ತುರುವೇಕೆರೆ, ಆ. ೨೯- ರಾಷ್ಟ್ರೀಯ ಬಾಹ್ಯಾಕಾಶ ದಿನ ಸಾರ್ವಜನಿಕರಿಗೆ ಬಾಹ್ಯಾಕಾಶ ಅನ್ವೇಷಣೆಯ ಮಹತ್ವ ಮತ್ತು ಪ್ರಯೋಜನಗಳನ್ನು ನೆನಪಿಸಿ, ರಾಷ್ಟ್ರದ ಬಗ್ಗೆ ಹೆಮ್ಮೆ ಮತ್ತು ಏಕತೆಯ ಭಾವವನ್ನು ಮೂಡಿಸುತ್ತದೆ ಎಂದು ಗಣಿತ ಸಂವಹನಕಾರ ಹಾಗೂ ಬಾಹ್ಯಾಕಾಶ ವಿಜ್ಞಾನ ಮಾರ್ಗದರ್ಶಿ ಟಿ.ಎಸ್.ಕೃಷ್ಣ ಚೈತನ್ಯ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಚಿದಂಬರೇಶ್ವರ ಗ್ರಂಥಾಲಯ, ರೋಟರಿ ಕ್ಲಬ್ ಹಾಗೂ ಗೌರಿಬಿದನೂರಿನ ಕ್ರಿಯಾಕ್ಟೀವ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಂದ್ರಯಾನ ೩ ಯೋಜನೆಯ ವಿಕ್ರಮ್ ಲ್ಯಾಂಡರ್ ಆಗಸ್ಟ್ ೨೩, ೨೦೨೩ರಂದು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಹಗುರವಾದ ಲ್ಯಾಂಡಿಂಗ್ ನಡೆಸಿತು. ಈ ಯಶಸ್ಸಿನ ಮೂಲಕ, ಭಾರತ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಮತ್ತು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ಎಂದರು.
ಚಂದ್ರಯಾನ-೩ ಯಶಸ್ಸಿನ ನೆನಪಲ್ಲಿ ಆಚರಿಸುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಭಾರತದ ಆತ್ಮನಿರ್ಭರತೆ, ಕತೃತ್ವ ಶಕ್ತಿ ಹಾಗೂ ಆಳ ಸಂಶೋಧನೆಯ ಬದ್ಧತೆ ಮತ್ತು ಪ್ರಬುದ್ಧತೆಯನ್ನು ಜಗತ್ತಿಗೆ ತೋರಿಸುವುದೇ ಆಗಿದೆ ಎಂದ ಅವರು, ಬಾಹ್ಯಾಕಾಶ ಅಧ್ಯಯನಗಳಿಗೆ ಹಾಗೂ ಉಪಗ್ರಹ ಉಡಾವಣೆಗಳಿಗೆ ಖರ್ಚು ಮಾಡುವ ಹಣ ವ್ಯರ್ಥ ಎಂಬ ಭಾವನೆ ಈಗಲೂ ಹಲವರಲ್ಲಿದೆ. ಆದರೆ ಸೇವೆ, ಸಂಹವನ, ಮಾಹಿತಿ ತಂತ್ರಜ್ಞಾನ ಹಾಗೂ ಹವಾಮಾನ ಬದಲಾವಣೆಗಳ ಮಾಹಿತಿ ಹಂಚಿಕೆಗೆ ಈ ಉಪಗ್ರಹಗಳು ನೀಡುತ್ತಿರುವ ಕೊಡುಗೆ ಬೆಲೆ ಕಟ್ಟಲಾಗದ್ದು. ದೇಶದ ಭದ್ರತೆ ಮತ್ತು ಸುರಕ್ಷತೆಯ ವಿಷಯದಲ್ಲಂತೂ ಉಪಗ್ರಹಗಳ ಸಹಾಯ ಬೇಕೇ ಬೇಕು. ಹಾಗಾಗಿ ಬಾಹ್ಯಾಕಾಶ ಅಭಿವೃದ್ಧಿಯ ಅನಂತ ಅವಕಾಶಗಳ ತಾಣವಾಗಿದ್ದು ಭಾರತವೂ ಅಗ್ರಪಂಕ್ತಿಯಲ್ಲಿದೆ, ಒಂದೇ ಬಾರಿಗೆ ೧೦೪ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಕೀರ್ತಿ ಭಾರತದ್ದು. ಈ ಸಾಧನೆಯನ್ನು ಈವರೆಗೆ ಯಾವೊಂದು ದೇಶವೂ ಮಾಡಿಲ್ಲ ಎಂದ ಅವರು, ಚಂದ್ರಯಾನದ ವಿವಿಧ ಹಂತಗಳ ಸಾಧನೆಯನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ವಿ.ಆರ್. ಉಮೇಶ್ ಮಾತನಾಡಿ, ಭೂತಕಾಲ ಮತ್ತು ಭವಿಷ್ಯತ್ತಿನ ಸೇತುವೆ ಆಗಲಿರುವ ಬಾಹ್ಯಾಕಾಶ ಕುರಿತು ವಿದ್ಯಾರ್ಥಿಗಳು ಹೆಚ್ಚು ಜ್ಞಾನವನ್ನು ಪಡೆಯಬೇಕಿದ್ದು ಶಾಲಾ-ಕಾಲೇಜುಗಳಲ್ಲಿ ಬಾಹ್ಯಾಕಾಶ ಸಪ್ತಾಹ ಆಚರಿಸಬೇಕು. ಇದಕ್ಕೆ ರೋಟರಿ ಕ್ಲಬ್ ಅಗತ್ಯ ನೆರವು ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎಸ್.ಎಲ್.ಎನ್. ರಾಜಣ್ಣ, ಲೇಖಕ ತುರುವೇಕೆರೆ ಪ್ರಸಾದ್, ರೋಟರಿ ಕಾರ್ಯದರ್ಶಿ ಸಿ.ಆರ್.ಸುನಿಲ್. ಕೆ.ಎಚ್.ಆನಂದರಾಜ್, ಆರ್. ಸತ್ಯನಾರಾಯಣ್, ಟಿ.ಎಸ್.ವಿಠ್ಠಲ ದೀಕ್ಷಿತ್, ಬಿ.ಎನ್.ಪ್ರಾಣೇಶ್, ಅರಳೀಕೆರೆ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು. ಗ್ರಂಥಾಲಯ ಸಂಸ್ಥಾಪಕ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.

































