Home ಜಿಲ್ಲೆ ಮೈಸೂರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣವೇ ಮೌಲ್ಯಯುತ ಶಕ್ತಿ

ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣವೇ ಮೌಲ್ಯಯುತ ಶಕ್ತಿ

ಸಂಜೆವಾಣಿ ನ್ಯೂಸ್
ಮೈಸೂರು: ಏ.09:
– ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣವೇ ಮೌಲ್ಯಯುತ ಶಕ್ತಿ ಎಂದು ಕರಾಮುವಿ ಕುಲಸಚಿವ ಪೆÇ್ರ.ಎಸ್.ಕೆ.ನವೀನ್ ಕುಮಾರ್ ಹೇಳಿದರು.
ಟೆರೇಷಿಯನ್ ಕಾಲೇಜಿನ ಮಾನವಿಕ ವಿಭಾಗ, ಐಕ್ಯೂಎಸಿ ಸಹಯೋಗದೊಂದಿಗೆ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ: ಅಂತರಶಿಸ್ತೀಯ ದೃಷ್ಟಿಕೋನಗಳು ಮತ್ತು ಸಮಕಾಲೀನ ಪ್ರಸ್ತುತತೆ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಶಿಕ್ಷಣ, ಸಂಶೋಧನೆ ಮತ್ತು ಸಾರ್ವಜನಿಕ ನೀತಿಯಲ್ಲಿ, ಭಾರತೀಯ ಸಾಂಪ್ರದಾಯಿಕ ಜ್ಞಾನವನ್ನು ಪುನರುಜ್ಜೀವನಗೊಳಿಸುವ ಮತ್ತು ಸಂಯೋಜಿಸುವ ಭಾರತೀಯ ಜ್ಞಾನ ವ್ಯವಸ್ಥೆ ಆರೋಗ್ಯ, ಪರಿಸರ, ನೈತಿಕತೆ ಮತ್ತು ಸುಸ್ಥಿರ ಜೀವನ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆಯಾಗಿದೆ ಎಂದರು.


ಹೈದರಾಬಾದ್‍ನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿವಿ ನಿರ್ದೇಶಕಿ ಪೆÇ್ರ.ಸನೀಮ್ ಫಾತಿಮಾ ಮಾತನಾಡಿ, ಭಾರತೀಯ ಶಿಕ್ಷಣ ವ್ಯವಸ್ಥೆ ಕಾಲಕಾಲಕ್ಕೆ ಬದಲಾವಣೆಯಾಗುತ್ತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ವಾತಾವರಣ ಸೃಷ್ಟಿ ಮಾಡುತ್ತಿದೆ. ಭಾರತೀಯರು ಬೌದ್ಧಿಕವಾಗಿ ಸಾಕಷ್ಟು ಶಕ್ತಿಯುತರಾಗಿದ್ದಾರೆ. ಇದರಿಂದ ದೇಶದ ಅಭಿವೃದ್ಧಿಗೆ ಪೂರಕ ವಾತಾವರಣ ಸಿಗುತ್ತಿದೆ ಎಂದರು.
ಸ್ಥಳೀಯ ಜ್ಞಾನ ವ್ಯವಸ್ಥೆ ಸಂರಕ್ಷಿಸಲು ಮತ್ತು ಉತ್ತೇಜಿಸಲು ಅಂತರಶಿಸ್ತೀಯ ಸಂಶೋಧನಗಳು ಅಗತ್ಯ. ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಭಾರತದ ಶಾಸ್ತ್ರೀಯ ಪರಂಪರೆ ಅನ್ವೇಷಿಸಲು ವಿದ್ಯಾರ್ಥಿಗಳು ಮತ್ತು ವಿದ್ವಾಂಸರನ್ನು ಸಂಶೋಧನೆ ಮಾಡಬೇಕು ಎಂದು ಹೇಳಿದರು.


ಟೆರೇಷಿಯನ್ ಕಾಲೇಜಿನ ಪ್ರಾಂಶುಪಾಲ ಡಾ.ರೋಹಿಣಿ ಮಾತನಾಡಿದರು. ತಮಿಳುನಾಡು ತಿರುವಾರೂರಿನ ಕೇಂದ್ರೀಯ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಾಂಜಲ್ ಗಾರ್ಗ್ ಅವರು, ಮಾನವ, ಸಸ್ಯಗಳು ಮತ್ತು ಪ್ರಾಣಿಗಳಿಗೆ ಆರೋಗ್ಯ ರಕ್ಷಣೆಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳು ಕುರಿತು ಉಪನ್ಯಾಸ ನೀಡಿದರು.
ಟೆರೇಷಿಯನ್ ಸಂಸ್ಥೆಗಳ ವ್ಯವಸ್ಥಾಪಕಿ ಸಿಸ್ಟರ್ ಅಂಜಲಿ, ಐಕ್ಯೂಎಸಿ ಸಂಯೋಜಕ ವಿವೇಕ್ ಚಾರ್ಲ್ಸ್ ಇದ್ದರು.