ದೆಹಲಿ ಸ್ಫೋಟ: ಮತ್ತೊಬ್ಬ ವೈದ್ಯಕೀಯ ವಿದ್ಯಾರ್ಥಿ ಸೆರೆ

ನವದೆಹಲಿ,ನ.೧೫: ದೆಹಲಿಯಲ್ಲಿ ನಡೆದ ಕಾರು ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಚಾರಣಾ ಸಂಸ್ಥೆ (ಎನ್‌ಐಎ) ಅಲ್-ಫಲಾಹ್ ವಿಶ್ವವಿದ್ಯಾಲಯದ ಓರ್ವ ಎಂಬಿಬಿಎಸ್ ವಿದ್ಯಾರ್ಥಿಯನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದೆ.


ಬಂಧಿತನನ್ನು ನಿಸಾರ್ ಆಲಂ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಉತ್ತರ ದಿನಾಜಪುರ ಜಿಲ್ಲೆಯ ದಲ್ಖೋಲಾ ಎಂಬಲ್ಲಿ ಅವನನ್ನು ಇಂದು ಬಂಧಿಸಲಾಗಿದೆ. ದೆಹಲಿಯ ಲಾಲ್ ಕಿಲ್ಲಾ ಮೆಟ್ರೋ ನಿಲ್ದಾಣದ ಬಳಿ ಈ ವಾರದ ಆರಂಭದಲ್ಲಿ ನಡೆದ ಸ್ಫೋಟದ ಸಂಬಂಧದಲ್ಲಿ ಅವನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.


ಪಂಜಾಬಿನ ಲುಧಿಯಾನಾದ ನಿವಾಸಿಯಾದ ಆಲಂ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಒಂದು ಕುಟುಂಬ ಸಮಾರಂಭದಲ್ಲಿ ಭಾಗವಹಿಸಲು ದಲ್ಖೋಲಾಗೆ ಬಂದಿದ್ದ. ವಿಚಾರಣಾ ತಂಡಗಳು ಅವನ ಮೊಬೈಲ್ ಫೋನ್ ಸ್ಥಳವನ್ನು ಗುರುತಿಸಿ, ಶುಕ್ರವಾರ ಎನ್‌ಐಎ ತಂಡಗಳು ಅಲ್ಲಿ ತೆರಳಿ ಕಾರ್ಯಾಚರಣೆ ನಡೆಸಿವೆ.


ಆಲಂ ಅವರನ್ನು ಮೊದಲು ಇಸ್ಲಾಂಪುರ ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಲಾಗಿದೆ. ನಂತರ ಅವರನ್ನು ದಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಗೆ ಸ್ಥಳಾಂತರಿಸಲಾಗಿದೆ. ಮುಂದಿನ ವಿಚಾರಣೆಗಾಗಿ ಅವರನ್ನು ಟ್ರಾನ್ಸಿಟ್ ರಿಮಾಂಡ್ ಮೂಲಕ ದೆಹಲಿಗೆ ಕರೆದು ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಆಲಂ ಅವರ ತಾಯ್ನಾಡಾದ ಕೊನಾಲ್ ಗ್ರಾಮದ ನಿವಾಸಿಗಳು ಈ ಬಂಧನದಿಂದ ಆಘಾತಕ್ಕೊಳಗಾಗಿದ್ದಾರೆ. ಸ್ಥಳೀಯರು ಆಲಂ ಅವರನ್ನು ಮೃಧುಭಾಷಿ ಮತ್ತು ವಿಧೇಯ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಗ್ರಾಮಸ್ಥರು ಅವನು ಅಂತಹ ಚಟುವಟಿಕೆಗಳಲ್ಲಿ ತೊಡಗಿರಬಹುದಾದ ಕುರಿತು ಅನುಮಾನಿಸಲಿಲ್ಲ ಎಂದು ಹೇಳಿದ್ದಾರೆ.

ಸ್ಫೋಟದ ನಂತರ ಅಲ್-ಫಲಾಹ್ ವಿಶ್ವವಿದ್ಯಾಲಯವು ತೀವ್ರ ಪರೀಕ್ಷೆಯಲ್ಲಿದೆ. ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ ೧೨ ಜನರು ಮೃತಪಟ್ಟರು ಮತ್ತು ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಪೊಲೀಸ್ ತಂಡಗಳು ಕ್ಯಾಂಪಸ್‌ಗೆ ಹಲವಾರು ಬಾರಿ ಭೇಟಿ ನೀಡಿ ೫೦ ಜನಕ್ಕೂ ಹೆಚ್ಚು ವೈದ್ಯರನ್ನು ಪ್ರಶ್ನಿಸಿವೆ.

ವಿಚಾರಣಾ ತಂಡಗಳು ಡಾ. ಮುಝಮ್ಮಿಲ್ ಷಕೀಲ್, ಡಾ. ಶಾಹೀನ್ ಶಹೀದ್ ಮತ್ತು ಡಾ. ಉಮರ್ ಮೊಹಮ್ಮದ್ ಅವರ ಮೇಲೆ ದೃಷ್ಟಿ ಹರಿಸಿದ್ದಾರೆ. ಜೈಶ್-ಎ-ಮೊಹಮ್ಮದ್ ಗುಂಪು ಸ್ಫೋಟವನ್ನು ಯೋಜಿಸಿದೆ ಎಂದು ಅನುಮಾನಿಸಲಾಗಿದೆ.ಸ್ಫೋಟದ ಹಿಂದೆ ಇರುವ ನೆಟ್‌ವರ್ಕ್ ಅನ್ನು ಬಯಲಿಗೆ ತರುವ ಪ್ರಯತ್ನದಲ್ಲಿ ಅಧಿಕಾರಿಗಳು ವಿಚಾರಣೆಯನ್ನು ಮುಂದುವರೆಸಿದ್ದಾರೆ.