ವೆನ್ಲಾಕ್ ಐಸಿಯು ಘಟಕ ಅಭಿವೃದ್ಧಿಪಡಿಸದೆ ನುಣುಚುವುದು ದುರಂತ: ವೇದವ್ಯಾಸ್ ಕಾಮತ್

ಮಂಗಳೂರು- ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಘಟಕಗಳ ಸಂಖ್ಯೆಗಳು ಕಡಿಮೆಯಿರುವ ಕಾರಣ ತುರ್ತು ಸಂದರ್ಭದಲ್ಲಿ ರೋಗಿಗಳು ಪರದಾಡುವಂತಾಗಿದೆ. ದಯವಿಟ್ಟು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕ್ಷೇತ್ರದ ಜವಾಬ್ದಾರಿಯುತ ಶಾಸಕನಾಗಿ ಆರೋಗ್ಯ ಸಚಿವರಿಗೆ ಪತ್ರ ಬರೆದು ಪತ್ರಿಕಾ ಹೇಳಿಕೆ ನೀಡಿದ್ದಕ್ಕೆ ಕೆಲವು ಕಾಂಗ್ರೆಸ್ ನಾಯಕರು ಬಾಲಿಶ ಹೇಳಿಕೆ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ದುರಂತ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ವೆನ್ಲಾಕ್ ಆಸ್ಪತ್ರೆಗೆ ನಮ್ಮ ಜಿಲ್ಲೆ ಮಾತ್ರವಲ್ಲದೆ, ಸುತ್ತಮುತ್ತಲಿನ ೯-೧೦ ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಹಾಗೆ ಬಂದ ಅನೇಕರು ಒಂದು ಐಸಿಯು ಬೆಡ್ ದೊರಕಿಸಿಕೊಡಿ ಎಂದು ಮನವಿ ಮಾಡುತ್ತಾರೆ. ಆ ವೇಳೆ ಆಸ್ಪತ್ರೆಯ ಸಂಬಂಧಪಟ್ಟವರಿಗೆ ಕರೆ ಮಾಡಿದಾಗ ಬಹುತೇಕ ಬಾರಿ ಬೆಡ್ ಖಾಲಿ ಇಲ್ಲ ಎಂಬ ಉತ್ತರವೇ ಬರುತ್ತದೆ. ಇದು ಹೆಚ್ಚಿನ ಶಾಸಕರ ಅನುಭವಕ್ಕೂ ಬಂದಿದೆ. ಆಸ್ಪತ್ರೆಯವರ ಈ ಅಸಹಾಯಕತೆಯನ್ನು ನೋಡಿಯೇ ಇಲ್ಲಿನ ಐಸಿಯು ಘಟಕಗಳ ಸಂಖ್ಯೆಯನ್ನು ಕನಿಷ್ಠ ೨೦೦ ಕ್ಕೆ ಹೆಚ್ಚಿಸಿ ಎಂದು ನಾನು ಸರ್ಕಾರಕ್ಕೆ ಆಗ್ರಹಿಸಿದ್ದು. ಇಂತಹ ಸೂಕ್ಷ್ಮ ವಿಚಾರದಲ್ಲೂ ರಾಜಕೀಯವನ್ನು ಹುಡುಕುವ ಕೆಲವು ಕಾಂಗ್ರೆಸ್ ನಾಯಕರಿಗೆ ಬಡ ರೋಗಿಗಳ ಸಮಸ್ಯೆ ಅರ್ಥವಾಗುವುದಿಲ್ಲ ಎಂದರು.೨೦೧೮ ರಲ್ಲಿ ನಾನು ಶಾಸಕನಾದಾಗ ಕೇವಲ ೧೬ ಐಸಿಯು ಇದ್ದವು. ಜೊತೆಗೆ ಈ ಹಿಂದೆ ಕೇವಲ ೫೦ ರಷ್ಟಿದ್ದ ಆಕ್ಸಿಜನ್ ಬೆಡ್ ಗಳನ್ನು ೨೫೦ ಕ್ಕೂ ಏರಿಸಲಾಗಿತ್ತು. ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು ಈ ನಿಟ್ಟಿನಲ್ಲಿ ಏನು ಕೊಡುಗೆ ನೀಡಿದ್ದಾರೆ? ಒಂದಾದರೂ ಹೆಚ್ಚುವರಿ ಐಸಿಯು ನಿರ್ಮಿಸಿದ್ದಾರಾ? ಎಂಬುದನ್ನು ಕಾಂಗ್ರೆಸಿನ ವಿಧಾನ ಪರಿಷತ್ ಸದಸ್ಯರು ಬಹಿರಂಗ ಪಡಿಸಲಿ ಎಂದು ವೇದವ್ಯಾಸ್ ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ಸವಾಲು ಹಾಕಿದ್ದಾರೆ.