Home Uncategorized ಶ್ರೀ ವಿದ್ಯಾರಣ್ಯರ ಜಯಂತಿಯನ್ನು ರಾಜ್ಯದಲ್ಲಿ ಸರ್ಕಾರದ ವತಿಯಿಂದ ನಡೆಸಬೇಕು: ಸುರೇಶ್ ಎನ್ ಋಗ್ವೇದಿ

ಶ್ರೀ ವಿದ್ಯಾರಣ್ಯರ ಜಯಂತಿಯನ್ನು ರಾಜ್ಯದಲ್ಲಿ ಸರ್ಕಾರದ ವತಿಯಿಂದ ನಡೆಸಬೇಕು: ಸುರೇಶ್ ಎನ್ ಋಗ್ವೇದಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.04-
ಕರ್ನಾಟಕ ರಾಜ್ಯ ಸಂಸ್ಥಾಪನಾಚಾರ್ಯ ಶ್ರೀ ವಿದ್ಯಾರಣ್ಯರ ಜಯಂತಿಯನ್ನು ರಾಜ್ಯದಲ್ಲಿ ಸರ್ಕಾರದ ವತಿಯಿಂದ ನಡೆಸಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.


ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ನಡೆದ ಜಗದ್ಗುರು, ತತ್ವಜ್ಞಾನಿ ವಿದ್ಯಾರಣ್ಯ ಮಹರ್ಷಿಗಳ ದಿವ್ಯ ಸಂದೇಶಗಳು ಮತ್ತು ಕೊಡುಗೆಗಳ ಕುರಿತು ಮಾತನಾಡುತ್ತಾ 13ನೇ ಶತಮಾನದಲ್ಲಿ ಹರಿಹರ ಮತ್ತು ಬುಕ್ಕರಾಯರ ಮೂಲಕ ಕನ್ನಡ ಸಾಮ್ರಾಜ್ಯವನ್ನು ಸ್ಥಾಪಿಸಿ ಇಡೀ ದಕ್ಷಿಣ ಭಾರತದಲ್ಲಿ ಕನ್ನಡ ಸಂಸ್ಕೃತಿಯನ್ನು ಮತ್ತು ಪರಂಪರೆಯನ್ನು ಸಂರಕ್ಷಿಸಿ ಭಾರತೀಯ ಸನಾತನ ಧರ್ಮವನ್ನು ಉಳಿಸಿ ಬೆಳೆಸಿದ ಕೀರ್ತಿ ಶ್ರೀ ವಿದ್ಯಾರಣ್ಯರಿಗೆ ಸಲ್ಲುತ್ತದೆ.ವಿಜಯನಗರ ಸಾಮ್ರಾಜ್ಯ ವಿಶ್ವದಲ್ಲಿ ಮರೆಯಲಾಗದ ಸಾಮ್ರಾಜ್ಯವೆಂದು ಪ್ರಸಿದ್ಧಿಯಾಗಿದೆ. ಆಡಳಿತ ಸೇವೆ ಆಧ್ಯಾತ್ಮ,ಧರ್ಮ,ವಿಜ್ಞಾನ, ತಂತ್ರಜ್ಞಾನ,ಸಾಹಿತ್ಯ, ಕಲೆ ವಾಸ್ತುಶಿಲ್ಪ,ಚಿತ್ರಕಲೆ, ನೃತ್ಯ ಕಲೆ ಹೀಗೆ ಹಲವು ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯ ಮೂಲಕ ಇಡೀ ವಿಶ್ವಕ್ಕೆ ಪ್ರಸಿದ್ಧವಾದ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಲು ಮಾರ್ಗದರ್ಶನವನ್ನು ನೀಡಿ ಕರ್ನಾಟಕ ರಾಜ್ಯ ಸಂಸ್ಥಾಪನಾಚಾರ್ಯ ಎಂಬ ಗೌರವಕ್ಕೆ ಪಾತ್ರರಾದ ವಿದ್ಯಾರಣ್ಯದ ಜಯಂತಿ ಇಡೀ ರಾಜ್ಯದ ಎಲ್ಲೆಡೆ ವೈಭವದಿಂದ ನಡೆಯುವ ಮೂಲಕ ಸಂಸ್ಕೃತಿ ಪರಂಪರೆಯ ದಿವ್ಯ ಸಂದೇಶಗಳು ತಲಪಬೇಕು.

ಭಾರತೀಯ ಸನಾತನ ಧರ್ಮದ ದಿವ್ಯ ಶಕ್ತಿ ಕೇಂದ್ರವಾದ ಶೃಂಗೇರಿಯ ಶ್ರೀ ಶಾರದಾ ಪೀಠದ 12ನೇ ಜಗದ್ಗುರುವಾಗಿ ವೇದಗಳಿಗೆ ವ್ಯಾಖ್ಯಾನವನ್ನು ನೀಡಿದ ವಿದ್ಯಾರಣ್ಯರು ಸರ್ವ ದರ್ಶನ ಸಂಗ್ರಹ, ಪಂಚದಶಿ,ಕಾಲ ಮಾಧವ ಮುಂತಾದ ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಡೀ ಜಗತ್ತಿಗೆ ಮಾರ್ಗದರ್ಶಕ ದಿವ್ಯ ಅನುಭವ ಸಂದೇಶಗಳನ್ನು, ನುಡಿಗಳನ್ನು, ಆಶೀರ್ವಾದವನ್ನು ಮಾಡಿರುವ ವಿದ್ಯಾರಣ್ಯರ ಸಮಗ್ರ ಸಾಹಿತ್ಯ ಮತ್ತು ಚಿಂತನೆಗಳು ಪ್ರಕಟವಾಗಿ ಕನ್ನಡ ನಾಡಿಗೆ ನೀಡುವ ಕಾರ್ಯ ಆಗಬೇಕಿದೆ ಎಂದು ತಿಳಿಸಿದರು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಮೂಲಕ ಕನ್ನಡಿಗರ ಸಾಹಿತ್ಯ, ಕಲೆ,ಸಂಸ್ಕøತಿ, ಪರಂಪರೆ, ವಾಸ್ತುಶಿಲ್ಪದ ಮಹತ್ವವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಮಹಾನ್ ಚಿಂತಕರು, ಸಾಹಿತಿಗಳು, ಜಗದ್ಗುರುಗಳಾದ ವಿದ್ಯಾರಣ್ಯರ ಜಯಂತಿಯ ಮೂಲಕ ಯುವ ಜನಾಂಗಕ್ಕೆ ಮಹರ್ಷಿಗಳ ಸಾಧನೆ ಹಾಗೂ ಮಾರ್ಗದರ್ಶನಗಳ ಸಂದೇಶಗಳನ್ನು ತಿಳಿಸಲು ಪ್ರತಿವರ್ಷ ವಿದ್ಯಾರಣ್ಯರ ಜಯಂತಿ ಆಚರಿಸುವ ಸಂಪ್ರದಾಯವನ್ನು ಜಾರಿಗೆ ತರುವ ಕಾರ್ಯವನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ಸದೃಢ ಕರ್ನಾಟಕವನ್ನು ನಿರ್ಮಿಸಬಹುದು ಎಂದು ತಿಳಿಸಿದರು.


ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಎಲ್.ಶಿವಲಿಂಗ ಮೂರ್ತಿರವರು ಮಾತನಾಡಿ, ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯರ ಆಡಳಿತ ವಿಶ್ವಕ್ಕೆ ಮಾದರಿ. ಕಲೆ, ಸಂಗೀತ, ಸಾಹಿತ್ಯಕ್ಕೆ ಮತ್ತೊಂದು ಹೆಸರೇ ವಿಜಯನಗರ ಸಾಮ್ರಾಜ್ಯ. ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಮೂಲ ಕಾರಣಕರ್ತರೆ ಜಗದ್ಗುರು ಶ್ರೀ ವಿದ್ಯಾರಣ್ಯರು. ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿಗಳು, ಚಿಂತಕರು, ದಾರ್ಶನಿಕರು, ಆಚಾರ್ಯರು ಸರ್ವ ಕ್ಷೇತ್ರಗಳ ಸಾಧಕರ ಪರಿಚಯ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರಣ್ಯರ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಬಿಕೆ ಆರಾಧ್ಯ ಪ್ರಾಸ್ಥವಿಕವಾಗಿ ಮಾತನಾಡಿ, ಆಧ್ಯಾತ್ಮಿಕ ಚಿಂತಕರು ಸಂಸ್ಕೃತಿಯ ಪ್ರೇರಕರು, ಧರ್ಮದ ಉಳಿವಿಗಾಗಿ ಸರ್ವ ಮಾರ್ಗದರ್ಶನ ನೀಡಿದ ವಿದ್ಯಾರಣ್ಯರ ನುಡಿಗಳು ನಮಗೆಲ್ಲರಿಗೂ ಮಾರ್ಗದರ್ಶನವಾಗಿದೆ. ಪ್ರತಿ ಕನ್ನಡಿಗರು ವಿಜಯನಗರ ಸಾಮ್ರಾಜ್ಯದ ಪೂರ್ಣ ಇತಿಹಾಸವನ್ನು ತಿಳಿಯಬೇಕು ಎಂದು ಆಶಿಸಿದರು.


ಕಾರ್ಯಕ್ರಮದಲ್ಲಿ ಕುಮಾರ್, ಸುರೇಶ್, ಮುರುಗೇಶ್, ದೊಡ್ಡರಾಜು, ಸಿದ್ದೇಶ್, ಗಣೇಶ್, ಮನೋಜ್, ಹರಿಹರನ್, ಯೋಗೀಶ್, ವೇದಾಂತ ಮುಂತಾದವರು ಇದ್ದರು.