
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೬:ಸಾವಯವ ಕೃಷಿಗೆ ಪ್ರಸ್ತುತದಲ್ಲಿ ವಿಶೇಶ ಸ್ಥಾನ ಕೊಡಲಾಗಿದೆ. ಏಕೆಂದರೆ ಭೂಮಿಯ ಉತ್ಪಾದಕತೆ ಸಾಮರ್ಥ್ಯವು ಕುಂಠಿತವಾಗುತ್ತಿರುವುದನ್ನು ತಡೆಗಟ್ಟಲು ಸಾವಯವ ಗೊಬ್ಬರಗಳನ್ನು ಸಮರ್ಪಕವಾಗಿ ಬಳಸುವುದು ಮತ್ತು ದೊಡ್ಡ ಪ್ರಮಾಣದಲ್ಲಿ ಅತೀ ಹೆಚ್ಚಿನ ಖರ್ಚಿನಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರಗಳನ್ನು ನಿಯಂತ್ರಿಸಿ, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಬರುವುದು ಅತೀ ಅವಶ್ಯಕವಾಗಿದೆ ಎಂದು ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ಶನಿವಾರ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಇಂಡಿ, ಕೃಷಿ ಇಲಾಖೆ (ಆತ್ಮಾ) ಹಾಗೂ ಶ್ರೀ ಗುರುಚಂದ್ರಶೇಖರ ಸಂಸ್ಥಾನ ಹಿರೇಮಠ, ತದ್ದೇವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ‘ಸಾವಯವ ಕೃಷಿ ಚಿಂತನಾ ಗೋಷ್ಠಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದಿನ ಜೀವನಾಂಶ ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಿಲ್ಲದೆ, ಮಿಶ್ರ ಬೆಳೆ, ಪರ್ಯಾಯ ಬೆಳೆಗಳು ಹಾಗೂ ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆಯಿಲ್ಲದ ಬೇಸಾಯಗಳನ್ನು ನಡೆಸಿಕೊಂಡು ಬಂದು, ಭೂಮಿಯ ಆರೋಗ್ಯವನ್ನು ಸಹ ಕಾಪಾಡಿಕೊಂಡು ಬರಲಾಗುತ್ತಿತ್ತು. ಆದರೆ, ಹಸಿರು ಕ್ರಾಂತಿಯ ಪರಿಣಾಮವಾಗಿ ರಸಗೊಬ್ಬರಗಳು ಮತ್ತು ರಾಸಾಯನಿಕಗಳು ಮಹತ್ತರ ಪಾತ್ರವಹಿಸುತ್ತಾ ಬಂದಿವೆ. ಆದರೆ ಇವುಗಳ ಬಳಕೆಯಿಂದ ಮಣ್ಣು, ನೀರು ಮತ್ತು ಪರಿಸರ ಮಾಲಿನ್ಯತೆ ಹೆಚ್ಚಿ, ಕ್ರಮೇಣ ಮನುಷ್ಯನ ಆರೋಗ್ಯಕ್ಕೂ ಧಕ್ಕೆ ಬರುತ್ತಿದೆ. ಇವುಗಳಲ್ಲದೇ ಹೆಚ್ಚುತಿರುವ ರಾಸಯನಿಕ ಗೊಬ್ಬರಗಳ ಬೆಲೆಯು ಸಹ, ಕೃಷಿಕರಲ್ಲಿ ಮುಂದೆ ಏನು ಎಂಬ ಯೋಚನೆ ಬಂದಾಗ, ಸಾವಯವ ಕೃಷಿಯು ಒಂದು ಆಶಾದಾಯಕ ದಾರಿಯಾಗಿದೆ ಎಂದರು. ರಾಸಾಯನಿಕ ಗೊಬ್ಬರಗಳಾಗಲೀ, ಕಳೆನಾಶಕ, ಕಿಮಿಕೀಟನಾಶಕಗಳು ಹಾಗೂ ಸಸ್ಯ ಪ್ರಚೋಧಕಗಳ ಬಳಕೆಯಿಲ್ಲದೆ ಸಾವಯವ ಗೊಬ್ಬರಗಳು ಮಣ್ಣಿನ ರಕ್ಷಣಾಕ್ರಮಗಳಿಂದ ಬೆಳೆಗಳ ಪರ್ಯಾಯ ಮತ್ತು ಮಿಶ್ರ ಬೆಳೆಗಳ ಅಳವಡಿಕೆಯಿಂದ, ಹೆಚ್ಚಿನ ಇಳುವರಿ ಹಾಗೂ ಸುಧಾರಿತ ಸುವ್ಯವಸ್ಥಿತ ಬೇಸಾಯವನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದರು.
ಪರಿಸರದ ಸಂರಕ್ಷಣೆಗಾಗಿ ಭೂಮಿ, ನೀರು ಮತ್ತು ಗಾಳಿ ಇವುಗಳ ಮಾಲಿನ್ಯವನ್ನು ತಡೆಗಟ್ಟುವುದು, ಮನುಷ್ಯನ ಆದ್ಯ ಕರ್ತವ್ಯವಾಗಿದೆ. ಭೂಸಂಪತ್ತು ಮತ್ತು ಮಣ್ಣಿನ ಗುಣಧರ್ಮಗಳನ್ನು ಅರಿತುಕೊಳ್ಳುವುದು ಉತ್ತಮ ವ್ಯವಸಾಯ ಕೈಗೊಳ್ಳುವ ದಿಸೆಯಲ್ಲಿ ಮುಖ್ಯವಾದ ಹೆಜ್ಜೆಯಾಗಿದೆ. ಭೌತಿಕ ಹಾಗೂ ರಾಸಾಯನಿಕ ಗುಣಧರ್ಮಗಳನ್ನು ಮಾತ್ರವಲ್ಲದೆ ಮಣ್ಣಿನ ಜೈವಿಕ ಗುಣಗಳನ್ನು ತಿಳಿದು ಫಲವತ್ತತೆಯು ನಶಿಸಿಹೋಗದಂತೆ ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರವನ್ನು ಉಪಯೋಗಿಸುವುದು ಸಾವಯವ ಕೃಷಿಯ ಸಾರಾಂಶವಾಗಿದೆ ಎಂದು ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ ಶ್ರೀ ಗುರುಚಂದ್ರಶೇಖರ ಸಂಸ್ಥಾನ ಹಿರೇಮಠ, ತದ್ದೇವಾಡಿದ ಶ್ರೀ ಮಹಾಂತೇಶ ಹಿರೇಮಠ ಗುರುಗಳು ಮಾತನಾಡಿ, ಭಾರತದಲ್ಲಿ ಹಸಿರು ಕ್ರಾಂತಿಯ ಪರಿಣಾಮದಿಂದಾಗಿ ರಾಸಾಯನಿಕ ಗೊಬ್ಬರಗಳ ಹಾಗೂ ಪೀಡೆನಾಶಕಗಳ ವಿವೇಚನೆರಹಿತ ಬಳಕೆಯಿಂದಾಗಿ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಸಸ್ಯ ಮತ್ತು ಪ್ರಾಣಿ ಸಂಕುಲಗಳು ಮಲಿನಗೊಳ್ಳುತ್ತಲ್ಲಿವೆ ಎಂದು ಹೇಳಿದರು.
ಆಧುನಿಕ ಕೃಷಿ ಪದ್ಧತಿಯಿಂದ ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಧರ್ಮಗಳು ಕ್ಷೀಣಿಸುವುದಲ್ಲದೆ ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಕುಂಠಿತಗೊAಡಿದೆ. ಇಂದು ರಾಸಾಯನಿಕ ವಸ್ತುಗಳ ಬಳಕೆಯಿಂದ ಬರಡಾಗುತ್ತಿರುವ ಭೂಮಿಗೆ ಚೈತನ್ಯ ತುಂಬಲು ಸಾವಯವ ಕೃಷಿ ಪದ್ಧತಿ ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದರು.
ಈ ಕೃಷಿ ಪದ್ಧತಿಯಿಂದ ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆಯೊಂದಿಗೆ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು. ಇದರಿಂದ ಉತ್ತಮ ಗುಣಮಟ್ಟದ ಮತ್ತು ಸ್ಥಿರವಾದ ಉತ್ಪಾದನೆಯನ್ನು ಪಡೆಯುವುದರಿಂದ ಅರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು ಎಂದು ತಿಳಿಸಿದರು. ವಿಜ್ಞಾನಿ ಡಾ. ಪ್ರಕಾಶ ಜಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸಾವಯವ ಕೃಷಿ ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಕಳೆದ ಒಂದು ದಶಕದಿಂದ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಈಗಿನ ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಹೊಂದುವ ಅವಶ್ಯಕತೆ ಇದ್ದು, ರೈತರು ಪ್ರತಿಯೊಂದು ಹಂತದಲ್ಲಿ ಉತ್ಪಾದನಾ ಖರ್ಚನ್ನು ಕಡಿಮೆಮಾಡಿ, ಪರಿಸರವನ್ನು ಸಂರಕ್ಷಿಸಿ, ಉತ್ತಮ ಗುಣಮಟ್ಟದ ಆಹಾರವನ್ನು ಉತ್ಪಾದಿಸಬೇಕಾಗಿದೆ, ಈ ನಿಟ್ಟಿನಲ್ಲಿ ಸಾವಯವ ಕೃಷಿಯು ಒಂದು ಹೊಸ ಆಶಾಕಿರಣವಾಗಿ ಅಭಿವೃದ್ದಿ ಹೊಂದುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೃಷಿ ಅಧಿಕಾರಿ ದಾನಪ್ಪ ಕತ್ನಳ್ಳಿ, ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿದರು. ನಂತರ ತಾಂತ್ರಿಕ ಗೋಷ್ಠಿಯಲ್ಲಿ ಡಾ. ಪ್ರಕಾಶ ಜಿ. ಸಾವಯವ ಕೃಷಿಯಲ್ಲಿ ಬೀಜಾಮೃತ, ಜೀವಾಮೃತ, ಕೃಷಿ ಬೆಳೆಗಳ ಹೊದಿಕೆಯ ಮಹತ್ವ, ಹಸಿರಲೆ ಗೊಬ್ಬರ, ಅಂತರ ಬೆಳೆ, ಮಿಶ್ರ ಬೆಳೆಗಳ ಕುರಿತು ಮಾಹಿತಿ ಒದಗಿಸಿದರು. ಡಾ. ಪ್ರೇಮ್ಚಂದ್ ಯು., ಸಾವಯವ ಕೃಷಿಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ, ಡಾ. ಬಾಲಾಜಿ ನಾಯಕ, ಸಾವಯವ ಕೃಷಿಯಲ್ಲಿ ಸಾವಯವ ಇಂಗಾಲ ಹಾಗೂ ಮಣ್ಣಿನ ಫಲವತ್ತತೆ, ಡಾ. ಪ್ರಸಾದ ಎಂ. ಜಿ. ಸಾವಯವ ಕೃಷಿಯಲ್ಲಿ ಜಾನುವಾರುಗಳ ಪಾಲನೆ, ಎರೆಗೊಬ್ಬರ ತಯಾರಿಕೆ ಕುರಿತು ಉಪನ್ಯಾಸ ನೀಡಿದರು. ಭತಗುಣಕಿ ಗ್ರಾಮದ ಪ್ರಗತಿಪರ ರೈತ ಮುದ್ದುಗೌಡ ಪಾಟೀಲ ಅವರು ಸಾವಯವ ಕೃಷಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊAಡರು. ಈ ಕಾರ್ಯಕ್ರಮದಲ್ಲಿ ಸುಮಾರು ೧೨೦ ಕ್ಕೂ ಹೆಚ್ಚಿನ ರೈತರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.