ಯೋಗಯುಕ್ತ ಜೀವನದಿಂದ ರೋಗ ಮುಕ್ತ ರಾಷ್ಟ ನಿರ್ಮಾಣ

ಕಲಬುರಗಿ:ಜೂ.21:ಯೋಗವು ದೈಹಿಕ ಹಾಗೂ ಮಾನಸಿಕವಾಗಿ ವ್ಯಕ್ತಿಯನ್ನು ಸದೃಢವಾಗಿರುವಂತೆ ಮಾಡುವ ವೈಜ್ಞಾನಿಕ ಪದ್ದತಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ರೋಗ ಮುಕ್ತ ದೇಹ ಮತ್ತು ರಾಷ್ಟ ನಿರ್ಮಾಣವಾಗುತ್ತದೆ ಎಂದು ಯೋಗ ತರಬೇತಿದಾರ ಚನ್ನಬಸಪ್ಪ ಗಾರಂಪಳ್ಳಿ ಅಭಿಮತಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ‘ಸ್ವಾತಿ ಪ್ರೌಢಶಾಲೆ’ಯ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ಯನ್ನು ಉದ್ಘಾಟಿಸಿ, ಯೋಗಾಸನದ ವಿವಿಧ ಬಗೆಗಳನ್ನು ಪ್ರಾತ್ಯಕ್ಷಿಯ ಮೂಲಕ ತೋರಿಸಿ, ನಂತರ ಅವರು ಮಾತನಾಡಿದರು.
ಉಪನ್ಯಾಸಕ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ್ ಮಾತನಾಡಿ, ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿ ಜೀವನ ಸಾಗಿಸುತ್ತಿರುವ ಇಂದಿನ ದಿನಗಳಲ್ಲಿ, ಅನಾರೋಗ್ಯಕರ ಜೀವನಶೈಲಿಯಿಂದ ಅನೇಕ ಕಾಯಿಲೆಗಳು ಆವರಿಸುತ್ತಿವೆ. ಪ್ರಾಚೀನ ಕಾಲದಿಂದಲೂ ಯೋಗವು ನಮ್ಮ ಸಂಸ್ಕøತಿಯ ಒಂದು ಭಾಗವಾಗಿ ಕಂಡು ಬರುತ್ತಿದೆ. ಅದರಲ್ಲಿನ ಆಸನಗಳು ಮತ್ತು ಕ್ರಿಯೆಗಳು ಅನೇಕ ವ್ಯಾದಿಗಳನ್ನು ಗುಣಪಡಿಸುತ್ತವೆ. ಯೋಗವನ್ನು ಜೀವನದ ದಿನಚರಿಯನ್ನಾಗಿ ಮಾಡಿಕೊಳ್ಳಬೇಕು. ಪತಂಜಲಿ ಮಹರ್ಷಿಯವರು ಯೋಗ ಪದ್ಧತಿಯನ್ನು ನೀಡಿದ್ದಾರೆ. ವಿಶ್ವಕ್ಕೆ ಭಾರತದ ದೊಡ್ಡ ಕೊಡುಗೆ ಯೋಗವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಆದಿತ್ಯ ಸಿ.ಗಾರಂಪಳ್ಳಿ, ಅಭಿಶೇಕ, ಶ್ರೀನಿವಾಸ್, ಶ್ರೀಶೈಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.