ಶಾಲಾ ಮಕ್ಕಳ ಆಧಾರ್ ಅರಿವು ವಿಶೇಷ ಅಭಿಯಾನ ಕೈಗೊಳ್ಳಿ:ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್

ಕಲಬುರಗಿ: ಆ.14: ಕಲಬುರಗಿ ಜಿಲ್ಲೆಯಲ್ಲಿ ಶಾಲಾ ಮಕ್ಕಳ ಆಧಾರ್ ನೋಂದಣಿಗಾಗಿ ವಿಶೇಷ ಅಭಿಯಾನ ಕೈಗೊಳ್ಳಬೇಕು ಹಾಗೂ ಪ್ರತಿಯೊಬ್ಬರಿಗೂ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ ಆಧಾರ್ ಯೋಜನೆ ಕುರಿತಂತೆ ಸಾರ್ವಜನಿಕರ ಸಮಸ್ಯೆಗಳನ್ನು ಸಂಬಂಧಿತ ಅಧಿಕಾರಿಗಳು ತ್ವರಿತಗತಿಯಲ್ಲಿ ಪರಿಹರಿಸುವ ಮೂಲಕ ಉತ್ತಮವಾಗಿ ಆಧಾರ್ ಸೇವೆಯನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಹೇಳಿದರು.

ಇಂದು ಅವರು ಜಿಲ್ಲೆಯ ಆಧಾರ್ ಯೋಜನೆ ಪ್ರಗತಿ ಹಾಗೂ ಮೇಲ್ವಿಚಾರಣೆ ಸಮಿತಿಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ ಪ್ರತಿ ಮಗು ಸಹ ಆಧಾರ್ ಹೊಂದಿರುವುದು ಅಗತ್ಯವಾಗಿದೆ, ಶಾಲಾ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿನ ಪ್ರತಿ ಮಗವೂ ಆಧಾರ್ ಹೊಂದಿರುವ ಬಗ್ಗೆ ಪರಿಶೀಲನೆ ನಡೆಸಿ, ಆಧಾರ್ ಇಲ್ಲದ ಮಕ್ಕಳಿಗೆ ತ್ವರತಗತಿಯಲ್ಲಿ ಮಕ್ಕಳಿಗೆ ಆಧಾರ ಕಾರ್ಡ್ ಮಾಡಿಸಿಕೊಡಲು ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಶೇ 100 ರಷ್ಟು ಗುರಿ ಮುಟ್ಟಬೇಕು ಎಂದರು,

ಜಿಲ್ಲೆಯಲ್ಲಿ ಬಾಲ ಆಧಾರ್‍ಗೆ ಸಂಬಂಧಿಸದಂತೆ ಪೋಷಣ್ ಯೋಜನೆಯಲ್ಲಿ ನೋಂದಾಯಿತ ಮಕ್ಕಳ ಜನನ ಪ್ರಮಾಣಕ್ಕೂ ಹಾಗೂ ಆಧಾರ್ ಕಾರ್ಡ್ ಹೊಂದಿರುವ ಮಕ್ಕಳ ಪ್ರಮಾಣಕ್ಕೂ ಸಾಕಷ್ಟು ವ್ಯತ್ಯಾಸಗಳಿರುವುದು ಕಂಡು ಬಂದಿರುತ್ತದೆ. ಜಿಲ್ಲೆಯಲ್ಲಿ ಪೋಷಣ್ ಯೋಜನೆಯಲ್ಲಿ ನೋಂದಾಯಿತ 2,43,178 ಮಕ್ಕಳಿದ್ದು, ಆಧಾರ್ ಹೊಂದಿರುವುದು ಕೇವಲ 74,695 ಮಕ್ಕಳು, ಇನ್ನೂ 2,01,769 ಮಕ್ಕಳು ಆಧಾರ್‍ನಿಂದ ದೂರು ಉಳಿದಿರುವುದು ಕುರಿತು ಸಂಬಂಧಿತ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದರು.

ಅದೇ ರೀತಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 5,34,347 ವಿದ್ಯಾರ್ಥಿಗಳಿದ್ದು ಅದರಲ್ಲಿ 4,06,383 ವಿದ್ಯಾರ್ಥಿಗಳು ಆಧಾರ್ ಹೊಂದಿರುತ್ತಾರೆ, ಉಳಿದಂತೆ 1,27,964 ವಿದ್ಯಾರ್ಥಿಗಳಿಗೆ ಆಧಾರ್ ಮಾಡಿಸಲು ಕ್ರಮ ಕೈಗೊಳ್ಳಲು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದರು. ಇತ್ತೀಚಿನ ವರದಿ ಪ್ರಕಾರ ಜಿಲ್ಲೆಯಲ್ಲಿ ಶೇ 76.05 ವಿದ್ಯಾರ್ಥಿಗಳು ಆಧಾರ್ ಹೊಂದಿದ್ದಾರೆ.

ಜಿಲ್ಲೆಯ ಅಫ್ಜಲಪುರ 62, ಆಳಂದ 29, ಚಿಂಚೋಳಿ 26, ಚಿತ್ತಾಪುರ 24, ಜೇವರ್ಗಿ 18 ಮತ್ತು ಸೇಡಂ ತಾಲ್ಲೂಕಿನಲ್ಲಿ 20 ಆಧಾರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯಲ್ಲಿ ಒಟ್ಟು 179 ಕೇಂದ್ರಗಳಿವೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 32,94,745 ಆಧಾರ್ ಕಾರ್ಡ್‍ಗಳನ್ನು ನೀಡಲಾಗಿದ್ದು, ಅದರಲ್ಲಿ 0-5 ವರ್ಷದೊಳಗಿನ 1,35,335 ಮಕ್ಕಳು, 5-18 ವರ್ಷದೊಳಗಿನ 9,41,762 ಮಕ್ಕಳು ಹಾಗೂ 18 ದಾಟಿದ 22,17,648 ವಯಸ್ಕರರು ಆಧಾರ್ ಹೊಂದಿರುತ್ತಾರೆ.

5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಮಾಡಿಸಿರುವ ಪಾಲಕರು ತಮ್ಮ ಮಕ್ಕಳಿಗೆ 5 ವರ್ಷ ತುಂಬಿದ ನಂತರ ಮತ್ತೊಂದ ಬಾರಿ ಆಧಾರ್ ಅಪ್‍ಡೇಟ್ ಮಾಡಿಸಬೇಕು ಹಾಗೂ ಅದೇ ರೀತಿಯಲ್ಲಿ 15 ವರ್ಷ ತುಂಬಿದ ನಂತರ ಬಯೋಮೆಟ್ರಿಕ್ ಆಧಾರ್ ಮಾಡಿಸುವ ಅವಶ್ಯಕತೆ ಇರುತ್ತದೆ. ಈ ಕುರಿತಂತೆ ಪಾಲಕರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ.

5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಒಂದು ಬಾರಿಗೆ ಉಚಿತ ನವೀಕರಣಕ್ಕೆ ಅವಕಾಶವಿದೆ. ಇಲ್ಲದಿದ್ದಲ್ಲಿ ರೂ. 100 ನೀಡಬೇಕಾಗುತ್ತದೆ. ಬಯೋಮೆಟ್ರಿಕ್ ನವೀಕರಣ ಸಮಯದಲ್ಲಿ ಮಾಡಿದರೆ ಉಚಿತವಾಗಿದ್ದು, ಪ್ರತ್ಯೇಕವಾಗಿ ರೂ. 50 ಶುಲ್ಕ ಪಾವತಿಸಿ ನವೀಕರಣ ಮಾಡಬಹುದು.

ಪ್ರತಿಯೊಂದು ಮಗು ಆಧಾರ್ ಕಾರ್ಡ ಹೊಂದುವುದು ಅಗತ್ಯವಾಗಿದ್ದು, ಈ ಹಿನ್ನಲೆಯಲ್ಲಿ ಪ್ರತಿ ಶಾಲೆಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಸಹಕಾರದೊಂದೊಗೆ ರೂಟ್ ಮ್ಯಾಪ್ ಹಾಕಿಕೊಳ್ಳಬೇಕೆಂದು ಸೂಚನೆ ನೀಡಿದರು.

ಆಧಾರ್‍ನಲ್ಲಿ ಆವ್ಯವಹಾರ ನಡೆದರೆ ಆಧಾರ್ 2016ರ ಕಾಯ್ದೆ ಪ್ರಕಾರ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಹೊಸದಾಗಿ ಆಧಾರ ನೋಂದಣಿ, ಲಿಂಗ, ಜನ್ಮ ದಿನಾಂಕ ವಿಳಾಸ ಮೊಬೈಲ್ ಸಂಖ್ಯೆಗಳ ಸರಿಪಡಿಸುವಿಕೆ ನವೀಕರಣಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಸರಿಪಡಿಸಲು ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಡೆದುಕೊಳ್ಳತಕ್ಕÀದು, ನಿಗದಿತ ಹಣಕ್ಕಿಂತ ಹೆಚ್ಚಿನ ಹಣ ಪಡೆದಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು. ಯುಐಡಿಎಐನ್ ಸಹಾಯಕ ವ್ಯವಸ್ಥಾಪಕ ಡೇವಿಡ್ ಆಧಾರ್ ನೋಂದಣಿಯ ಬಗ್ಗೆ ಮಾತನಾಡಿದರು.

ಅನಾಥ ಮಕ್ಕಳಿಗೆ ಆಧಾರ ಕಾರ್ಡ್ ವಿತರಣೆ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 10 ಅನಾಥ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಕೊಡಲಾಗಿದ್ದು, ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಮೂರು ಜನ ಅನಾಥ ಮಕ್ಕಳಿಗೆ ಆಧಾರ ಕಾರ್ಡ್ ಸಾಂಕೇತಿಕವಾಗಿ ವಿತರಿಸಿದರು. ಅನಾಥ ಮಕ್ಕಳಾದ 15 ವರ್ಷದ ನಾಗಮ್ಮ, 14 ವರ್ಷದ ಗಾಯಿತ್ರಿ ಹಾಗೂ 10 ವರ್ಷದ ಅಪ್ಪುರಾಜ ಇವರು ಮೊದಲ ಬಾರಿಗೆ ಆಧಾರ್ ಪಡೆದ ಖುಷಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಯುಐಡಿಎಐಎನ್ ಸಹಾಯಕ ವ್ಯವಸ್ಥಾಪಕ ಡೇವಿಡ್, ಉಪನಿರ್ದೇಶಕ ಗುಲ್ಷನ್ ಕುಮಾರ, ಇ-ಗವರ್ನೆನ್ಸ್ ವ್ಯವಸ್ಥಾಪಕರ ಬಸವ ಕಿರಣ ಭೀಮಳ್ಳಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶ ಸೂರ್ಯಕಾಂತ ಮದಾನೆ, ಜಿಲ್ಲಾ ಸಮಾಲೋಚಕರಾದ (ಆಧಾರ) ಆನಂದ ಗಡಾಳೆ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.