
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.20: ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ಅವರು ಮಹಾನಗರ ಪಾಲಿಕೆಯಲ್ಲಿರುವ ತಮ್ಮ ಕಚೇರಿಗೆ ನಿನ್ನೆ ಆಗಮಿಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕೂಡಲೇ ಹಲವು ಸಮಸ್ಯೆಗಳನ್ನು ಬಗೆಹರಿಸಿದರು. ಇನ್ನು ಕೆಲವು ಸಮಸ್ಯೆಗಳಿಗೆ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನರು ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಕುಡಿಯುವ ನೀರಿನ ಪೂರೈಕೆ, ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಹಣಕಾಸಿನ ಸಹಾಯ, ಸಿಸಿ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ವಿವಿಧ ಶಾಲೆಗಳ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ತಮ್ಮ ಶಾಲೆಗೆ ಬೇಕಾದ ಸೌಲಭ್ಯ ಕುರಿತು ಮನವಿ ಸಲ್ಲಿಕೆ, ವಿದ್ಯುತ್ ಸಂಪರ್ಕ ತಾಲ್ಲೂಕು ಪಂಚಾಯ್ತಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಿದರು.
ಸಾರ್ವಜನಿಕರಿಂದ ಸಾಮೂಹಿಕ ಹಾಗೂ ವೈಯಕ್ತಿಕ ಅಹವಾಲುಗಳ ಮನವಿ ಸೇರಿದಂತೆ ಸಾರ್ವಜನಿಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಅನಾಯೋಗ್ಯ ಕಾರಣ ಶಸ್ತ್ರಚಿಕಿತ್ಸೆ ಸಹಾಯ ಕೋರಿ ಅಹವಾಲು ತೋಡಿಕೊಂಡರು. ನಂತರ ಅವರಿಗೆ ಮಾಜಿ ಸಚಿವ ಬಿ.ನಾಗೇಂದ್ರ ಅವರು ಹಣದ ನೆರವು ನೀಡಿದರು.
ಕೆಲವೊಂದು ಸಮಸ್ಯೆಗಳ ಪರಿಹಾರಕ್ಕೆ ಮೇಲಾಧಿಕಾರಿಗಳಿಗೆ ಫೋನ್ ಕರೆ ಮೂಲಕ ತಿಳಿಸಿ, ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಲು ಮಾಜಿ ಸಚಿವ ಬಿ.ನಾಗೇಂದ್ರ ಅವರು ಸೂಚಿಸಿದರು.