ಸಹಕಾರಿ ಚಳುವಳಿಯ ಯಶಸ್ವಿಗೆ ಜನರ ಸಕ್ರಿಯ ಭಾಗವಹಿಸುವಿಕೆ ಅಗತ್ಯ

ಕಲಬುರಗಿ:ಜು.5:ಭಾರತದಲ್ಲಿ ಸಹಕಾರಿ ಚಳುವಳಿ ಆರಂಭವಾಗಿ ಶತಮಾನ ಕಳೆದರು ಕೂಡಾ ಅದರ ತತ್ವ, ಆಶಯ ಜನಸಾಮಾನ್ಯರಿಗೆ ಮುಟ್ಟುತ್ತಿಲ್ಲ. “ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ” ಎಂಬ ಸಹಕಾರದ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅವುಗಳ ಸದುಪಯೋಗವನ್ನು ಮಾಡಿಕೊಂಡು ಸಹಕಾರಿ ಚಳುವಳಿಯ ಯಶಸ್ವಿಯಲ್ಲಿ ಜನರ ಸಕ್ರಿಯ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ಶಹಾಬಾದ ತಾಲೂಕಿನ ಭಂಕೂರ್‍ನ ಕೆರಿಯಮ್ಮ ದೇವಸ್ಥಾನದ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ಅಂತಾರಾಷ್ಟ್ರೀಯ ಸಹಕಾರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರದ ಜನಸಾಮಾನ್ಯರ ಆರ್ಥಿಕ ಜೀವನದ ಸುಗಮ ನಿರ್ವಹಣೆಗೆ ಸಹಾಯಕರವಾಗಿ ಸಹಕಾರಿ ಸಂಸ್ಥೆಗಳು ಸೇವೆ ಸಲ್ಲಿಸುತ್ತಿವೆ. ಜನರು ಸದಸ್ಯರಾಗುವುದು, ಸಂಘಗಳ ರಚನೆ, ಸ್ವಯಂ ಉದ್ಯೋಗವನ್ನು ಮಾಡುವ ಮೂಲಕ ಸ್ವಂತ ಬೆಳವಣಿಗೆಗೆ ಜೊತೆ ಸಂಘ-ಸಂಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು. ಸರ್ಕಾರದ ವಿವಿಧ ಸಹಕಾರಿ ಯೋಜನೆಗಳನ್ನು ಬಳಸಿಕೊಳ್ಳುಬೇಕು. ‘ಸಹಕಾರ’ ಎಂಬ ಶಬ್ದವೇ ಬಹಳ ಅದ್ಭುತವಾದದ್ದು. ಎಲ್ಲೆಡೆ ಸಹಕಾರವಿರಬೇಕು. ‘ವಸ್ತು ವಿನಿಯಮ ಪದ್ಧತಿ’ಯಿಂದ ‘ಹಣ ವಿನಿಮಯ ಪದ್ಧತಿ’ಯೆಡೆಗೆ ಜನಸಾಮಾನ್ಯರನ್ನು ಸೆಳೆದು, ಆರ್ಥಿಕ ಜ್ಞಾನವನ್ನುಂಟು ಮಾಡುವಲ್ಲಿ ಸಹಕಾರ ಚಳುವಳಿ ಪಾತ್ರವಹಿಸಿದೆ. ಸಹಕಾರಿ ಸಂಸ್ಥೆಗಳ ಪಾತ್ರದ ಬಗ್ಗೆ ವ್ಯಾಪಕವಾದ ಜನಜಾಗೃತಿಯಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಳಂದನ ‘ಸಮೃದ್ಧಿ ಸೌಹಾರ್ದ ಸಹಕಾರಿ ಸಂಘ’ದ ನಿರ್ದೇಶಕ ಡಾ.ರಾಜಶೇಖರ ಪಾಟೀಲ್ ಮಾತನಾಡಿ, ಸಹಕಾರಿ ತತ್ವವು ವೈಯಕ್ತಿಕ ಸ್ವಾರ್ಥವನ್ನು ಬಿಟ್ಟಿ ಪರಸ್ಪರ ಬೆರೆಯುವುದುನ್ನು ಕಲಿಸುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಪ್ರಜಾಪ್ರಭುತ್ವ ಸಂಸ್ಥೆಯಾಗಿದೆ. ಸ್ವಸಹಾಯ ಮತ್ತು ಪರಸ್ಪರ ಸಹಾಯದ ಗುಣವನ್ನು ಹೊಂದಿದೆ. ಸೇವೆಯೇ ಮುಖ್ಯ ಗುರಿಯಾಗಿದ್ದು, ಲಾಭ ಗಳಿಕೆ ಗೌಣವಾಗಿದೆ. ಅಗ್ಗದ ಸಾಲ ಸೌಲಭ್ಯ ದೊರೆಯುತ್ತದೆ. ಉಳಿತಾಯ ಹಾಗೂ ಹೂಡಿಕೆಗೆ ಉತ್ತೇಜನ ನೀಡುತ್ತದೆ. ಸಹಕಾರಿ ಸಂಘಗಳು ವಿಶೇಷವಾಗಿ ರೈತರು, ಜನಸಾಮಾನ್ಯರಿಗೆ ತುಂಬಾ ಪ್ರಯೋಜನೆಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಪ್ರಕಾಶ ಪಾಟೀಲ್, ಮಲ್ಲಿಕಾರ್ಜುನ ಸಿರಗೊಂಡ, ಉಪನ್ಯಾಸಕ ಶಶಿಕಾಂತ ಮಡಿವಾಳ, ಪ್ರಮುಖರಾದ ಚನ್ನಪ್ಪಗೌಡ್ ಘಟ್ಟದ್, ಅನಿಲ್ ಮೈನಾಳಕರ್, ರಾಜಶೇಖರ ಪಾಗದ್, ಮಹೇಂದ್ರ ರಾಜೋಳೆ, ಶಿಲ್ಪಾ ಗುಜ್ಜನ್ ಸೇರಿದಂತೆ ಇನ್ನಿತರರಿದ್ದರು.