
ಸಂಜೆವಾಣಿ ನ್ಯೂಸ್
ಮೈಸೂರು: ಫೆ.25:- ಕ್ಷೇತ್ರದಲ್ಲಿನ ವಿವಿಧ ಕೊಳಗೇರಿ ಪ್ರದೇಶ ನಿವಾಸಿಗಳಿಗೆ ಜೆಎನ್ ನರ್ಮ್ಬಿ.ಎಸ್.ಯು.ಪಿ. ಯೋಜನೆಯಡಿ ಏಕಲವ್ಯನಗರದಲ್ಲಿ ನಿರ್ಮಿಸಲಾಗಿರುವ ಮನೆಗಳ ಪೈಕಿ 22 ಮನೆಗಳನ್ನು ಫಲಾನುಭವಿಗಳಿಗೆ ಲಾಟರಿ ಮುಖಾಂತರ ಶಾಸಕ ಕೆ.ಹರೀಶ್ ಗೌಡ ಹಂಚಿಕೆ ಮಾಡಿದರು.
ಬಳಿಕ ಮಾತನಾಡಿ ಏಕಲವ್ಯನಗರ ಬಡಾವಣೆಯಲ್ಲಿ ಜೆ.ಎನ್.ನರ್ಮ್ ಬಿ.ಎಸ್.ಯು.ಪಿ. ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ಜಿ+3 ಮಾದರಿ ವಸತಿ ಸಮುಚ್ಛಯಗಳಲ್ಲಿ ಖಾಲಿಯಿರುವ ಮನೆಗಳನ್ನು ಹಂಚಿಕೆ ಮಾಡಲು ನಿಯಮಾನುಸಾರ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಸುಮಾರು ವರ್ಷಗಳಿಂದ ಹಂಚಿಕೆ ಮಾಡದ ಕಾರಣ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡು, ಈ ದಿನ ಹಂಚಿಕೆ ಮಾಡಿರುವ 22 ಫಲಾನುಭವಿಗಳಲ್ಲದೆ, ಉಳಿಕೆ ಇರುವ ಮನೆಗಳನ್ನು ಸಹ ಫಲಾನುಭವಿಗಳ ಪಟ್ಟಿಯಲ್ಲಿರುವಂತೆ ಪರಿಶೀಲಿಸಿ ಲಾಟರಿ ಮುಖಾಂತರ ಅವರಿಗೂ ಸಹ ಹಂಚಿಕೆ ಮಾಡಲು ಅಗತ್ಯ ಕ್ರಮವಹಿಸಲು ಸೂಚಿಸಿದರು.
ಮನೆಗಳನ್ನು ಪಡೆದುಕೊಂಡಿರುವ ಫಲಾನುಭವಿಗಳು ಹಂಚಿಕೆಯಾಗಿರುವ ಮನೆಗಳಿಗೆ ನಿಗಧಿಪಡಿಸಿದ ಹಣವನ್ನು ಪಾವತಿಸಿ, ಎಲ್ಲಾ ದಾಖಲೆಗಳನ್ನು ಪಡೆದುಕೊಂಡು, ಹಂಚಿಕೆಯಾಗಿರುವ ಮನೆಗಳಲ್ಲಿಯೇ ವಾಸಿಸಬೇಕು, ಅದನ್ನು ಇನ್ನೊಬ್ಬರಿಗೆ ಬಾಡಿಗೆ, ಭೋಗ್ಯ ಹಾಕಿ ಪುನಃ ಕೊಳಗೇರಿಗಳಲ್ಲಿ ವಾಸಿಸಬಾರದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಿಕ ಅಭಿಯಂತರ ಮಹಮ್ಮದ್ ಜಫ್ರುಲ್ಲಾ, ಸಹಾಯಕ ಕಾರ್ಯಪಾಲಿಕ ಅಭಿಯಂತರ ಜಿ.ಎಸ್.ರಾಮಚಂದ್ರ, ಸಹಾಯಕ ಅಭಿಯಂತರ ಜೆ.ಝಾನ್ಸಿ ರಾಯ್, ದೇವರಾಜ ಬ್ಲಾಕ್ ಅಧ್ಯಕ್ಷ ಡಿ.ನಾಗಭೂಷಣ್, ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ಸ್ಥಳೀಯ ಮುಖಂಡರಾದ ಷಣ್ಮುಗಂ, ವಾರ್ಡ್ ಅಧ್ಯಕ್ಷರಾದ ಶ್ರೀ ಕುಮಾರ್, ತಂಬಿ ಇನ್ನಿತರರು ಉಪಸ್ಥಿತರಿದ್ದರು.






























