ಬ್ರೈನ್ ಟ್ಯೂಮರ್ ನಿರ್ಲಕ್ಷ್ಯ ಬೇಡ, ಮುಂಜಾಗ್ರತೆ ಅಗತ್ಯ

ಕಲಬುರಗಿ: ಜೂ.8:ಮಾನವನ ದೇಹದ ಪ್ರಮುಖ ಅಂಗವಾದ ಮೆದುಳು ಎಲ್ಲಾ ಅಂಗಗಳನ್ನು ನಿಯಂತ್ರಿಸುವ ಮೂಲಕ ದೇಹ ಮತ್ತು ಮನಸ್ಸಿನ ನಡುವೆ ಸಮತೋಲನ ಕಾಪಾಡುತ್ತದೆ. ಆಧುನಿಕ ಒತ್ತಡದ ಬದುಕು, ಅನಾರೋಗ್ಯಕರ ಜೀವನ ಶೈಲಿ, ಅಪಘಾತ, ವಿಶ್ರಾಂತಿ ಇಲ್ಲದಿರುವುದು, ರಾಸಾಯನಿಕಗಳ ಸೇವನೆ, ಅತುಯಾದ ಮೋಬೈಲ್ ಬಳಕೆ ಸೇರಿದಂತೆ ಮತ್ತಿತರ ಕಾರಣಗಳಿಂದ ಬ್ರೈನ್ ಟ್ಯೂಮರ್ ಉಂಟಾಗುತ್ತದೆ. ಇದರ ಬಗ್ಗೆ ನಿರ್ಲಕ್ಷ್ಯ ವಹಿಸದೆ, ತಿಳಿದುಕೊಂಡು, ಮುಂಜಾಗ್ರೆತೆ ವಹಿಸಬೇಕಾದದ್ದು ಅವಶ್ಯಕವಾಗಿವೆ ಎಂದು ಕುಟುಂಬ ವೈದ್ಯ ಡಾ.ಮಂಜುನಾಥ ಪವಾಡಶೆಟ್ಟಿ ಸಲಹೆ ನೀಡಿದರು.
ನಗರದ ಆಳಂದ ಚೆಕ್‍ಪೋಸ್ಟ್ ಸಮೀಪವಿರುವ ‘ಬಸವೇಶ್ವರ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ವಿಶ್ವ ಬ್ರೈನ್ ಟ್ಯೂಮರ್ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ತೀವ್ರ ತಲೆನೋವು, ಕಣ್ಣು ಮಂಜಾಗಿ ಕಾಣಿಸುವುದು, ಪದೇ ಪದೆ ವಾಂತಿಯಾಗುವುದು, ಮೂರ್ಛೆ ಹೋಗುವುದು, ಮಾನಸಿಕ ಒತ್ತಡ ಹೆಚಾಗುವುದು, ಕೈ ಅಥವಾ ಕಾಲಿನ ಭಾಗವದಲ್ಲಿ ಸಂವೇದನೆ ಕಳೆದುಕೊಳ್ಳುವುದು, ಶ್ರವಣ ಮತ್ತು ದೃಷ್ಟಿ ಸಮಸ್ಯೆಗಳು ಬ್ರೈನ್ ಟ್ಯೂಮರ್‍ನ ಲಕ್ಷಣಗಳಾಗಿದ್ದು, ಇವುಗಳು ಕಂಡುಬಂದರೆ ತಪಾಸಣೆ ಮಾಡಿಕೊಳ್ಳುವುದು ಉತ್ತಮವಾಗಿದೆ. ಮೆದುಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸುವುದು ಬೇಡ. ಒತ್ತಡ ರಹಿತ ಜೀವನ ಶೈಲಿ, ಧನಾತ್ಮಕ ಚಿಂತನೆ, ಸೂಕ್ತ ಕಾಲಕ್ಕೆ ಆಹಾರ, ವಿಶ್ರಾಂತಿ ಮಾಡುವುದು, ಮೆದುಳಿಗೆ ಪೆಟ್ಟಾಗದಂತೆ ಕಾಳಜಿ ವಹಿಸುವುದು, ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಂದ ದೂರವಿರುವದು ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಿದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಜಗನಾಥ ಭಾಸಗಿ, ಶಕ್ತಿರಾಜ ರಡ್ಡಿ, ವಿಶ್ವನಾಥ ಪವಾಡಶೆಟ್ಟಿ, ಆಕಾಶ್ ಬಂಗರಗಿ, ಸುರಶ್ ಪಿ., ಭೀಮರಾವ ಜಮಖಂಡಿ, ಮಲ್ಲಿಕಾರ್ಜುನ ಕಲಬುರ್ಗಿ, ಶರಣಬಸಪ್ಪ ಸೇರಿದಂತೆ ಇನ್ನಿತರರಿದ್ದರು.