
ಮಂಗಳೂರು-ಜೆ.ಎಫ್. ಡಿ’ಸೋಜಾ ಅತ್ತಾವರ ಎಂದೇ ಜನಪ್ರಿಯರಾಗಿರುವ ಜೋಕಿಮ್ ಫ್ರೆಡೆರಿಕ್ ಡಿ’ಸೋಜಾ ಅವರು ಮಂಗಳೂರಿನ ಅತ್ತಾವರದ ಪ್ರಸಿದ್ಧ ಬಹುಭಾಷಾ ಸಾಹಿತಿಯಾಗಿದ್ದು, ಕೊಂಕಣಿ, ಕನ್ನಡ, ಇಂಗ್ಲಿಷ್ ಹಾಗೂ ತುಳು ಸಾಹಿತ್ಯ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಇತ್ತೀಚಿನ ಮಕ್ಕಳ ಕಥಾ ಪುಸ್ತಕ ‘ಭಂಗರಸೋ ಕೊಲ್ಸೋ’ ಇಂದು ಮಂಗಳೂರಿನ ಉರ್ವಾದ ಪ್ರೆಸ್ ಕ್ಲಬ್ನಲ್ಲಿ ಕ್ಯಾಸಿಯಾ ಸಂಸ್ಥೆಯ ಶ್ರೀ ರಾನ್ ರೋಚೆ ಅವರಿಂದ ಬಿಡುಗಡೆಗೊಂಡಿತು.
ಜೆ.ಎಫ್. ಡಿ’ಸೋಜಾ ಅವರು ೧೯೬೦ರಲ್ಲಿ ಕೊಂಕಣಿ ಮಾಸಿಕ ನಿಯತಕಾಲಿಕೆ ‘ಝೇಲೋ’ ಮೂಲಕ ತಮ್ಮ ಸಾಹಿತ್ಯ ಜೀವನವನ್ನು ಆರಂಭಿಸಿದರು. ನಂತರ ‘ಮಿತ್ರ್’, ‘ಕಣ್ಣಸ್ ಹಾಗೂ ‘ವಿಶಾಲ್ ಕೊಂಕಣ್ ಸೇರಿದಂತೆ ಹಲವು ಪತ್ರಿಕೆಗಳಿಗೆ ಬರಹ ನೀಡಿದರು. ಜೆಫ್ರಿ ಕುಮಾರ್, ಜೆಪ್ಪು, ಶ್ರೀ ಜೆಫ್ರಿ ಹಾಗೂ ಜೆ.ಎಫ್. ಡಿ’ಸೋಜಾ ಅತ್ತಾವರ ಎಂಬ ವಿವಿಧ ಕಾವ್ಯನಾಮಗಳಿಂದ ಬರೆಯುತ್ತಾ, ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಗುರುತನ್ನು ಸ್ಥಾಪಿಸಿದ್ದಾರೆ.
೧೯೬೧ರಿಂದ ೨೦೦೦ರವರೆಗೆ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಅವರು, ೩೯ ವರ್ಷಗಳ ಸುದೀರ್ಘ ಸೇವೆಯ ನಂತರ ಸೂಪರಿಂಟೆಂಡೆಂಟ್ ಹುದ್ದೆಯಿಂದ ನಿವೃತ್ತರಾದರು. ವೃತ್ತಿಜೀವನದ ಜೊತೆಗೆ ಸಾಹಿತ್ಯದ ಮೇಲಿನ ಆಸಕ್ತಿಯನ್ನು ನಿರಂತರವಾಗಿ ಉಳಿಸಿಕೊಂಡ ಅವರು, ನಿವೃತ್ತಿಯ ನಂತರ ತಮ್ಮ ಸಾಹಿತ್ಯಿಕ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಿದರು. ಮಕ್ಕಳ ಕಥೆಗಳು, ಸಕಾಲಿಕ ಲೇಖನಗಳು, ಸಂಪಾದಕರಿಗೆ ಪತ್ರಗಳು ಹಾಗೂ ಕನ್ನಡ-ಇಂಗ್ಲಿಷ್ ದಿನಪತ್ರಿಕೆಗಳು ಮತ್ತು ಕೊಂಕಣಿ ವಾರಪತ್ರಿಕೆಗಳಲ್ಲಿ ಅಂಕಣ ಬರಹಗಳ ಮೂಲಕ ಸಕ್ರಿಯರಾಗಿದ್ದಾರೆ.
ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಜೆ.ಎಫ್. ಡಿ’ಸೋಜಾ ಅವರ ಕೊಡುಗೆ ವಿಶೇಷವಾದದ್ದು. ಇದುವರೆಗೆ ಅವರು ಮಕ್ಕಳ ಕಥೆಗಳ ೧೮ ಪುಸ್ತಕಗಳನ್ನು ರಚಿಸಿದ್ದಾರೆ. ಭಂಗರಾಚಿ ಮಸ್ಲಿ (ಚಿನ್ನದ ಮೀನು), ಭಂಗರಾಚಿ ಕುರಾದ್ (ಚಿನ್ನದ ಕೊಡಲಿ), ಭಂಗಾರಾಚೆ ಚಿತಾಲ್ (ಚಿನ್ನದ ಜಿಂಕೆ), ಭಂಗಾರಾಚೆ ಮೋರ್ (ಚಿನ್ನದ ನವಿಲು), ಭಂಗಾರಾಚೊ ಕೀರ್ (ಚಿನ್ನದ ಗಿಳಿ), ಭಾಂಗಾರಾಚೊ ಬುಡ್ಕುಲೊ (ಚಿನ್ನದ ಮಡಕೆ) ಹಾಗೂ ಇತ್ತೀಚೆಗೆ ಬಿಡುಗಡೆಯಾದ ಭಂಗರಸೋ ಕೊಲ್ಸೋ (ಚಿನ್ನದ ಕೊಡ) ಈ ಸರಣಿಯ ಪ್ರಮುಖ ಕೃತಿಗಳಾಗಿವೆ. ಇದಲ್ಲದೆ, ಜೀವನ ಮೌಲ್ಯಗಳನ್ನು ತಿಳಿಸುವ ‘ವೇಲಕಲಚೀನ್ ಸುತ್ರಂ’ ಹಾಗೂ ಯುವ ಓದುಗರಿಗಾಗಿ ರಚಿಸಿದ ಹಾಸ್ಯಾತ್ಮಕ ಕೃತಿ ‘ಹಸ್ಸೋಸ್ ಹಾಸೊ’ ಕೂಡ ಪ್ರಕಟಗೊಂಡಿವೆ.
ಅವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳು ಲಭಿಸಿವೆ. ೨೦೦೪ರಲ್ಲಿ ‘ಭಂಗರಾಚಿ ಮಸ್ಲಿ ಕೃತಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ೨೦೦೭ರಲ್ಲಿ ಲಂಡನ್ನ ಏoಟಿಞಚಿಟಿಈಡಿieಟಿಜs.ಛಿom ಸಂಸ್ಥೆಯಿಂದ ‘ಕೊಂಕಣ್ ಸ್ಟಾರ್ ಬಿರುದು, ೨೦೧೫ರಲ್ಲಿ ಶ್ರೀ ವಿಕ್ಟರ್ ರೊಡ್ರಿಗಸ್ ಆಂಜೆಲೋರ್ ಸ್ಮಾರಕ ಸಾಹಿತ್ಯ ಪ್ರಶಸ್ತಿ, ೨೦೧೮ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ೨೦೧೯ರಲ್ಲಿ ಕೊಂಕಣಿ ಕುಟಮ್, ಬಹ್ರೇನ್ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲೂ ಅವರು ಸಕ್ರಿಯರಾಗಿದ್ದು, ಕೊಂಕಣಿಯಲ್ಲಿ ಮಂಗಳೂರು ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆಗಳಲ್ಲಿ ಸಂಪಾದಕರಿಗೆ ೭,೦೦೦ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದಾರೆ. ಸುಮಾರು ೯೦ ತುಳು ಕವಿತೆಗಳು ‘ನಮ್ಮ ಕುಡ್ಲ ವಾಹಿನಿಯ ‘ಐತೊರೊಡ್ಡು ಐತೋರ’ ಕಾರ್ಯಕ್ರಮದಲ್ಲಿ ಪ್ರಸಾರಗೊಂಡಿವೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಕವಿ ಗೋಷ್ಠಿಗಳಲ್ಲೂ ಅವರು ಭಾಗವಹಿಸಿದ್ದಾರೆ.
ಇವರು ಮಿಲಾರ್ಚೆಮ್ ಮಿಲನ್ ಚರ್ಚ್ ಮ್ಯಾಗಜೀನ್ನ ಸಂಪಾದಕೀಯ ಮಂಡಳಿಯಲ್ಲಿ ೧೮ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಅದರಲ್ಲಿ ನಾಲ್ಕು ವರ್ಷಗಳ ಕಾಲ ಸಂಪಾದಕರಾಗಿದ್ದರು. ಜೊತೆಗೆ ಕೊಂಕಣಿ ಬರಹಗಾರರ ವೇದಿಕೆಯ ಖಜಾಂಚಿಯಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ.
ಜೆ.ಎಫ್. ಡಿ’ಸೋಜಾ ಅವರು ಬಹುಭಾಷಾ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ತಮ್ಮ ಕಥನಶೈಲಿ, ಹಾಸ್ಯ ಮತ್ತು ಚಿಂತನಾತ್ಮಕ ಬರಹಗಳ ಮೂಲಕ ಎಲ್ಲ ವಯಸ್ಸಿನ ಓದುಗರನ್ನು ಆಕರ್ಷಿಸುತ್ತಿದ್ದಾರೆ. ಅವರ ಸಾಹಿತ್ಯಿಕ ಜೀವನ ಕೊಂಕಣಿ ಸಾಹಿತ್ಯಕ್ಕೆ ದಾರಿದೀಪವಾಗಿದ್ದು, ಬರವಣಿಗೆಯ ಮೇಲಿನ ಅವರ ಜೀವಮಾನದ ಉತ್ಸಾಹಕ್ಕೆ ಸಾಕ್ಷಿಯಾಗಿದೆ.



























