ಬಂಧಿತ ಉಗ್ರ, ವೈದ್ಯನಿಗೆ ೫ ಲಕ್ಷ ರೂ ಸಂಬಳ

ನವದೆಹಲಿ, ನ. ೧೨-ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಹಾಕಿದ ಆರೋಪದ ಮೇಲೆ ಬಂಧನವಾಗಿರುವ ಫರಿದಾಬಾದ್ ಉಗ್ರರ ಬಗ್ಗೆ ಬಾಯ್ಬಿಟ್ಟ ಕಾಶ್ಮೀರಿ ವೈದ್ಯ ಆದಿಲ್ ಅಹ್ಮದ್ ರಾಥರ್‌ಗೆ ತಿಂಗಳಿಗೆ ೫ ಲಕ್ಷ ರೂ. ಸಂಬಳ ಸಿಗುತ್ತಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.


ದಕ್ಷಿಣ ಕಾಶ್ಮೀರದ ಖಾಜಿಗುಂಡ್ ನಿವಾಸಿಯಾಗಿರುವ ಆದಿಲ್ ಅಹ್ಮದ್ ರಾಥರ್ ಅಕ್ಟೋಬರ್ ೨೦೨೪ ರವರೆಗೆ ಅನಂತನಾಗ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಜಿಎಂಸಿ) ಹಿರಿಯ ರೆಸಿಡೆಂಟ್ ಆಗಿ ಕೆಲಸ ನಿರ್ವಹಿಸಿ ಬಳಿಕ ಮಾರ್ಚ್‌ನಲ್ಲಿ ಉತ್ತರ ಪ್ರದೇಶದ ಸಹರಾನ್‌ಪುರಕ್ಕೆ ತೆರಳಿದ್ದನು.


ಮೊದಲು ವಿ-ಬ್ರಾಸ್ ಆಸ್ಪತ್ರೆಗೆ ಸೇರಿದ ನಂತರ ಪ್ರಸಿದ್ಧ ಮೆಡಿಕೇರ್ ಆಸ್ಪತ್ರೆಯಲ್ಲಿ ಕೆಲಸದ ಗುತ್ತಿಗೆಗೆ ಆದಿಲ್ ಸಹಿ ಹಾಕುತ್ತಾನೆ. ಪೊಲೀಸ್ ದಾಖಲೆಗಳ ಪ್ರಕಾರ ಈತನಿಗೆ ತಿಂಗಳಿಗೆ ೫ ಲಕ್ಷ ರೂ. ಸಂಬಳ ಸಿಗುತ್ತಿತ್ತು. ಅಷ್ಟೇ ಅಲ್ಲದೇ ವಸತಿಗಾಗಿ ೧೦ ಸಾವಿರ ರೂ. ಭತ್ಯೆ ಪ್ರತ್ಯೇಕವಾಗಿ ದೊರೆಯುತ್ತಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ.


ಬಾಪು ಬಿಹಾರ ಕಾಲೋನಿಯಲ್ಲಿ ಎರಡು ಬೆಡ್‌ರೂಮ್ ಮನೆಯಲ್ಲಿ ವಾಸವಿದ್ದ ಆದಿಲ್ ತಡರಾತ್ರಿ ಭೇಟಿ ನೀಡುವವರನ್ನು ಹೊರತುಪಡಿಸಿ ನೆರೆಮನೆಯವರ ಜೊತೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಸೆಪ್ಟೆಂಬರ್ ೨೬ ರಂದು ದಿಢೀರ್ ರಜೆ ತೆಗೆದುಕೊಂಡು ಅಕ್ಟೋಬರ್ ೪ ರಂದು ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯನ್ನು ಆದಿಲ್ ಮದುವೆಯಾಗಿ ಸಹರಾನ್‌ಪುರಕ್ಕೆ ವಾಪಸ್ಸಾಗಿದ್ದನು.


ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಆರೋಪ ಹೊರಿಸಿ ವಿಚಾರಣೆ ನಡೆಸಿದಾಗ ಫರಿದಾಬಾದ್ ಟೆರರ್ ಗ್ಯಾಂಗ್ ಬಗ್ಗೆ ಬಾಯಿ ಬಿಟ್ಟಿದ್ದಾನೆ.


ದೆಹಲಿ-ಎನ್‌ಸಿಆರ್, ಹರಿಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿರುವ ಸದಸ್ಯರ ಬಗ್ಗೆ ಹೇಳಿದ್ದಾನೆ. ನಂತರ ಪೊಲೀಸರು ಅನಂತ್‌ನಾಗ್‌ನ ಜಿಎಂಸಿ ಮೇಲೆ ದಾಳಿ ನಡೆಸಿ ಆದಿಲ್‌ನ ಲಾಕರ್‌ನಿಂದ ಎಕೆ -೪೭ ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.


೨೦೧೯ ರ ಪುಲ್ವಾಮಾ ದಾಳಿ ನಡೆಸಿದ ಜೈಷ್-ಎ-ಮೊಹಮ್ಮದ್ ಮತ್ತು ಷರಿಯಾ ನಿಯಮವನ್ನು ಪ್ರತಿಪಾದಿಸುವ ಸ್ಥಳೀಯ ಶಾಖೆಯಾದ ಅನ್ಸರ್ ಘಜ್ವತ್-ಉಲ್-ಹಿಂದ್ ಎರಡರೊಂದಿಗೆ ಈತ ನಂಟು ಹೊಂದಿದ್ದಾನೆ. ಸಹರಾನ್‌ಪುರದಲ್ಲಿರುವ ತನ್ನ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಶ್ರೀನಗರದಲ್ಲಿರುವ ತನ್ನ ಸಹೋದರನ ಖಾತೆಗೆ ೧೫-೨೦ ಲಕ್ಷ ರೂ. ಹಣವನ್ನು ಕಳುಹಿಸಿದ್ದ. ಈ ಹಣವನ್ನು ಉಗ್ರ ಚಟುವಟಿಕೆ ನಡೆಸಲು ವರ್ಗಾವಣೆ ಮಾಡಿರುವ ಬಗ್ಗೆ ತನಿಖೆ ನಡೆಯುತ್ತಿದೆ.