಳಿದೆ, ಅವರು ನನಗೆ ಹೇಳಿದರು ಎಂದು ಭಾವಿಸಿಕೊಂಡಿದ್ದಾರೆ ಎಂದೆಲ್ಲಾ ಮಾತನಾಡಿದ್ದೀರಿ, ಒಂದೊಂದು ಹೊತ್ತಿಗೆ ಒಂದೊಂದು ರೀತಿ ಮಾತನಾಡುವ ನಾರಾಯಣಸ್ವಾಮಿಯವರೇ ನಿಮಗೆ ನಾಲಿಗೆ ಹಿಡಿತದಲ್ಲಿಲ್ಲವೇ ಅಥವಾ ಬುದ್ಧಿಯೇ ಹಿಡಿತದಲ್ಲಿ ಇಲ್ಲವೇ ಎಂದು ಪ್ರಿಯಾಂಕ್ ವಾಗ್ದಾಳಿ ನಡೆಸಿದ್ದಾರೆ.


ಸ್ಪಷ್ಟವಾಗಿ ನನ್ನ ಹೆಸರನ್ನೇ ಬಳಸಿ ನಾಯಿ ಎಂದಿರುವ ತಾವು ಈಗ ಅವರೇ ಭಾವಿಸಿಕೊಂಡಿದ್ದಾರೆ ಎನ್ನುತ್ತಿದ್ದೀರಲ್ಲಾ, ಈ ಹಸಿ ಹಸಿಯಾದ ಸುಳ್ಳು ಹೇಳುವುದಕ್ಕೆ ಆರ್‌ಎಸ್‌ಎಸ್ ಕಚೇರಿಯಲ್ಲಿ ಎಷ್ಟು ದಿನ ತರಬೇತಿ ಪಡೆದಿದ್ದೀರಿ ಎಂದು ಪ್ರಿಯಾಂಕ ಖರ್ಗೆ ಕಿಡಿಕಾರಿದ್ದಾರೆ.


ಬಿಜೆಪಿ ನಾಯಕರು ಒಂದೇ ಒಂದು ಪ್ರಶ್ನೆ ಉತ್ತರಿಸಲಿ. ಸುಳ್ಳಿನಿಂದ ಬಿಜೆಪಿ ಹುಟ್ಟಿತಾ ಅಥವಾ ಬಿಜೆಪಿಯಿಂದಲೇ ಸುಳ್ಳು ಹುಟ್ಟಿತಾ ಎಂದು ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್ ಮಾಡಿದ್ದಾರೆ.