ರಸ್ತೆ ದುರಸ್ತಿ ಕ್ರಮಕ್ಕೆ ಶಾಸಕರಿಗೆ ಮನವಿ

ಶಿವಮೊಗ್ಗ,ನ.೧೧: ಪಾಲಿಕೆ ವ್ಯಾಪ್ತಿಗೆ ವಸತಿ ಬಡಾವಣೆಗಳ ಸೇರ್ಪಡೆ ಮಾಡಬೇಕೆಂದು ಕೋರಿ, ಅಬ್ಬಲಗೆರೆ ಗ್ರಾಪಂ ಅಧೀನದ ಬಸವನಗಂಗೂರು ಗ್ರಾಮ ವ್ಯಾಪ್ತಿಯ ಬಡಾವಣೆ ಪ್ರಮುಖರ ನಿಯೋಗ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯನಾಯ್ಕ್ ಅವರಿಗೆ ಮನವಿ ಪತ್ರ ಅರ್ಪಿಸಿತು.
ಕೆಹೆಚ್ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ, ನಗರದ ನೆಹರು ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಶಾರದ ಪೂರ್ಯನಾಯ್ಕ್ ಅವರನ್ನು ನಿಯೋಗ ಭೇಟಿಯಾಗಿ ವಿವಿಧ ವಿಷಯಗಳ ಕುರತಂತೆ ಸಮಾಲೋಚಿಸಿ ಮನವಿ ಪತ್ರ ಅರ್ಪಿಸಿತು.


ಬಸವನಗಂಗೂರು ಗ್ರಾಮ ಅಧೀನದ ವಸತಿ ಬಡಾವಣೆಗಳಾದ ಪ್ರೆಸ್ ಕಾಲೋನಿ, ಶ್ರೀ ಲೇಔಟ್, ಮಹಾಲಕ್ಷ್ಮೀ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ವಸತಿ ಬಡಾವಣೆಗಳು ನಗರಕ್ಕೆ ಹೊಂದಿಕೊಂಡಂತಿವೆ. ಪಾಲಿಕೆ ವ್ಯಾಪ್ತಿಗೆ ಸದರಿ ಬಡಾವಣೆಗಳು ಸೇರ್ಪಡೆಯಾದರೆ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಮುಖಂಡರು ತಿಳಿಸಿದ್ದಾರೆ.
ರಸ್ತೆ ದುರಸ್ತಿ: ಸದರಿ ಬಡಾವಣೆಗಳಲ್ಲಿ ಹಾದು ಹೋಗಿರುವ ೬೦ ಅಡಿ ಮುಖ್ಯ ರಸ್ತೆಯ ಅರ್ಧ ಭಾಗ ಡಾಂಬರೀಕರಣಗೊಂಡಿದೆ. ಉಳಿದ ಸುಮಾರು ಅರ್ಧ ಕಿ.ಮೀ. ಉದ್ದದ ರಸ್ತೆಯು, ಗುಂಡಿ ಗೊಟರು ಬಿದ್ದಿದೆ, ಜನ ವಾಹನಗಳ ಸಂಚಾರಕ್ಕೆ ಅಯೋಗ್ಯವಾಗಿದೆ. ಸದರಿ ರಸ್ತೆಯ ಡಾಂಬರೀಕರಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಮುಖಂಡರು ಮನವಿ ಮಾಡಿದರು.


ಹೈಮಾಸ್ಟ್ ಲೈಟ್: ಹಾಗೆಯೇ ಮಹಾಲಕ್ಷ್ಮೀ ಲೇಔಟ್, ಶ್ರೀ ಬಡಾವಣೆ, ಪ್ರೆಸ್ ಕಾಲೋನಿಗಳು ನಗರದ ಹೊರವಲಯದಲ್ಲಿವೆ. ನಿವಾಸಿಗಳ ಹಿತದೃಷ್ಟಿಯಿಂದ ಹೈ ಮಾಸ್ಟ್ ಲೈಟ್‌ಗಳ ಅಳವಡಿಕೆ ಮಾಡುವಂತೆ ಇದೇ ವೇಳೆ ನಿಯೋಗ ಶಾಸಕರಿಗೆ ಮನವಿ ಮಾಡಿತು. ಶಾಸಕರು ಹೇಳಿದ್ದೇನು: ಮನವಿ ಸ್ವೀಕರಿಸಿದ ನಂತರ ಶಾರದಾ ಪೂರ್ಯನಾಯ್ಕ್ ಅವರು ಮಾತನಾಡಿ, ವಸತಿ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಕುರಿತಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.


ಬಡಾವಣೆಗಳ ಮುಖ್ಯ ರಸ್ತೆ ಅಭಿವೃದ್ದಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು. ಅಗತ್ಯವಿರುವೆಡೆ ಕಾಲಮಿತಿಯೊಳಗೆ ಹೈಮಾಸ್ಟ್ ಲೈಟ್ ಅಳವಡಿಸಿ, ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನಿವಾಸಿಗಳ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಮುಖಂಡರಾದ ಗುರುಚರಣ್, ಸುನೀಲ್ ಉಪಸ್ಥಿತರಿದ್ದರು.