ಬಿಪಿಎಲ್ ಪಡಿತರ ಚೀಟಿ ಪರಿಷ್ಕರಣೆ

ಬೆಂಗಳೂರು,ಆ.೧೧-ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಬಡತನ ರೇಖೆಗಿಂತ ಕೆಳಗಿನ( ಬಿಪಿಎಲ್) ಕಾರ್ಡ್ ಇರುವುದು ಕರ್ನಾಟಕದಲ್ಲೇ ೧.೨೮ ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು ೪ ಕೋಟಿ ಜನರಿದ್ದಾರೆ. ಎಪಿಎಲ್ ಅರ್ಹತೆ ಹೊಂದಿರುವವರು ಬಿಪಿಎಲ್ ಕಾರ್ಡ್ ಹೊಂದಿರುವುದೇ ಇದಕ್ಕೆ ಕಾರಣವಾಗಿದೆ ಇದನ್ನು ಮತ್ತೆ ಪರಿಷ್ಕರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ವಿಧಾನಪರಿಷತ್ ನಲ್ಲಿ ತಿಳಿಸಿದರು.


ಪ್ರಶೋತ್ತರ ಅವಧಿಯಲ್ಲಿ ಮಾತನಾಡಿದ, ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ನಾಗರಾಜ್ ಯಾದವ್, ಪಡಿತರ ಕೊಡುವ ತಂತ್ರಾಂಶದಲ್ಲಿ ಲೋಪ ಇದೆ. ಇದರಿಂದ ೧.೫ ಕೋಟಿ ಪಡಿತರ ಚೀಟಿ ಹೊಂದಿರುವವರಿಗೆ ಸಮಸ್ಯೆ ಉಂಟಾಗಿದೆ, ಪಡಿತರ ಕೊಡುವುದರಲ್ಲಿ ಅಕ್ರಮವಾಗಿದೆ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.


ಇದಕ್ಕೆ ಉತ್ತರಿಸಿದ ಸಚಿವ ಕೆ.ಹೆಚ್ ಮುನಿಯಪ್ಪ, ಮೊದಲು ತಂತ್ರಾಂಶದಲ್ಲಿ ಲೋಪ ಇತ್ತು, ಈಗ ಆ ಸಮಸ್ಯೆ ಇಲ್ಲ. ಅಲ್ಲದೇ ಪಡಿತರ ರೇಷನ್ ಕಾಳ ಸಂತೆಯಲ್ಲಿ ಮಾರಾಟ ಆಗ್ತಿರೋದು ಸತ್ಯ. ಇದನ್ನ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ. ಅನೇಕ ಕೇಸ್ ಹಾಕಲಾಗಿದೆ. ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.


ಎಪಿಎಲ್ ಕಾರ್ಡ್ ಅರ್ಹತೆ ಇರುವ ಲಕ್ಷಾಂತರ ಮಂದಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಇರುವುದು ಕರ್ನಾಟಕದಲ್ಲಿ ೭೫%. ಬಿಪಿಎಲ್ ಕಾರ್ಡ್ ಇವೆ. ೧.೨೮ ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು, ೪ ಕೋಟಿ ಜನ ಇದ್ದಾರೆ. ಈ ಹಿಂದೆ ಎಪಿಎಲ್ ಅರ್ಹತೆ ಇರೋರು ಬಿಪಿಎಲ್‌ನಲ್ಲಿ ಇದ್ದರು.

ಅದನ್ನ ಸರಿ ಮಾಡೋಕೆ ಮುಂದಾಗಿದ್ದೆವು, ಆಗ ಗಲಾಟೆ ಆಯ್ತು. ಈಗ ಮತ್ತೆ ಅದನ್ನ ಪರಿಷ್ಕರಣೆ ಮಾಡ್ತೀವಿ. ಇದಕ್ಕೆ ಎಲ್ಲಾ ಸದಸ್ಯರ ಸಹಕಾರ ಬೇಕು ಎಂದು ಮಾಹಿತಿ ನೀಡಿದರು.


ರಾಜ್ಯದಲ್ಲಿ ೫ ಮಾನದಂಡ ಇಟ್ಟುಕೊಂಡು ಬಿಪಿಎಲ್ ಕಾರ್ಡ್ ಕೊಡುತ್ತಿದ್ದೇವೆ. ಅರ್ಹತೆ ಇಲ್ಲದೇ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಇರುವವರಿಗೆ ಕಾರ್ಡ್ ರದ್ದು ಮಾಡೊಲ್ಲ. ಅವರಿಗೆ ಎಪಿಎಲ್ ಕೊಡಲಾಗುವುದು ಮಾನದಂಡಗಳನ್ನು ಸರಿಯಾಗಿ ಅನುಷ್ಠಾನ ಮಾಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.