ಸರ್ಕಾರಿ ಸೌಲಭ್ಯ ಬಳಸಿಕೊಳ್ಳಲು ಆಟೋ ಚಾಲಕರಿಗೆ ಕರೆ

ತುಮಕೂರು, ಮೇ ೨೨- ಜಿಲ್ಲೆಯ ಎಲ್ಲಾ ಅರ್ಹ ಆಟೋ ಚಾಲಕರು ಸರ್ಕಾರದ ವಿವಿಧ ಯೋಜನೆಗಳಿಗೆ ನೋಂದಣಿ ಮಾಡಿಕೊಂಡು ಸವಲತ್ತುಗಳನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಕರೆ ನೀಡಿದರು.


ನಗರದ ಮರಳೂರು ದಿಣ್ಣೆಯ ಆಟೋ ನಿಲ್ದಾಣದಲ್ಲಿ ಕಾರ್ಮಿಕ ಇಲಾಖೆ,ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಆಟೋ ಚಾಲಕರ ಇ-ಶ್ರಮ್, ಅಂಬೇಡ್ಕರ್ ಸಹಾಯಾಸ್ತ, ಕಾರ್ಮಿಕ ಇಲಾಖೆಯ ಸ್ಮಾರ್ಟ್ ಕಾರ್ಡ್‌ಗಳಿಗೆ ನೋಂದಣಿ ಮಾಡಿಕೊಳ್ಳುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಯೋಜನೆಗಳ ನೋಂದಣಿಗೆ ವಾರ್ಡ್‌ವಾರು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಈ ಯೋಜನೆಯಲ್ಲಿ ಅಪಘಾತ ಪರಿಹಾರ ನೆರವು, ಆಟೋ ಚಾಲಕರ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಸಹಾಯವಾಗುತ್ತದೆ. ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡುವ ಮಕ್ಕಳಿಗೆ ವಾರ್ಷಿಕ ೩ ಸಾವಿರ ರೂ., ನಂತರದ ತರಗತಿಗಳಿಗೆ ೫ ಸಾವಿರ ರೂ., ಎಂಜಿನಿಯರಿಂಗ್, ಮೆಡಿಕಲ್ ಓದುವ ಮಕ್ಕಳಿಗೆ ೮ ಸಾವಿರ ರೂ. ಈ ರೀತಿಯ ಸೌಲಭ್ಯಗಳಿವೆ. ಹೆರಿಗೆ ಸಮಯದಲ್ಲಿ ಎರಡು ಮಕ್ಕಳಿಗೆ ೧೧ ಸಾವಿರ ರೂ. ತಾಯಿ ಪಡೆಯಬಹುದು. ಸ್ಮಾರ್ಟ್‌ಕಾರ್ಡ್, ಅಂಬೇಡ್ಕರ್ ಸಹಾಯಾಸ್ತ, ಇ-ಶ್ರಮ್ ಯೋಜನೆಗಳಿಂದ ಆಟೋ ಚಾಲಕರು ಹಾಗೂ ಅವರ ಕುಟುಂಬದವರು ಸೌಲಭ್ಯ ಪಡೆಯಬಹುದು ಎಂದು ಅವರು ತಿಳಿಸಿದರು.


ಜಿಲ್ಲೆಯ ಎಲ್ಲಾ ಅರ್ಹ ಆಟೋ ಚಾಲಕರು ಈ ಯೋಜನೆಗಳ ಪ್ರಯೋಜನೆ ಪಡೆಯಬೇಕು. ಸಾಧ್ಯವಾದಷ್ಟು ಆಟೋ ಚಾಲಕರ ಬಳಿಯೇ ಹೋಗಿ ನೋಂದಣಿ ಮಾಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದ ಅವರು, ಆಟೋ ಚಾಲಕ ಸಂಘಟನೆಗಳು ಯೋಜನೆಗಳ ಬಗ್ಗೆ ಚಾಲಕರಿಗೆ ಮಾಹಿತಿ ನೀಡಿ ನೋಂದಣಿ ಮಾಡಿಸಿಕೊಳ್ಳಲು ಮನವರಿಕೆ ಮಾಡಿಕೊಡಬೇಕು ಎಂದರು.


ಸಮಾಜದಲ್ಲಿ ಆಟೋ ಚಾಲಕರ ಸೇವೆ ಅನನ್ಯವಾದದ್ದು. ಆಂಬ್ಯುಲೆನ್ಸ್ ಇಲ್ಲದ ಸ್ಥಳಗಳಲ್ಲಿ ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಆಟೋಗಳ ಸೇವೆ ಸಹಾಯವಾಗುತ್ತದೆ. ವಿದ್ಯಾರ್ಥಿಯಾಗಿದ್ದಾಗ ನಾನೂ ಆಟೋದಲ್ಲಿ ಶಾಲೆಗೆ ಹೋಗಿ ಬರುತ್ತಿದ್ದೆ. ಆಟೋ ಚಾಲಕರ ಸೇವೆಗೆ ನಾವು ಅಭಿನಂದನೆ ಹೇಳಬೇಕು ಎಂದರು.


ರಾಜ್ಯ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಮದಕರಿ ಮಾತನಾಡಿ, ಆಟೋ ಚಾಲಕರಿಗೆ ವಿವಿಧ ಸವಲತ್ತು ನೀಡುವ ಸರ್ಕಾರದ ಯೋಜನೆಗಳನ್ನು ಆಟೋ ಚಾಲಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಕಾಳಜಿಯಿಂದ ಸಹಕರಿಸಿದ್ದಾರೆ. ಇತರೆ ಯಾವ ಜಿಲ್ಲೆಗಳಲ್ಲೂ ಈ ರೀತಿಯ ಕಾರ್ಯಕ್ರಮಗಳಾಗಿಲ್ಲ ಎಂದು ಜಿಲ್ಲಾಧಿಕಾರಿಗಳನ್ನು ಅಭಿನಂದಿಸಿದರು.


ಇದೇ ಸಂದರ್ಭದಲ್ಲಿ ೩೦ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿರುವ ಹಿರಿಯ ಆಟೋ ಚಾಲಕರನ್ನು ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ, ಸಮಿತಿ ಜಿಲ್ಲಾ ಆಟೋಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫೈರೋಜ್ ಅನ್ವರ್‌ಖಾನ್, ಮುಖಂಡರಾದ ಅಲ್ತಾಫ್, ತೋಫಿಕ್, ರಾಮಸ್ವಾಮಿ, ಶ್ರೀದೇವಿ ರಮೇಶ್ ಮತ್ತಿತರರು ಭಾಗವಹಿಸಿದ್ದರು.