ಕೊಳಗೇರಿ ಮಂಡಳಿಯ 1000 ಮನೆಗಳು ಶೀಘ್ರದಲ್ಲಿ ಫಲಾನುಭವಿಗಳಿಗೆ ಹಸ್ತಾಂತರ ಮಾಡುವಂತೆ ಆಗ್ರಹ

ಚಿತಾಪುರ; ನ.12:ಪಟ್ಟಣದ ನಾಗಾವಿ ದೇವಸ್ಥಾನದ ಹತ್ತಿರ ನಿರ್ಮಾಣಗೊಂಡಿರುವ 1000 ಮನೆಗಳನ್ನು ಬರುವ ಡಿಸೆಂಬರ್ 30 ರೊಳಗೆ ಫಲಾನುಭವಿಗಳಿಗೆ ಹಸ್ತಾಂತರ ಮಾಡಬೇಕು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಕಲಬುರಗಿ ನಗರದಲ್ಲಿ ಇರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಆಪ್ತ ಸಹಾಯಕರಿಗೆ, ಪ್ರಾದೇಶಿಕ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.
ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಿಕಾಂತ್ ಬೋವಿ ತಾಂಡೂರಕರ್ ಮಾತನಾಡಿ, ಪಟ್ಟಣದ ನಾಗಾವಿ ಹತ್ತಿರ ನಿರ್ಮಾಣವಾಗಿರುವ ಮನೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ, ಫಲಾನುಭವಿಗೆ ಮನೆಗಳು ಶೀಘ್ರ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದರು.
2018 ರಲ್ಲಿ ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ನಿರ್ಮಾಣವಾದ 1000 ಮನೆಗಳು ಸುಮಾರು 8 ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ 2 ಮಾರ್ಚ್ 2024 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಳಗೇರಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಮಂಡಳಿಯ ಅಧಿಕಾರಿಗಳು, ವಿಡಿಯೋ ಕಾನ್ಫರೆನ್ಸ್ ಮುಖಾಂತರ ಮನೆಗಳ ಉದ್ಘಾಟನೆ ಮಾಡಲಾಗಿದೆ 1 ವರ್ಷ 6 ತಿಂಗಳ ನಂತರ ಜಿಲ್ಲಾಧಿಕಾರಿಗಳು, ಕೊಳಗೇರಿ ಮಂಡಳಿಯ ಅಧಿಕಾರಿಗಳು, ಸಹಾಯಕ ಆಯುಕ್ತರು ಸೇಡಂ ತಹಶೀಲ್ದಾರರು ಚಿತ್ತಾಪುರ, ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರು, ಮುಖ್ಯಾಧಿಕಾರಿಗಳು ಫಲಾನುಭವಿಗಳ ಸಮ್ಮುಖದಲ್ಲಿ ಕಳೆದ ಸೆಪ್ಟೆಂಬರ್ 12 ರಂದು ಮನೆಗಳು ಆನ್ ಲೈನ್ ಮುಖಾಂತರ ಲಾಟರಿ ಮಾಡುವ ಮೂಲಕ ಫಲಾನುಭವಿ ಗಳಿಗೆ ಮನೆಗಳ ಅಂಕಿ ಸಂಖ್ಯೆ ನೀಡಿದ್ದಾರೆ ಫಲಾನುಭವಿಗಳು ವಂತಿಕೆ ಹಣ ಪಾವತಿಸಿದ್ದಾರೆ. ಮಂಡಳಿಯ ಅಧಿಕಾರಿಗಳು ಒಂದು ತಿಂಗಳ ಒಳಗಾಗಿ ಮೂಲ ಹಕ್ಕು ಪತ್ರ ಮನೆಗಳ ಹಸ್ತಾಂತರ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಎರಡು ತಿಂಗಳಾದರೂ ಮನೆಗಳು ಹಸ್ತಾಂತರ ಮಾಡದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಇದರಿಂದ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿದ್ಯುತ್ ಮೀಟರ್, ನೀರು, ರಸ್ತೆ ಚರಂಡಿ, ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಹಂಚಿಕೆ ಮಾಡಬೇಕು, ಕಟ್ಟಿದ ಮನೆಗಳು ಬಿರುಕು ಬಿಡುತ್ತಿವೆ, ಕಿಟಕಿಗಳು ಒಡೆದಿವೆ ಬಾಗಿಲು ಮುರಿದಿವೆ, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ, ಬಡವರ ಕನಸಿನ ಸೂರು ಮನೆ ಕಟ್ಟಿದರು ವಾಸ ಮಾಡುವುದಕ್ಕೆ ಸಿಗದಿರುವುದು ದುರಂತವೇ ಸರಿ. ಚುನಾವಣೆಯ ಸಂದರ್ಭದಲ್ಲಿ ಹಸ್ತಾಂತರ ಮಾಡುತ್ತೇವೆ ಎಂದು ಹೇಳಿದ್ದಾರೆ, ಚುನಾವಣೆ ಮುಗಿದ ಮೇಲೆ ಸಂಬಂಧ ಪಟ್ಟವರು ಮರೆತು ಬಿಟ್ಟಿದ್ದಾರೆ ಹೀಗೆ ಆದರೆ ಮುಂದೆ ಫಲಾನುಭವಿಗಳಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಫಲಾನುಭವಿಗಳು ತಾಳ್ಮೆ ಕಟ್ಟೆ ಒಡೆದಿದೆ. ಹೀಗಾಗಿ ಸಂಬಂಧಪಟ್ಟವರು ಶೀಘ್ರ ಮನೆ ಹಸ್ತಾಂತರ ಮಾಡುವ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕಡೆಸೂರ್, ಉಪಾಧ್ಯಕ್ಷ ಚಂದ್ರಶೇಖರ್ ಗುಂಡುಲ್ಕರ್, ಫಲಾನುಭವಿಗಳಾದ ಎಂ.ಡಿ ಜಾವಿದ್, ಅಬ್ದುಲ್ ಗಪೂರ್, ಮಮ್ಮದ್ ಗೌಸ್, ರಾಜು ಗುತ್ತೇದಾರ್, ಸೋಮಣ್ಣ ಕಟಕೆ, ಸದಾನಂದ ಬೋವಿ, ಮಾಲನ ಬೇಗಂ, ನಾಗಮ್ಮ ಕಟಕೆ, ಎಲ್ಲಮ್ಮ ಬಸವರಾಜ, ಹನಿಜಾ ಬೇಗಂ, ತುಳಜೇಶ್ ಕಟಕೆ, ಮಹೇಶ್ ಸೇರಿದಂತೆ ಇತರರು ಇದ್ದರು.