ಸ್ಟ್ರೋಕ್ ಗುಣಪಡಿಸಬಹುದು: ಜಾಗೃತಿ ಕಾರ್ಯಕ್ರಮ ಯಶಸ್ವಿ

ಸಂಜೆವಾಣಿ ನ್ಯೂಸ್
ಮೈಸೂರು: ನ.11:-
ಪಾಶ್ರ್ವವಾಯು (ಸ್ಟ್ರೋಕ್) ಚಿಕಿತ್ಸೆಯಲ್ಲಿ ಸಮಯದ ಜಾಗೃತಿ ಮೂಡಿಸುವ ಸಲುವಾಗಿ, ಮೈಸೂರಿನ ಮಣಿಪಾಲ್ ಆಸ್ಪತ್ರೆಯು ‘ಮಣಿಪಾಲ್ ಹೆಲ್ತ್ ಸಮ್ಮಿಟ್’ನ ವಿಶೇಷ ಆವೃತ್ತಿಯನ್ನು ಇಂದು ಯಶಸ್ವಿಯಾಗಿ ಆಯೋಜಿಸಿತು.


ಸಮಯೋಚಿತ ಚಿಕಿತ್ಸೆ ಪಾಶ್ರ್ವವಾಯುವಿನಿಂದಾಗುವ ದುಷ್ಪರಿಣಾಮಗಳನ್ನು ಹೇಗೆ ತಡೆಯಬಹುದು ಎಂಬುದರ ಮೇಲೆ 100ಕ್ಕೂ ಅಧಿಕ ಆಸಕ್ತರು ಸೇರಿದ್ದ ಕಾರ್ಯಕ್ರಮದಲ್ಲಿ ವಿಶೇಷ ಗಮನಹರಿಸಲಾಯಿತು. ಪಾಶ್ರ್ವವಾಯುವಿನ ಲಕ್ಷಣಗಳು ಕಾಣಿಸಿಕೊಂಡ ಆರಂಭಿಕ 4.5 ಗಂಟೆಗಳ ಅವಧಿಯನ್ನು ‘ಗೋಲ್ಡನ್ ಅವರ್’ (ಸುವರ್ಣಾವಧಿ) ಎಂದು ಪರಿಗಣಿಸಲಾಗುತ್ತದೆ. ಈ ನಿರ್ಣಾಯಕ ಅವಧಿಯೊಳಗೆ ರೋಗಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಲಭ್ಯವಾದರೆ, ಸಂಭವನೀಯ ಶಾಶ್ವತ ಅಂಗವೈಕಲ್ಯವನ್ನು ತಡೆಯಬಹುದು ಮತ್ತು ಮೆದುಳಿಗೆ ಆಗುವ ಹಾನಿಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಈ ವೇಳೆ ತಜ್ಞರು ಒತ್ತಿ ಹೇಳಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಡಾ. ಮಕ್ಸೂದ್ ಅಹ್ಮದ್ ಎ. ಆರ್., ಸೀನಿಯರ್ ಕನ್ಸಲ್ಟಂಟ್ ? ನ್ಯೂರೊಸರ್ಜರಿ, ಸೆರೆಬ್ರೊವಾಸ್ಕುಲರ್ ಮತ್ತು ಎಂಡೋವಾಸ್ಕುಲರ್ ಸರ್ಜರಿ, ಅವರು, ಪಾಶ್ರ್ವವಾಯು ಚಿಕಿತ್ಸೆಯಲ್ಲಿನ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಬೆಳಕು ಚೆಲ್ಲಿದರು. ದೇಹಕ್ಕೆ ಅತಿ ಕಡಿಮೆ ಹಾನಿ ಉಂಟುಮಾಡುವ ಎಂಡೋವಾಸ್ಕುಲರ್ ಚಿಕಿತ್ಸಾ ವಿಧಾನಗಳು, ವಿಶೇಷವಾಗಿ ಇಸ್ಕೆಮಿಕ್ ಸ್ಟ್ರೋಕ್ (ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಪಾಶ್ರ್ವವಾಯು) ಪೀಡಿತರಲ್ಲಿ ಚೇತರಿಕೆಯ ಸಾಧ್ಯತೆಗಳನ್ನು ಹೇಗೆ ಹೆಚ್ಚಿಸಿವೆ ಎಂಬುದನ್ನು ಅವರು ವಿವರಿಸಿದರು. ಆದರೆ, ರೋಗಿಯು ಸಕಾಲದಲ್ಲಿ ಆಸ್ಪತ್ರೆ ತಲುಪಿದಾಗ ಮಾತ್ರ ಈ ಚಿಕಿತ್ಸೆಗಳು ಫಲಪ್ರದವಾಗುತ್ತವೆ ಎಂದು ಅವರು ಸ್ಪಷ್ಟಪಡಿಸಿದರು.


ಕಾರ್ಯಕ್ರಮದಲ್ಲಿ ಪೌಷ್ಟಿಕಾಂಶದ ಪ್ರಮುಖ ತಡೆಗಟ್ಟುವ ಪಾತ್ರದ ಬಗ್ಗೆ ವಿವರಿಸಿದ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಡಯಟೆಟಿಕ್ಸ್ ಮತ್ತು ಪೌಷ್ಟಿಕಾಂಶ ತಜ್ಞೆ ಆಯೇಷಾ ಷರೀಫ್ ಅವರು, ನಮ್ಮ ಆಹಾರ ಪದ್ಧತಿಗೂ ರಕ್ತನಾಳಗಳ ಆರೋಗ್ಯಕ್ಕೂ ಇರುವ ನೇರ ಸಂಬಂಧದ ಬಗ್ಗೆ ಗಮನ ಸೆಳೆದರು. “ಹೃದಯ-ಸ್ನೇಹಿ ಮತ್ತು ಮೆದುಳು-ಸ್ನೇಹಿ ಆಹಾರ ಕ್ರಮವು ಪಾಶ್ರ್ವವಾಯುವನ್ನು ತಡೆಗಟ್ಟಲು ಇರುವ ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಮಾರ್ಗವಾಗಿದೆ ಎಂದರು.


ಕಾರ್ಯಕ್ರಮದ ಕೊನೆಯಲ್ಲಿ ಸಂವಾದ ಗೋಷ್ಠಿ ಏರ್ಪಡಿಸಲಾಗಿತ್ತು. ಪಾಶ್ರ್ವವಾಯು ಚಿಕಿತ್ಸೆಯ ನಿರ್ಣಾಯಕ ಕಾಲಮಿತಿ, ತಡೆಗಟ್ಟುವಿಕೆಗಾಗಿ ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಡುಗಳು ಮತ್ತು ಚೇತರಿಕೆಯ ವಿವಿಧ ಮಾರ್ಗಗಳ ಕುರಿತು ಸಭಿಕರು ಕೇಳಿದ ಹಲವಾರು ಪ್ರಶ್ನೆಗಳಿಗೆ ತಜ್ಞ ವೈದ್ಯರ ತಂಡವು ಸಮಗ್ರವಾಗಿ ಉತ್ತರಿಸಿತು. ಈ ಸಂವಾದವು ಸಾರ್ವಜನಿಕರಲ್ಲಿ ಪಾಶ್ರ್ವವಾಯುವಿನ ಕುರಿತು ಇದ್ದ ಅನೇಕ ಅನುಮಾನಗಳನ್ನು ನಿವಾರಿಸಲು ಸಹಕಾರಿಯಾಯಿತು.