ಸರ್ಕಾರಿ ಶಾಲೆಗೆ ಶಾಸಕ ದಿಢೀರ್ ಭೇಟಿಸಂಜೆವಾಣಿ ವಾರ್ತೆ

ಹನೂರು: ಜೂ.7:- ತಾಲೂಕಿನ ಪಳನಿಮೇಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಎಂ.ಆರ್ ಮಂಜುನಾಥ್ ದಿಢೀರ್ ಭೇಟಿ ನೀಡಿ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಹನೂರು ಶೈಕ್ಷಣಿಕ ವಲಯದ ಪಳನಿ ಮೇಡು ಗ್ರಾಮದ ಶಾಲೆಗೆ ಭೇಟಿ ನೀಡಿ ಇಲ್ಲಿನ ಮಕ್ಕಳಿಗೆ ದಿನನಿತ್ಯದ ಬಿಸಿಯೂಟ, ಮೊಟ್ಟೆ , ರಾಗಿ ಮಾಲ್ಟ್, ಬಾಳೆಹಣ್ಣು ನೀಡುತ್ತಿದ್ದಾರೆಯೇ ಎಂದು ವಿದ್ಯಾರ್ಥಿಗಳನ್ನು ಶಾಸಕ ಎಂ.ಆರ್ ಮಂಜುನಾಥ್ ಪ್ರಶ್ನೆ ಮಾಡಿದರು. ಈ ವೇಳೆ ವಿದ್ಯಾರ್ಥಿಗಳು ಪ್ರತಿದಿನ ಮೊಟ್ಟೆ ಊಟ ಕೊಡುತ್ತಿರುವುದಾಗಿ ತಿಳಿಸಿದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಪ್ರತಿಯೊಬ್ಬರು ಈ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಚೆನ್ನಾಗಿ ಓದಿ ತಂದೆ ತಾಯಿಗಳಿಗೆ, ಪಾಠ ಮಾಡುವ ಶಿಕ್ಷಕರಿಗೆ ಕೀರ್ತಿ ತಂದುಕೊಡಬೇಕು ಎಂದು ಶಾಸಕರು ಶಾಲೆಯ ಮಕ್ಕಳಿಗೆ ಸಲಹೆ ನೀಡಿದರು.

ಗ್ರಾಮಸ್ಥರು ಕೆಲವು ಕಟ್ಟಡಗಳು ಶಿಥಿಲವಾಗಿದ್ದು ಬಳಕೆಗೆ ಯೋಗ್ಯವಿಲ್ಲ, ವಿದ್ಯಾರ್ಥಿಗಳಿಗೆ ಮಳೆಗಾಲದಲ್ಲಿ ತೊಂದರೆಯಾಗುತ್ತಿದೆ, ಹೊಸ ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಮಂಜುನಾಥ್ ಅವರು ಪ್ರತಿಕ್ರಿಯಿಸಿ ವ್ಯಕ್ತಿಗಳ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಹೊಸ ಕೊಠಡಿಗೆ ಹೆಚ್ಚಿನ ಅನುದಾನ ನೀಡುವ ಭರವಸೆಯನ್ನು ನೀಡಿ ಈಗಾಗಲೇ ಶಿಥಿಲಗೊಂಡಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಧ್ಯಾಹ್ನದ ಬಿಸಿ ಊಟದ ಗುಣಮಟ್ಟ ಪರಿಶೀಲಿಸಲು ಶಾಸಕ ಎಂ.ಆರ್ ಮಂಜುನಾಥ್ ವಿದ್ಯಾರ್ಥಿಗಳ ಜೊತೆ ಕುಳಿತು ಬಿಸಿಯೂಟ ಸವಿದು ಸರಳತೆಯನ್ನು ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.