
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.23: ಗ್ರಾಮೀಣ ಪ್ರದೇಶದ ಯುವಕರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಯುವಕರ ವಲಸೆ ನಿಲ್ಲಬೇಕಾದರೆ ಬ್ಯಾಂಕುಗಳು ಆಸಕ್ತ ನಿರುದ್ಯೋಗಿ ಯುವಕರಿಗೆ ಅವರ ಕೌಶಲ್ಯ ಪರಿಣಿತಿಗೆ ಅನುಗುಣವಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ನೀಡುವಂತೆ ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ(ಎನ್.ಎಲ್.ಎಂ) ಅನುಷ್ಟಾನ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಯುವಕರ ವಲಸೆ ಇಂದಿನ ಬಹುದೊಡ್ಡ ಸಮಸ್ಯೆಯಾಗಿದ್ದು ಹಳ್ಳಿಗಳು ವಯೋವೃದ್ದರ ವಾಸಸ್ಥಳಗಳಾಗುತ್ತವೆ. ಜೀವನೋಪಾಯಕ್ಕಾಗಿ ನಗರ ಪ್ರದೇಶದಲ್ಲಿ ಸೆಕ್ಯೂರಟಿ ಗಾರ್ಡುಗಳಾಗಿ, ಹೋಟೆಲ್ ಮತ್ತಿತರ ಸ್ಥಳಗಳಲ್ಲಿ ರೈತರ ಮಕ್ಕಳು ಅತ್ಯಂತ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗಳ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗುತ್ತಿದೆ. ರಾಜ್ಯದಲ್ಲಿ ಸಂಪೂರ್ಣ ಕೃಷಿ ಚಟುವಟಿಕೆಗಳಿಗೆ ಮೀಸಲಾದ ತೋಟಗಾರಿಕೆ, ಕೃಷಿ, ರೇಷ್ಮೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಗಳಿವೆ. ಈ ಐದು ಇಲಾಖೆಗಳೂ ಪರಸ್ಪರ ಒಗ್ಗೂಡಿ ಸರ್ಕಾರದ ಸಹಾಯಧನ ಯೋಜನೆಯ ಮೂಲಕ ರೈತರ ಮಕ್ಕಳು ಪಶು ಸಾಕಾಣಿಕೆ, ಕುರಿ,ಕೋಳಿ, ಮೇಕೆ, ಮೊಲ, ಹಂದಿ ಸಾಕಾಣಿಕೆ, ಮೀನುಗಾರಿಕೆ, ತೋಟಗಳ ಅಭಿವೃದ್ದಿ ಮುಂತಾದ ಕೃಷಿ ಮತ್ತು ಕೃಷಿಕರಿಗೆ ಪೂರಕವಾದ ಸ್ವಯಂ ಉದ್ಯೋಗ ಕೈಗೊಳ್ಳಲು ಇಲಾಖೆಯ ಮೂಲಕ ರೂಪಿಸಿರುವ ಯೋಜನೆಗಳು ಮತ್ತು ಅವುಗಳ ಅನುಷ್ಟಾನಕ್ಕೆ ಅಗತ್ಯವಾದ ಬ್ಯಾಂಕ್ ಸಾಲ ಸೌಲಭ್ಯಗಳನ್ನು ಒದಗಿಸಿಕೊಟ್ಟರೆ ಗ್ರಾಮೀಣ ಪ್ರದೇಶದ ಆರ್ಥಿಕ ಅಭಿವೃದ್ದಿಯಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗಿಗಳ ಸಂಖ್ಯೆ ಹೆಚ್ಚಾದರೆ ನಗರ ಪ್ರದೇಶಗಳ ಮೇಲಿನ ವಲಸೆ ತಗ್ಗುತ್ತದೆಯಲ್ಲದೆ ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ಸಮಸ್ಯೆ ಪರಿಹಾರವಾಗಲಿದೆ. ಸ್ವಾವಲಂಭಿ ಯುವಕರು ದೇಶದ ಆಸ್ತಿಯಾಗಲಿದ್ದಾರೆಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪಶುಪಾಲನಾ ಉದ್ಯಮಶೀಲತೆ ಅಭಿವೃದ್ದಿ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಆದರೆ ಬ್ಯಾಂಕುಗಳ ಸಾಲನೀತಿಯಿಂದ ಕುರಿ, ಕೋಳಿ, ಹಂದಿ, ಮೇಕೆ ಮತ್ತು ಪಶುಪಾಲನೆಯಂತಹ ಉದ್ಯಮ ಸ್ಥಾಪಿಸಲು ರೈತರ ಮಕ್ಕಳು ಅಗತ್ಯ ಸಾಲ ಪಡಯಲಾಗುತ್ತಿಲ್ಲ. ಇದರ ನಿವಾರಣೆಗಾಗಿಯೇ ಇಂದು ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ರೈತರ ಮಕ್ಕಳು, ಬ್ಯಾಂಕುಗಳ ವ್ಯವಸ್ಥಾಪಕರು ಮತ್ತು ಪಶು ಪಾಲನಾ ಇಲಾಖೆಯ ಅಧಿಕಾರಿಗಳ ಮುಖಾಮುಖಿ ಸಭೆ ನಡೆಸಲಾಗುತ್ತಿದೆ. ತಾಲೂಕಿನಲ್ಲಿ 51 ಬ್ಯಾಂಕುಗಳಿವೆ. ಒಂದೊಂದು ಬ್ಯಾಂಕ್ ತಮ್ಮ ವ್ಯಾಪ್ತಿಯ ಕನಿಷ್ಠ ಐದು ಜನ ರೈತ ಉದ್ಯಮಿಗಳಿಗೆ ಅಗತ್ಯ ಸಾಲ ನೀಡಿದರೆ ವಾರ್ಷಿಕ 255 ಜನ ಯುವಕರು ಸ್ವಯಂ ಉದ್ಯೋಗ ಆರಂಭಿಸಲು ಸಹಕಾರಿಯಾಗುತ್ತದೆ. ಬ್ಯಾಂಕ್ ಮ್ಯಾನೇಜರ್ ಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ರೈತ ಯುವಕರನ್ನು ನಿರುತ್ಸಾಹಗೊಳಿಸದೆ ಅಗತ್ಯ ದಾಖಲೆಗಳಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸಿಕೊಂಡು ಸಾಲಸೌಲಭ್ಯ ಒದಗಿಸಿಕೊಡಬೇಕು. ಇದರಿಂದ ದೇಶದ ಆರ್ಥಿಕ ಪ್ರಗತಿ ಹೆಚ್ಚುತ್ತದೆಯಲ್ಲದೆ ಗ್ರಾಮೀಣ ಜನ ಸ್ವಾವಲಂಭನೆಯಿಂದ ಬದುಕಲು ಸಹಕಾರಿಯಾಗುತ್ತದೆಂದು ಶಾಸಕ ಹಚ್.ಟಿ.ಮಂಜು ಮನವಿ ಮಾಡಿದರು.
ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಸುರೇಶ್ ತಮ್ಮ ಇಲಾಖೆಯ ವತಿಯಿಂದ ದೊರಕುವ ಯೋಜನೆಗಳು ಮತ್ತು ಸಹಾಯಧನ ಸೌಲಭ್ಯಗಳ ಮಾಹಿತಿ ನೀಡಿದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣಕುಮಾರ್ ರೈತ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿ ಸಾಲ ಸೌಲಭ್ಯ ಪಡೆಯಲು ಇರುವ ನಿಯಮಾವಳಿಗಳನ್ನು ತಿಳಿಸಿದರು.
ಪುರಸಭಾ ಸದಸ್ಯ ಗಿರೀಶ್, ದಿಶಾ ಸಮಿತಿಯ ಸದಸ್ಯ ನರಸನಾಯಕ, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಟಿ.ಬಲದೇವ್,ತಾ.ಪಂ ಮಾಜಿ ಸದಸ್ಯರಾದ ಹುಲ್ಲೇಗೌಡ,ಮೋಹನ್, ಮುಖಂಡರಾದ ಚೌಡೇನಹಳ್ಳಿ ರವಿ, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಲೋಕೇಶ್, ಟೌನ್ ಘಟಕದ ಅಧ್ಯಕ್ಷೆ ಎಂ.ಕೆ.ರತಿ, ತಾಲೂಕು ಪಶು ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದೇವರಾಜು ಸಭೆಯಲ್ಲಿದ್ದರು.