Home ಜಿಲ್ಲೆ ಮಂಗಳೂರು ಸಹಕಾರಿ ಬ್ಯಾಂಕ್ ಗಳು ಗ್ರಾಮೀಣ ಪ್ರದೇಶದ ಜನರಿಗೆ ಹತ್ತಿರವಾಗುತ್ತಿದೆ: ಡಾ.ರಾಜೇಂದ್ರ ಕುಮಾರ್

ಸಹಕಾರಿ ಬ್ಯಾಂಕ್ ಗಳು ಗ್ರಾಮೀಣ ಪ್ರದೇಶದ ಜನರಿಗೆ ಹತ್ತಿರವಾಗುತ್ತಿದೆ: ಡಾ.ರಾಜೇಂದ್ರ ಕುಮಾರ್

ಕರಿಂಜೆ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರೋಪ
ಮೂಡುಬಿದಿರೆ : ವಾಣಿಜ್ಯ ಬ್ಯಾಂಕುಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಸಹಕಾರಿ ಬ್ಯಾಂಕುಗಳು ಗ್ರಾಮೀಣ ಪ್ರದೇಶದ ಜನರಿಗೆ ಹತ್ತಿರವಾಗುತ್ತಿವೆ. ಗ್ರಾಮದ ಕೃಷಿಕರು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರಿಗೆ ಅವರವರ ಸಾಲ ಮರುಪಾವತಿಯ ಇಲ್ಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ನೀಡಲು ಸಹಕಾರಿ ಬ್ಯಾಂಕ್ ಬದ್ಧವಾಗಿದೆ ಎಂದು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ’ಸಹಕಾರ ರತ್ನ’ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ನೆತ್ತೋಡಿ- ಮಾರೂರಿನ ಎ.ಪಿ.ಗಾರ್ಡನ್ ನಲ್ಲಿ ಶನಿವಾರ ನಡೆದ ಕರಿಂಜೆ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಕೋಡೆಯ ಸಹಕಾರಿ ಸಂಘಕ್ಕೆ ೧೦೦ವರ್ಷ ತುಂಬಿದ ಸವಿ ನೆನಪಿಗಾಗಿ ೧೦೦ ಕೋಟಿಗೂ ಅಧಿಕ ವ್ಯವಹಾರದ ಯೋಜನೆಯನ್ನು ರೂಪಿಸಿಕೊಳ್ಳಿ ಅದು ಕೆಲವೇ ವಷ೯ಗಳಲ್ಲಿ ಯಶಸ್ವಿಯಾಗಲಿದ್ದು ಇದಕ್ಕೆ ಆಡಳಿತ ಮಂಡಳಿಯವರು ಶ್ರಮಿಸಬೇಕಾಗಿದೆ ಎಂದರು.
ದ. ಕ ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ ದ. ಕ. ಜಿಲ್ಲೆ ಹಲವು ಸಾಧ್ಯತೆಗಳ ಸಾಗರ. ಇಲ್ಲಿ ಉತ್ತಮ ಅವಕಾಶಗಳಿವೆ, ಯೋಜನೆಗಳಿವೆ. ಸಹಕಾರಿ ಕ್ಷೇತ್ರವನ್ನು ಹೊಸ ಮಾಡೆಲ್ ಆಗಿ ಸೃಷ್ಟಿಸುವ ಅವಶ್ಯಕತೆಯಿದ್ದು ಅದಕ್ಕಾಗಿ ಕೃತಕ ಹವಾಮಾನ ನಿಯಂತ್ರಿತ ಮನೆಯನ್ನು ನಿಮಿ೯ಸಿ ಅದರಲ್ಲಿ ಮಹಿಳೆಯರನ್ನು ವಿನಿಯೋಗಿಸಿಕೊಂಡು ತರಕಾರಿ ಬೆಳೆಗಳನ್ನು ಮಾಡಿ ಅದನ್ನು ಹೊರ ದೇಶಗಳಿಗೆ ರಫ್ತು ಮಾಡುವ ಕೆಲಸವನ್ನು ಮಾಡಿದರೆ ಮಹಿಳೆಯರು ಸ್ವಾವಲಂಬನೆಯೊಂದಿಗೆ ಬದುಕಲು ದಾರಿ ತೋರಿಸಿದಂತ್ತಾಗುತ್ತದೆ ಎಂದರು.
ಕರಿಂಜೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶ್ವಿನ್ ಜೊಸ್ಸಿ ಪಿರೇರಾ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶಾಲೆಟ್ ಪಿಂಟೊ ಅವರು ಸಹಾಯಹಸ್ತ ವಿತರಣೆ ಮಾಡಿದರು.
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ತಾಕೊಡೆ ಪವಿತ್ರ ಶಿಲುಬೆಯ ದೇವಾಲಯದ ಧರ್ಮಗುರುಗಳಾದ ರೆ.ಫಾ.ರೋಹನ್ ಲೋಬೋ, ಹನ್ನೆರಡುಕವಲು ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಸದಾಶಿವ ಭಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬ್ಯಾಂಕ್ ವತಿಯಿಂದ ಎಂ. ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಎಡ್ವಿನ್ ಡಿಸೋಜ, ನಿದೇ೯ಶಕರುಗಳಾದ ರತ್ನಾಕರ ಶೆಟ್ಟಿ, ಶೇಖರ ಎಂ., ದಿವಾಕರ, ಜೋನ್ ರೇಗೋ, ಪೂವಪ್ಪ ಎಂ. ಅಂಚನ್, ಜಯಶ್ರೀ ಎಸ್., ಪಾವ್ಲಿನ್ ಪ್ಲೋಸಿ ಪಿಂಟೋ, ಮೇಲ್ವಿಚಾರಕರಾದ ಸಂಜಯ್ ಅತಿಕಾರಿ ಉಪಸ್ಥಿತರಿದ್ದರು. ನಿರ್ದೇಶಕರಾದ ಜೋಯ್ಲಸ್ ಡಿ’ಸೋಜ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫ್ರಾನ್ಸಿಸ್ ಮೆಂಡೋನ್ಸ ವರದಿ ನೀಡಿದರು. ನಿರ್ದೇಶಕ ರೋಹಣ್ ಕಡೋ೯ಜ ಅವರು ಅಶ್ವಿನ್ ಜೊಸ್ಸಿ ಪಿರೇರಾ ಮತ್ತು ಮಾಜಿ ಅಧ್ಯಕ್ಷರುಗಳನ್ನು ಪರಿಚಯಿಸಿದರು. ಸುಹಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಿದೇ೯ಶಕ ರೆಕ್ಸನ್ ಪಿಂಟೋ ವಂದಿಸಿದರು.