ಸ್ವದೇಶಿ ಬಳಸಿ ದೇಶ ಉಳಿಸಿ: ರವಿ ಮುನ್ನಿಸ್ವಾಮಿ

ಸಂಜೆವಾಣಿ ನ್ಯೂಸ್
ಹುಣಸೂರು,ಡಿ.17:-
ಸನಾತನ ಸಂಸ್ಕೃತಿ, ದೇಶ ಪ್ರೇಮ ಉಳಿಯಬೇಕಾದರೆ ವಿದೇಶಿ ವಸ್ತುಗಳ ವ್ಯಮೋಹ ಕಡಿಮೆಗೊಳಿಸಿ ಸ್ವದೇಶಿ ಬಳಕೆಗೆ ಹೆಚ್ಚು ಆದ್ಯತೆ ನೀಡಿದರೆ ಮಾತ್ರ ಭಾರತದ ಉಳಿವು ಸಾಧ್ಯ ಎಂದು ರೋಟರಿ ಹಾಗೂ ಯೂತ್ ಫಾರ್ ನೇಶನ್ ನಿರ್ದೇಶಕ ರವಿ ಮುನಿಸ್ವಾಮಿ ಮಕ್ಕಳಿಗೆ ಕರೆ ನೀಡಿದರು.
ನಗರದ ರೋಟರಿ ಭವನಕ್ಕೆ ಬೆಂಗಳೂರಿನಿಂದ ಸೈಕ್ಲಿಂಗ್ ಮೂಲಕ ಜಾಥಾ ಹೊರಟು ರೋಟರಿ ಶಾಲಾ ಮಕ್ಕಳಿಗೆ ಸ್ವದೇಶಿ ಬಳಸಿ, ಭಾರತ ಉಳಿಸಿ ಎಂಬ ವೇದವಾಕ್ಯದೊಂದಿಗೆ ಕರ್ನಾಟಕದ ಎಲ್ಲಡೆ ಸಾವಿರಾರು ಮೈಲಿಗಳನ್ನು ಸೈಕ್ಲಿಂಗ್ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.


ನಮ್ಮ ದೇಶದ ಉಳಿವಿಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಅಗತ್ಯವಾಗಿದೆ. ನಾವು ಭಾರತಿಯರು ಶೈಕ್ಷಣಿಕವಾಗಿ ಮುಂದುವರೆಯುತ್ತಿದ್ದೇವೆ ಆದರೆ ಸ್ವದೇಶಿ ತಿರಸ್ಕಾರದಿಂದ ವಿದೇಶಿ ವ್ಯಾಪಾರಿಕರಣ ಸದ್ದು ಮಾಡುತ್ತಿದ್ದು, ಸ್ವದೇಶಿ ವಸ್ತುಗಳ ಮಾರಾಟಕ್ಕೆ ಬಹು ದೊಡ್ಡ ಆರ್ಥಿಕ ಪೆಟ್ಟು ಬಿದ್ದಿದೆ. ಆದ್ದರಿಂದ ನಾವು ಈ ಕೂಡಲೇ ಜಾಗೃತರಾಗಬೇಕೆಂದರು.


ಇಂದಿನ ಭಾರತದ ಸ್ವದೇಶಿ ಚಿಂತನೆ ಮತ್ತು ಈ ಪರಂಪರೆ ಮುಂದುವರೆಸಲು, ಭಾರತೀಯ ಕಲೆಗಾರರು, ತಯಾರಕರು, ಕೃಷಿಯನ್ನೇ ನಂಬಿರುವ ರೈತರು, ಸಣ್ಣ ಪುಟ್ಟ ವ್ಯಾಪಾರಿಗಳು ಮತ್ತು ಗ್ರಾಮೀಣ ಉದ್ಯಮಿಗಳನ್ನು ಉತ್ತೇಜಿಸುವ ಕೆಲಸವಾದರೆ ಸ್ಥಳೀಯ ಆರ್ಥಿಕತೆಯನ್ನು ಗಟ್ಟಿಗೊಳಿಸಬಹುದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಕೃಷಿ ಜಾಗತಿಕ ಮಟ್ಟಕ್ಕೆ ತಲುಪಲಿದೆ ಎಂದರು.
ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾಪಾರ ಸಂಘರ್ಷಗಳು ಮತ್ತು ಬದಲಾಗುತ್ತಿರುವ ಭೂರಾಜಕೀಯ ಶಕ್ತಿಗಳಿಂದ ಅಸ್ಥಿರ ಸುಂಕಗಳು, ವಹಿವಾಟಿನಲ್ಲಿ ಅಭದ್ರತೆಯನ್ನು ಸೃಷ್ಠಿಸಿ. ವಿದೇಶಿ ಆಮದುಗಳ ಮೇಲೆ ಅಧಿಕ ಅವಲಂಬನೆಯಿಂದ ಆರ್ಥಿಕ ಭದ್ರತೆ ಅಪಾಯದಲ್ಲಿದೆ. ಆದ್ದರಿಂದ ದೇಶಿಯ ಉತ್ಪಾದನೆಗೆ ಒತ್ತು ನೀಡುವುದರಿಂದ ಸ್ವದೇಶಿ ವಸ್ತಗಳ ಬೇಡಿಕೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.


ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ ಅಂತರಾಷ್ಟ್ರೀಯ ರೋಟರಿ ಸದಸ್ಯರು ಮತ್ತು ಯೂತ್ ಫಾರ್ ನೇಶನ್ ಅವರ ತಂಡವು ಸ್ವದೇಶಿ ಜಾಗರಣ ಎಂಬ ಘೋಷಣೆಯೊಂದಿಗೆ ಈ ಇಳಿವಯಸ್ಸಿನಲ್ಲೂ ಸ್ವದೇಶಿ ವಸ್ತುಗಳ ಬಳಕೆಗೆ ಸೈಕ್ಲಿಂಗ್ ಮೂಲಕ ಅದು ಈ ಚಳಿಯಲ್ಲಿ ಒಂದು ಚಳುವಳಿ ಆರಂಬಿಸಿ ನಾಡಿನ ಜನತೆಗೆ ಅತ್ಯಂತ ನಿಸ್ವಾರ್ಥದಿಂದ ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯವೆಂದರು.
ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ ರೊ.ಆನಂದ್, ರೊ.ರಾಜಶೇಖರ್, ಎ.ವಿ.ಕೆ.ಮೋಹನ್, ವೇದಮೂರ್ತಿ, ನೀಲಕಂಠ, ಜಾಹೀರ್, ಕಂಡಸ್ವಾಮಿ, ಗೋಪಾಲ ಕೃಷ್ಣ ಪಿಳ್ಳೆ, ಧೀರಾಜ್ , ಸಾಗರ್ , ರಮೇಶ್ ನರಶಸ್ಯ, ಹುಣಸೂರಿನ ಸಂತೋಷ್, ಹಾಗೂ ರೋಟರಿ ಶಾಲೆಯ ಮುಖ್ಯ ಶಿಕ್ಷಕ ಹರೀಶ್ ಬಿ. ಶಿಕ್ಷಕರಾದ ಷರೀಪ್, ಅಕ್ಮಲ್, ಪ್ರಸನ್ನ ಇದ್ದರು.