ಮಂಗಳೂರಲ್ಲಿ ಬಡವರಿಗೆ ಸೂರು ನಿರ್ಮಾಣ ಬೇಡಿಕೆ ಈಡೇರಿಸಿ: ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿ ತಮಗೊಂದು ಮನೆ ನಿರ್ಮಾಣವಾಗುತ್ತದೆ ಎಂದು ೨೦೧೭ ರಿಂದಲೂ ಬಡಜನರು ಹಕ್ಕುಪತ್ರಗಳನ್ನು ಹಿಡಿದುಕೊಂಡು ಆಸೆ ಕಂಗಳಿಂದ ಕಾಯುತ್ತಿದ್ದಾರೆ. ಇದೀಗ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದ್ದು ಪ್ರಸ್ತುತ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆ ೨.೦ ರಲ್ಲಾದರೂ ಈ ಬೇಡಿಕೆ ಈಡೇರಿಸಿ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ರವರು ಗುರುವಾರ ಬೆಂಗಳೂರಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸಿದರು.ಮಂಗಳೂರಲ್ಲಿ ಹಿಂದಿನ ಶಾಸಕರು ೨೦೧೭ ರಲ್ಲೇ ೯೩೦ ಬಡ ಕುಟುಂಬಗಳಿಗೆ ಹಕ್ಕುಪತ್ರ ಕೊಟ್ಟು ತರಾತುರಿಯಲ್ಲಿ, ಕಾಮಗಾರಿಯ ಗುದ್ದಲಿ ಪೂಜೆ ಮಾಡಿ ಬಿಟ್ಟಿದ್ದರು. ಆದರೆ ಉದ್ದೇಶಿತ ಯೋಜನೆಯ ಪ್ರದೇಶವು ಡೀಮ್ಡ್ ಫಾರೆಸ್ಟ್ ಆಗಿದ್ದರಿಂದ ಸಹಜವಾಗಿ ಅರಣ್ಯ ಇಲಾಖೆ ತಡೆ ನೀಡಿ ಅಂದಿನಿಂದ ಇಂದಿನವರೆಗೆ ಬಡಕುಟುಂಬಗಳು ಹಕ್ಕು ಪತ್ರವನ್ನು ಹಿಡಿದುಕೊಂಡು ಅಲೆದಾಡುವಂತಾಗಿತ್ತು. ನಾನು ಶಾಸಕನಾದ ನಂತರ ಫಲಾನುಭವಿಗಳ ಪರವಾಗಿ ಸರ್ಕಾರ, ಅರಣ್ಯ ಇಲಾಖೆ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸತತ ಚರ್ಚೆ ನಡೆಸಿದ್ದೇನೆ. ಅಂತಿಮವಾಗಿ ನಾಲ್ಕು ವರ್ಷಗಳ ನಂತರ ಉದ್ದೇಶಿತ ಯೋಜನೆಯನ್ನು ಜಾರಿಗೆ ತರಲು ಇದ್ದ ಡೀಮ್ಡ್ ಫಾರೆಸ್ಟ್ ಸಹಿತ ಎಲ್ಲ ಅಡೆತಡೆಗಳನ್ನು ನಿವಾರಿಸಿದ್ದೇನೆ ಎಂದರು.ಇದೀಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆಯನ್ನು ಕೂಡ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಇನ್ನಾದರೂ ಈ ಬಗ್ಗೆ ಗಮನಹರಿಸಿ ಆದ್ಯತೆಯ ಮೇರೆಗೆ ಬಡವರ ಸೂರಿಗೆ ಕ್ರಮಕೈಗೊಳ್ಳಿ ಎಂದರು.
ಇದಕ್ಕೆ ಉತ್ತರಿಸಿದ ಸಚಿವ ಜಮೀರ್ ಅಹ್ಮದ್, ಶಾಸಕರು ಹೇಳಿದ್ದೆಲ್ಲವೂ ಸರಿಯಾಗಿದೆ. ಕೂಡಲೇ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.