ಮಾದಕ ವ್ಯಸನದ ದಾಸರಾಗಿರುವ ಯುವ ಸಮೂಹವನ್ನು ರಕ್ಷಿಸಲು ಕರೆ

ತುಮಕೂರು, ಜು. ೫- ಇಂದಿನ ಯುವ ಜನತೆಯು ಮೋಜು ಮಸ್ತಿ ತಡರಾತ್ರಿಯ ಪಾರ್ಟಿ ಎಂದು ಜೀವನ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಹದಿಹರೆಯದ ವಯಸ್ಸಿನಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಮಾಜದ ಭವಿಷ್ಯ ರೂಪಿಸುವ ಇಂದಿನ ಯುವ ಜನತೆ ಮಾದಕ ವ್ಯಸನದ ಹಿಂದೆ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಇದರಿಂದ ಈ ಯುವ ಸಮೂಹವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಸೈಕಿಯಾಟ್ರಿಕ್ ನರ್ಸಿಂಗ್ ವಿಭಾಗದ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಭಿತ್ತಿ ಪತ್ರ ಹಿಡಿದು ಜಾಥಾ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.


ಟೌನ್‌ಹಾಲ್ ವೃತ್ತದಿಂದ ನರ್ಸಿಂಗ್ ವಿದ್ಯಾರ್ಥಿಗಳು ಯುವಕರೇ ಎಚ್ಚೆತ್ತುಕೊಳ್ಳಿ ಮದ್ಯಪಾನ, ಧೂಮಪಾನದ ದಾಸರಾಗಬೇಡಿ ಮಾದಕ ವ್ಯಸನಕ್ಕೆ ಒಳಗಾಗಬೇಡಿ ಎಂದು ಘೋಷ ವಾಕ್ಯಗಳೊಂದಿಗೆ ಬಿತ್ತಿ ಪತ್ರಗಳನ್ನು ಹಿಡಿದು ನಗರದ ಚರ್ಚ್ ಸರ್ಕಲ್ ಮೂಲಕ ದೇವರಾಜ ಅರಸು ಸರ್ಕಾರಿ ಬಸ್ ಟರ್ಮಿನಲ್ ಗೆ ಆಗಮಿಸಿ ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ಫ್ಲಾಶ್ ಮೊಬ್ ಮೂಲಕ ಆಕರ್ಷಿತ ನೃತ್ಯ ಮತ್ತು ನಾಟಕ ಪ್ರದರ್ಶನದೊಂದಿಗೆ ಇಂದಿನ ಯುವ ಜನಾಂಗ ಎತ್ತ ಸಾಗುತ್ತಿದೆ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದರ ಕುರಿತು ವಿದ್ಯಾರ್ಥಿಗಳು ಅರಿವು ಮೂಡಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ನರ್ಸಿಂಗ್ ವಿಭಾಗದ ಮುಖ್ಯ ಉಪನ್ಯಾಸಕ ಮೂರ್ಸಿ ದೇವಪ್ರಿಯಾ, ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿ ಕಾನೂನುಬಾಹಿರ ಚಟುವಟಿಕೆ ಎಂದು ತಿಳಿದಿದ್ದರು ಇದರಲ್ಲಿ ತೊಡಗಿಸಿಕೊಂಡಿರುವ ಯುವಕರು ಈ ಚಟುವಟಿಕೆಗಳಲ್ಲಿ ಭಾಗಿಗಳಾಗುತ್ತಿದ್ದಾರೆ. ನಶೆ ಏರಿಸುವ ಮಾದಕ ಸೇವನೆಯಿಂದ ಅಪಾಯದ ಮುನ್ಸೂಚನೆಗಳಿದ್ದರೂ ಇಂದಿನ ಯುವಕರು ಹಾದಿ ತಪ್ಪುತ್ತಿದ್ದಾರೆ. ಸರ್ಕಾರಗಳು ಎಷ್ಟೇ ಸೂಕ್ತ ಕ್ರಮಗಳನ್ನು ಕೈಗೊಂಡರು ಯುವ ಸಮೂಹ ಮಾದಕ ಸೇವನೆಯ ದಾಸರಾಗುತ್ತಿದ್ದಾರೆ. ಇದರಿಂದ ಯುವ ಸಮೂಹವನ್ನು ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.


ನರ್ಸಿಂಗ್ ವಿಭಾಗದ ಉಪನ್ಯಾಸಕಿ ಶಿಲ್ಪ ಮಾತನಾಡಿ, ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲಿ ಬಿತ್ತಿ ಪತ್ರಗಳನ್ನು ಹಿಡಿದು ನಮ್ಮ ವಿದ್ಯಾರ್ಥಿಗಳು ಜನತೆಗೆ ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡಿದರು. ಒಟ್ಟು ನೂರು ೧೨೦ ವಿದ್ಯಾರ್ಥಿಗಳ ತಂಡ ನಗರದ ದೇವರಾಜ ಅರಸು ಸರ್ಕಾರಿ ಬಸ್ ನಿಲ್ದಾಣದಲ್ಲಿ ಬರುವ ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಯುವಕರು ಇಂದು ಮಾದಕ ವ್ಯಸನಕ್ಕೆ ಹೇಗೆ ದಾಸರಾಗುತ್ತಿದ್ದಾರೆ ಎಂಬ ವಿಷಯವನ್ನು ಪ್ಲಾಶ್ ಮೊಬ್ ಮೂಲಕ ,ನಾಟಕ ಪ್ರದರ್ಶನದ ಮೂಲಕ ಸಾರ್ವಜನಿಕರ ಗಮನ ಸೆಳೆದು ಮಾದಕ ವ್ಯಸನದಿಂದ ಯುವ ಸಮೂಹವನ್ನು ರಕ್ಷಿಸುವಂತೆ ಜನರಲ್ಲಿ ಜಾಗೃತಿಗೊಳಿಸುವ ಕೆಲಸವನ್ನು ಮಾಡಿದ್ದೇವೆ ಇದಕ್ಕೆ ಸಹಕರಿಸಿದ ಪೊಲೀಸ್ ಇಲಾಖೆ ಮತ್ತು ಕೆಎಸ್‌ಆರ್‌ಟಿಸಿ ನಿಗಮ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.


ಜಾಥಾದಲ್ಲಿ ವಿಭಾಗದ ಮಾರ್ಸಿದೇವ ಪ್ರಿಯ, ಶಿಲ್ಪ, ಚೇತನ್, ಅನುಪಮಾ, ಗಗನ, ಶ್ವೇತಾ ಪಾಲ್ಗೊಂಡಿದ್ದರು.