
ಬೆಂಗಳೂರು, ಜೂ. ೧- ಕರಾವಳಿ ಜಿಲ್ಲೆಗಳಲ್ಲಿ ನಡೆದಿರುವ ಅಹಿತಕರ ಘಟನೆಗಳ ನೈಜತೆ ವರದಿ ಪಡೆಯಲು ಕೆಪಿಸಿಸಿ ನಿಯೋಗ ರಚಿಸಿರುವುದನ್ನು ಟೀಕಿಸಿರುವ ರಾಜ್ಯ ಬಿಜೆಪಿ, ಕರಾವಳಿ ಜಿಲ್ಲೆಗಳಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ನಡೆದಾಗ ಮೌನವಾಗಿದ್ದ ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದೆ ಎಂದು ವ್ಯಂಗ್ಯವಾಡಿ ಕರಾವಳಿಯಲ್ಲಿ ನಡೆಯುವ ಎಲ್ಲ ಸಂಘರ್ಷಗಳಿಗೂ ಕಾಂಗ್ರೆಸ್ ಪ್ರಚೋದನೆಯೇ ಕಾರಣ ಎಂದು ವಾಗ್ದಾಳಿ ನಡೆಸಿದೆ.
ಕರಾವಳಿಯಲ್ಲಿ ಮುಸ್ಲಿಂ ಮತ ಬ್ಯಾಂಕ್ಗಾಗಿ ಕೋಮು ಸಂಘರ್ಷ ಸೃಷ್ಟಿಸಿದ್ದೇ ಕಾಂಗ್ರೆಸ್ ಎಂದು ಟೀಕಿಸಿರುವ ಬಿಜೆಪಿ, ಡಿ.ಕೆ ಶಿವಕುಮಾರ್ ಅವರೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ, ಡಿಜೆ ಹಳ್ಳಿ, ಕೆಜೆ ಹಳ್ಳಿ ದಾಳಿ ನಡೆಸಿದ ಮತಾಂಧರ ಪ್ರಕರಣಗಳನ್ನು ವಾಪಸ್ ಪಡೆದು ಮತಾಂಧರಿಗೆ ಕಾನೂನಿನ ಭಯ ಇಲ್ಲದ ಹಾಗೆ ಮಾಡಿದ್ದು ನೀವೆ ಅಲ್ಲವಾ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ದ.ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ನಡೆಯುತ್ತಿದೆ. ಆ ಪ್ರದೇಶದಲ್ಲಿ ನಿಷೇಧಿತ ಪಿಎಫ್ಐ ಭಯೋತ್ಪಾದನಾ ಸಂಘಟನೆ,ಭಯದ ವಾತಾವರಣ ಸೃಷ್ಟಿಸುತ್ತಿದೆ. ರಾಜ್ಯಸರ್ಕಾರ ಅವರನ್ನು ಹತ್ತಿಕ್ಕುವ ಬದಲು ಪೋಷಿಸುವ ಕೆಲಸ ಮಾಡುತ್ತಿದೆ. ಮುಸ್ಲಿಂ ಮತ ಬ್ಯಾಂಕ್ಗಾಗಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿದೆ ಎಂದು ಬಿಜೆಪಿ ದೂರಿದೆ.
ಬೆಂಗಳೂರಿನ ನಂತರ ಅತೀ ಹೆಚ್ಚು ತೆರಿಗೆ ಪಾವತಿಸುವ ಕರಾವಳಿ ಜಿಲ್ಲೆಗಳು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮುಂದುವರೆದಿದ್ದು, ಅಲ್ಲಿನ ಮತದಾರರು ಕಾಂಗ್ರೆಸ್ ಪಕ್ಷದ ತುಷ್ಠೀಕರಣ ರಾಜಕೀಯದ ವಿರುದ್ಧ ದೃಢವಾಗಿ ನಿಂತ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆ ನಡೆಸಿ ಕರಾವಳಿ ಶಾಂತಿಯನ್ನು ಹಾಳುಗೆಡವುತ್ತಿದೆ. ಕಾಂಗ್ರೆಸ್ ಪಕ್ಷದ ವೋಟ್ಬ್ಯಾಂಕ್ ರಾಜಕೀಯದಿಂದ ಕರಾವಳಿಯ ನೆಮ್ಮದಿ ಹಾಳಾಗಿದೆ ಎಂದು ಬಿಜೆಪಿ ದೂರಿದೆ.